ಧಾರವಾಡ:
ಕೃಷಿ ಕ್ಷೇತ್ರದ ದಿಗ್ಗಜ ಎಂದೇ ಹೆಸರು ಮಾಡಿದ್ದ, ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಎಸ್.ಎ. ಪಾಟೀಲ್ ನಿಧನ ಕೃಷಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.ವಿವಿಯಲ್ಲಿ ನಡೆದ ಡಾ.ಎಸ್.ಎ. ಪಾಟೀಲರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಮೂಲತಃ ಕಲಬುರ್ಗಿ ಅವರಾದ ಅವರು ಮಹಾನ್ ವಿಜ್ಞಾನಿ, ಶಿಕ್ಷಕ, ಆಡಳಿತಾಧಿಕಾರಿ, ಶಿಕ್ಷಣ ತಜ್ಞ ಮತ್ತು ವಿವಿ ಅಭಿವೃದ್ಧಿಗೆ ಶ್ರಮಿಸಿದ ಸಜ್ಜನ ವ್ಯಕ್ತಿ. ಅವರ ಆಡಳಿತದ ಎರಡು ಅವಧಿಯು ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ವಿಭಾಗಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸುಧಾರಿಸಿದೆ. ಧಾರವಾಡ ಕೃಷಿ ವಿವಿಯನ್ನು ಅವರು ಸಂಪೂರ್ಣವಾಗಿ ಪರಿವರ್ತಿಸಿದರು. ಸ್ವಯಂ ಸುಸ್ಥಿರ ಮತ್ತು ರೈತ ಸ್ನೇಹಿ ವಿಶ್ವವಿದ್ಯಾಲಯವನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಅವರು ಸ್ಥಾಪಿಸಿದ ಬೀಜ ಘಟಕ, ಸಾವಯವ ಕೃಷಿ ಸಂಸ್ಥೆ, ಜೈವಿಕ ತಂತ್ರಜ್ಞಾನ ಸಂಸ್ಥೆ, ಕೃಷಿ ವ್ಯವಹಾರ ಜ್ಞಾನ ಕೇಂದ್ರಗಳು ಈಗಲೂ ಶ್ರೇಷ್ಠ ಕೇಂದ್ರಗಳಾಗಿವೆ ಎಂದರು.
ಸಂತಾಪ:ಡಾ. ಎಸ್.ಎ. ಪಾಟೀಲ ಅವರ ನಿಧನಕ್ಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಸಂತಾಪ ಸಲ್ಲಿಸಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಜಗತ್ತಿನ ಮಾದರಿ ವಿವಿಯಾಗಿ ನಿರ್ಮಾಣ ಮಾಡಿರುವ ಹಿಂದೆ ಡಾ. ಎಸ್.ಎ. ಪಾಟೀಲರ ಪರಿಶ್ರಮವಿದೆ. ರೈತರಿಗಾಗಿ ಹತ್ತು ಹಲವಾರು ಸಂಶೋಧನೆಗಳ ಮೂಲಕ ಅವರ ಭೂಮಿಯನ್ನು ಫಲವತ್ತತೆಗೆ ಕಾರಣಿಭೂತರಾದ ವ್ಯಕ್ತಿ ಅವರು. ದೂರದೃಷ್ಟಿಯಿಂದ ಇಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಲವಾರು ಸಂಶೋಧನಾ ಕೇಂದ್ರಗಳ ಆಗರವಾಗಿದೆ. ಕೃಷಿ ಮೇಳದಂತಹ ಲಕ್ಷ ಲಕ್ಷ ರೈತರು ಸೇರುವ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಸಿದ್ದು ಅವರು ಎಂದು ಪ್ರಕಟಣೆ ಮೂಲಕ ಸಂತಾಪ ಸಲ್ಲಿಸಿದರು.