ಕೃಷಿ ಸಚಿವ ಚಲುವರಾಯಸ್ವಾಮಿ ಹುಟ್ಟುಹಬ್ಬ: ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಿಹಿ ವಿತರಣೆ

KannadaprabhaNewsNetwork | Updated : Jun 02 2025, 12:59 PM IST
ಸಚಿವ ಚಲುವರಾಯಸ್ವಾಮಿ ಅವರ ಹೆಸರಿನಲ್ಲಿ ಶ್ರೀಸೌಮ್ಯಕೇಶವಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ಚಲುವರಾಯಸ್ವಾಮಿ ಸಹೋದರ ಲಕ್ಷ್ಮೀಕಾಂತ್ ಪುತ್ರ ಸುನಿಲ್‌ಗೆ ಹೂವು, ಪ್ರಸಾದ ಕೊಟ್ಟು ಸಚಿವರಿಗೆ ತಲುಪಿಸುವಂತೆ ಸೂಚಿಸಿದರು.

 ನಾಗಮಂಗಲ : ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುರಸ್ಕಾರಗಳೊಂದಿಗೆ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ 65 ನೇ ಹುಟ್ಟುಹಬ್ಬವನ್ನು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಿದರು.

ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಪ್ರಧಾನ ಅರ್ಚಕ ತಿರುನಾರಾಯಣ ಅಯ್ಯಂಗಾರ್ ಅವರಿಂದ ವಿಶೇಷ ಪೂಜೆ ನೆರವೇರಿಸಿದ ಕಾಂಗ್ರೆಸ್‌ಸ್ ಪಕ್ಷದ ಮುಖಂಡರು, ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಉತ್ತಮ ಆರೋಗ್ಯ, ಆಯಸ್ಸು ಕರುಣಿಸುವ ಜೊತೆಗೆ, ರಾಜಕೀಯವಾಗಿ ಸಾರ್ವಜನಿಕ ಸೇವೆ ಮಾಡಲು ಮತ್ತಷ್ಟು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಸಚಿವ ಚಲುವರಾಯಸ್ವಾಮಿ ಅವರ ಹೆಸರಿನಲ್ಲಿ ಶ್ರೀಸೌಮ್ಯಕೇಶವಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ಚಲುವರಾಯಸ್ವಾಮಿ ಸಹೋದರ ಲಕ್ಷ್ಮೀಕಾಂತ್ ಪುತ್ರ ಸುನಿಲ್‌ಗೆ ಹೂವು, ಪ್ರಸಾದ ಕೊಟ್ಟು ಸಚಿವರಿಗೆ ತಲುಪಿಸುವಂತೆ ಸೂಚಿಸಿದರು.

ಬಳಿಕ ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದ ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ ಅವರ ಸಮ್ಮುಖದಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಚಲುವರಾಯಸ್ವಾಮಿ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದರು.

ಈ ವೇಳೆ ಸಚಿವ ಚಲುವರಾಯಸ್ವಾಮಿ ಸಹೋದರ ಲಕ್ಷ್ಮೀಕಾಂತ್ ಪುತ್ರ ಸುನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷೆ ಚಿಕ್ಕಮ್ಮ, ಮುಖಂಡರಾದ ಲಕ್ಷ್ಮೀನಾರಾಯಣ, ರವಿಕಾಂತೇಗೌಡ, ಡಿಷ್ ಚಂದ್ರು, ಸಂಪತ್‌ಕುಮಾರ್, ಅಭಿಷೇಕ್‌ಗೌಡ, ಸುರೇಶ್, ಗೀತಾ ದಾಸೇಗೌಡ, ಎನ್.ಕೆ.ವಸಂತಮಣಿ ಸೇರಿದಂತೆ ಹಲವರು ಇದ್ದರು.

Read more Articles on