ವಾಣಿಜ್ಯ ಬೆಳೆಗಳ ವಸ್ತು ಪ್ರದರ್ಶನ ವೀಕ್ಷಣೆ ಮಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

KannadaprabhaNewsNetwork | Published : Jan 21, 2025 12:32 AM

ಕೃಷಿಕರು ಕೇವಲ ಭತ್ತ, ರಾಗಿ ಮತ್ತು ಕಬ್ಬಿನ ಬೆಳೆಗೆ ಜೊತು ಬಿದ್ದಿರುವುದರಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ವೇಳೆ ಬೆಳೆ ನಾಶವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ವಾಣಿಜ್ಯ ಬೆಳೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕು ಆಡಳಿತದಿಂದ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಜನಸ್ಪಂದನಯಲ್ಲಿ ತೋಟಗಾರಿ ಇಲಾಖೆಯಿಂದ ವಾಣಿಜ್ಯ ಬೆಳೆಗಳ ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಪರಿಶೀಲಿಸಿದ ಸಚಿವರು, ಕೃಷಿಕರು ಕೇವಲ ಭತ್ತ, ರಾಗಿ ಮತ್ತು ಕಬ್ಬಿನ ಬೆಳೆಗೆ ಜೊತು ಬಿದ್ದಿರುವುದರಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ವೇಳೆ ಬೆಳೆ ನಾಶವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ವಾಣಿಜ್ಯ ಬೆಳೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಸಲಹೆ ನೀಡಿದರು.

ಈ ವಳೆ ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾದ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ತೋಟಗಾರಿಕೆ ಜಿಲ್ಲಾ ಉಪ ನಿರ್ದೇಶಕಿ ಡಾ. ಕೆ.ಎನ್. ರೂಪಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಡಾ. ಕೆ.ಎಂ.ರೇಖಾ, ತೋಟಗಾರಿಕೆ ಅಧಿಕಾರಿ ಡಾ. ಕೆ.ಎo, ನಿತಿನ್, ತಾಳೆ ಬೆಳೆ ವಿಸ್ತರಣಾಧಿಕಾರಿ ಹನುಮೇಗೌಡ, ಸಹಾಯಕಿ ಟಿ.ಕೆ.ಪದ್ಮಾ , ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಜಿ. ಪ್ರತಿಭಾ, ಇಲಾಖೆ ಅಧಿಕಾರಿಗಳಾದ ದಯಾನಂದ, ರೂಪಶ್ರೀ, ಕರುಣ ಮತ್ತಿತರರು ಇದ್ದರು.

ಜ.೨೩ ರಂದು ೨೪ ಗಂಟೆ ಕಾಲ ರಕ್ತದಾನ ಶಿಬಿರ: ನಟರಾಜ್

ಕನ್ನಡಪ್ರಭ ವಾರ್ತೆ ಮಂಡ್ಯ

ಜೀವಧಾರೆ ಟ್ರಸ್ಟ್‌ನಿಂದ ಜ.೨೩ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರಬೋಸ್ ಅವರ ೧೨೮ನೇ ಜನ್ಮದಿನದ ಸ್ಮರಣಾರ್ಥ ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಿರಂತರ ೨೪ ಗಂಟೆಗಳ ಕಾಲ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ನಟರಾಜ್ ತಿಳಿಸಿದರು.

ಟ್ರಸ್ಟ್‌ನ ವತಿಯಿಂದ ಇದುವರೆಗೂ ೩೪೪ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ೪೩ ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸಿ ಯೋಧರ ಆಸ್ಪತ್ರೆಯನ್ನೂ ಒಳಗೊಂಡಂತೆ ಸರ್ಕಾರಿ ರಕ್ತನಿಧಿ ಕೇಂದ್ರಗಳಿಗೆ ನಿರಂತರವಾಗಿ ಕಾಲಕಾಲಕ್ಕೆ ಸಂಗ್ರಹಿಸಿದ ರಕ್ತ ಒದಗಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜ.೨೩ರ ಬೆಳಗ್ಗೆ ೮ ಗಂಟೆಯಿಂದ ಪ್ರಾರಂಭವಾಗುವ ರಕ್ತದಾನ ಶಿಬಿರ ಜ.೨೪ರ ಬೆಳಗ್ಗೆ ೮ ಗಂಟೆಯವರೆಗೂ ನಡೆಯಲಿದೆ. ರಕ್ತದಾನ ಶಿಬಿರ ಸಂಬಂಧ ೧೨೮ ಹಳ್ಳಿಗಳಿಗೆ ಭೇಟಿ ನೀಡಿ ಪ್ರಚಾರ ಮಾಡಲಾಗಿದೆ. ಜ.೧೮ರಂದು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಮೂಲಕ ಪ್ರಚಾರ ಮಾಡಲಾಗಿದೆ. ಟ್ರಸ್ಟ್‌ನಿಂದ ನಡೆಯುವ ೩೪೫ನೇ ರಕ್ತದಾನ ಶಿಬಿರದಲ್ಲಿ ೧೫೦೦ ಯುನಿಟ್ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಕಾರ್ಯಕ್ರಮದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಿ ಆಸ್ಪತ್ರೆಯಿಂದ ರಕ್ತ ಸಂಗ್ರಹಿಸಲು ವೈದ್ಯ ಸಿಬ್ಬಂದಿ ೩ ಪಾಳಯದಲ್ಲಿ ಕಾರ್ಯನಿರ್ವಹಿಸಲಿದ್ದು, ಸರ್ಕಾರಿ ಆಸ್ಪತ್ರೆಯಿಂದ ೧೫೦ ಹಾಸಿಗೆ ವ್ಯವಸ್ಥೆಯನ್ನು ಒದಗಿಸಲಾಗುವುದು. ಸಂಗ್ರಹವಾದ ರಕ್ತವನ್ನು ಸೈನಿಕ ಆಸ್ಪತ್ರೆಗೆ ಬೇಕಾಗಿರುಷ್ಟು ತಲುಪಿಸಲಾಗುವುದು. ಉಳಿದ ಎಲ್ಲ ರಕ್ತವನ್ನು ಸರ್ಕಾರಿ ರಕ್ತ ನಿಧಿ ಕೇಂದ್ರ ಹಾಗೂ ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಟ್ರಸ್ಟ್‌ನ ಗಣೇಶ್, ಅಭಿ, ಮಹದೇವ, ಉದಯ್, ರವಿಕುಮಾರ್, ಕುಮಾರ್, ಅನ್ವೇಶ್ ಇದ್ದರು.