ರೈತರ ಮನೆ ಬಾಗಿಲಿಗೆ ಕೃಷಿ ಮಾತು

KannadaprabhaNewsNetwork | Published : May 28, 2025 12:31 AM
ದೇಶಾದ್ಯಂತ ನಡೆಯುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಕೃಷಿ ಸಂಶೋಧನೆ ಮತ್ತು ರೈತ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ.

ಗಂಗಾವತಿ:

ರೈತರ ಮನೆ ಬಾಗಿಲಿಗೆ ಕೃಷಿ ತಂಡ ಭೇಟಿ ನೀಡಿ ಕೃಷಿ ಮಾಹಿತಿ ನೀಡುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ದೇಶದ 700 ಜಿಲ್ಲೆಗಳಲ್ಲಿ ಸಿದ್ಧತೆ ನಡೆದಿದೆ. 2 ಕೋಟಿ ರೈತರಿಗೆ ಮುಂಗಾರು ಹಂಗಾಮಿನ ಬೆಳೆಯ ಮಾಹಿತಿ ನೀಡುವ ಈ ಅಭಿಯಾನದಲ್ಲಿ 1500ರಿಂದ 2 ಸಾವಿರ ಕೃಷಿ ವಿಜ್ಞಾನಿಗಳು ತಂಡದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಸರ್ಕಾರದ ಭಾರತೀಯ ಕೃಷಿ ಸಂಶೋಧನಾ ಅನುಸಂಧಾನ ಪರಿಷತ್, ನವದೆಹಲಿಯು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಎಂಬ ರಾಷ್ಟ್ರೀಯ ಕಾರ್ಯಕ್ರಮ ಮೇ 29 ರಿಂದ ಜೂ. 12ರ ವರಿಗೆ ಜರುಗಲಿದೆ.

ಅಭಿಯಾನದಲ್ಲಿ ಏನು ಮಾಹಿತಿ:

ದೇಶಾದ್ಯಂತ ನಡೆಯುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಕೃಷಿ ಸಂಶೋಧನೆ ಮತ್ತು ರೈತ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ. ಕೃಷಿಯಲ್ಲಿನ ಉನ್ನತ ತಂತ್ರಜ್ಞಾನವನ್ನು ನೇರವಾಗಿ ರೈತರ ಜಮೀನುಗಳಿಗೆ ಕೊಂಡೊಯ್ಯುವ ಮೂಲಕ ಈ ಅಭಿಯಾನವನ್ನು ಕೃಷಿ ಸಂಶೋಧನಾ ಅನುಸಂಧಾನ ಪರಿಷತ್‌ನ ವಿಜ್ಞಾನಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಒಳಗೊಂಡು ಎರಡು ತಂಡಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಈ ಅಭಿಯಾನದ ಪ್ರಮುಖ ಉದ್ದೇಶಗಳೆಂದರೆ, ಮುಂಗಾರು ಬೆಳೆಗಳಿಗೆ ಸಂಬಂಧಿಸಿದ ಸುಧಾರಿತ ಮತ್ತು ಅಧುನಿಕ ತಂತ್ರಜ್ಞಾನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರಿ ನೀತಿಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವುದು. ಬೆಳೆ ಮತ್ತು ಕೃಷಿ ಪರಿಕರಗಳ ಆಯ್ಕೆಗಳ ಬಗ್ಗೆ ಉತ್ತಮ ಮಾಹಿತಿವುಳ್ಳ ಮಣ್ಣು ಪರೀಕ್ಷೆ ಆಧಾರಿತ ಬೆಳೆ ಆಯ್ಕೆ, ರಸಗೊಬ್ಬರಗಳ ವಿವೇಚನಾಯುಕ್ತ ಬಳಕೆಯನ್ನು ಉತ್ತೇಜಿಸಿ ಉತ್ತಮ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ರೈತರ ಮನೆ ಬಾಗಿಲಿಗೆ ವಿಜ್ಞಾನಿಗಳು:

ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ 1.50ರಿಂದ 2 ಕೋಟಿ ರೈತರಿಗೆ ಮಾಹಿತಿ ನೀಡುವ ಉದ್ದೇಶ ಹೊಂದಿದ್ದು ದೇಶದ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಇಬ್ಬರು ವಿಜ್ಞಾನಿಗಳ ನೇತೃತ್ವದಲ್ಲಿ ತಂಡ ರಚನೆಯಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ 7 ಸಾವಿರ ರೈತರ ಮನೆ ಬಾಗಿಲಿಗೆ ವಿಜ್ಞಾನಿಗಳು ತೆರಳಿ ಮಾಹಿತಿ ನೀಡಲಿದ್ದಾರೆ. 90 ಗ್ರಾಮಗಳಿಗೆ ತೆರಳುವ ವಿಜ್ಞಾನಿಗಳ ತಂಡದಲ್ಲಿ ಕೃಷಿ ಅಧಿಕಾರಿಗಳು, ಬೆಂಗಳೂರು ವಿಜ್ಞಾನಿಗಳು, ತೋಟಗಾರಿಕೆ ಅಧಿಕಾರಿಗಳು ಸೇರಿದಂತೆ ರಸಗೊಬ್ಬರ ಮಾರಾಟ ಅಧಿಕಾರಿಗಳು ಸಹ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ಪ್ರಥಮ ಬಾರಿಗೆ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಮೂಲಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದು, ಇದರಿಂದ ರೈತ ಸಮುದಾಯಕ್ಕೆ ಹೊಸ ಚೈತನ್ಯ ಮೂಡಲಿದೆ.ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಸಿದ್ಧತೆ ನಡೆದಿದ್ದು, ಕೇಂದ್ರ ಸರ್ಕಾರ ಈ ಅಭಿಯಾನ ಜಾರಿಗೆ ತಂದಿದೆ. ದೇಶದ 700 ಜಿಲ್ಲೆಗಲ್ಲಿ 2 ಕೋಟಿ ರೈತರಿಗೆ 2 ಸಾವಿರ ವಿಜ್ಞಾನಿಗಳಿಂದ ಕೃಷಿ ಮಾಹಿತಿ ನೀಡುತ್ತಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಅಭಿಯಾನಕ್ಕೆ ಸಿದ್ಧತೆ ನಡೆದಿದೆ.

ಡಾ. ರಾಘವೇಂದ್ರ ಎಲಿಗಾರ, ಹಿರಿಯ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ