ಶಿರಸಿ: ಕೃಷಿ ಅರಣ್ಯದಿಂದ ಮಾತ್ರ ಕೃಷಿ ಭೂಮಿಯ ಅವಶ್ಯಕತೆ ಪೂರೈಸಲು ಸಾಧ್ಯ ಎಂದು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ ಅಭಿಪ್ರಾಯಪಟ್ಟರು.
ತಾಲೂಕಿನ ಉಂಚಳ್ಳಿಯ ತುಡ್ವಿ ಮನೆಯಲ್ಲಿ ಸ್ಕೊಡ್ವೆಸ್ ಸಂಸ್ಥೆಯಿಂದ ಕೃಷಿ ಅರಣ್ಯ ಸಂರಕ್ಷಣಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಅರಣ್ಯ ಸಸಿ ವಿತರಿಸಿ ಮಾತನಾಡಿದರು.ಆಧುನಿಕ ಜೀವನ ಶೈಲಿಯಲ್ಲಿ ಸಾವಯವ ಆಹಾರ ಪದ್ಧತಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವುದರಿಂದ ಸಾವಯವ ಆಹಾರ ಉತ್ಪಾದನೆಗೆ ರೈತರು ತಮ್ಮ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಅರಣ್ಯ ಸಂರಕ್ಷಿಸಿಕೊಳ್ಳಬೇಕು ಎಂದರು.
ಉಂಚಳ್ಳಿ ಗ್ರಾಪಂ ಸದಸ್ಯ ಎ.ಕೆ.ನಾಯ್ಕ ಮಾತನಾಡಿ, ಸಾವಯವ ಕೃಷಿಯ ಉತ್ತೇಜನಕ್ಕಾಗಿ ಸ್ಕೊಡ್ವೆಸ್ ಸಂಸ್ಥೆಯು ಕೃಷಿ ಅರಣ್ಯ ಸಂರಕ್ಷಣಾ ಅಭಿಯಾನ ಆರಂಭಿಸಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಕೊಡ್ವೆಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್. ರವಿ ಮಾತನಾಡಿ, ಕೃಷಿ ಅರಣ್ಯ ಸಂರಕ್ಷಣಾ ಅಭಿಯಾನದ ಅಡಿಯಲ್ಲಿ ಸ್ಕೊಡ್ವೆಸ್ ಸಂಸ್ಥೆಯ ಮೂಲಕ ಒಂದು ಲಕ್ಷ ಅರಣ್ಯ ಸಸಿ ನೆಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ್, ಕೃಷಿ ಇಲಾಖೆಯ ಉಪ ನಿರ್ದೇಶಕ ಟಿ.ಎಚ್. ನಟರಾಜ್, ಸಹಾಯಕ ತೋಟಗಾರಿಕಾ ನಿರ್ದೇಶಕ ಗಣೇಶ ಹೆಗಡೆ, ಸಹಾಯ ಕೃಷಿ ನಿರ್ದೇಶಕ ಮಧುಕರ ನಾಯ್ಕ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹರೀಶ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು, ಉಂಚಳ್ಳಿ ಗ್ರಾಪಂ ಕಾರ್ಯದರ್ಶಿ ಹಾಗೂ ಸ್ಕೊಡ್ವೆಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಸ್ವಾಗತಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ತುಡ್ವಿಮನೆ ಆವರಣದಲ್ಲಿ ನೂರಾರು ಸಾಂಪ್ರದಾಯಿಕ ಅರಣ್ಯ ಸಸಿ ನೆಡಲಾಯಿತು.