ಚಿತ್ರಕಲೆಗಳಲ್ಲಿ ನಿಮ್ಮ ಬುದ್ಧಿಮತ್ತೆಯ ಕಲ್ಪನೆ ಹಾಗೂ ಕೃತಕತೆಯನ್ನು ಅಳವಡಿಸಿದಾಗ ಸಿಗುವ ಹೊಸ ಕಲ್ಪನೆ ಕ್ರಿಯಾತ್ಮಕತೆ ಹುಟ್ಟುತ್ತದೆ.
ಧಾರವಾಡ:
ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಪ್ರತಿ ನವಂಬರ್ ತಿಂಗಳು ಧಾರವಾಡ, ಉತ್ತರಕನ್ನಡ ಮತ್ತು ಹಾವೇರಿಗಳ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ವಿಷಯಗಳನ್ನು ಪರಿಣಿತ ವ್ಯಕ್ತಿಗಳಿಂದ ಒದಗಿಸುತ್ತಿರುವುದು ಹೊಸ ಚಿಂತನೆಯಾಗಿದೆ ಎಂದು ರಂಗ ನಿರ್ದೇಶಕ, ಚಿಂತಕ ಡಾ. ಶಶಿಧರ ನರೇಂದ್ರ ಹೇಳಿದರು.ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಯುವ ಸಮಾವೇಶದ ಅಂಗವಾಗಿ ಸರ್ಕಾರಿ ಚಿತ್ರಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಚಿತ್ರಕಲೆಯಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ಇತ್ತೀಚಿನ ಪ್ರಗತಿಗಳ ಉಪನ್ಯಾಸಕ್ಕೆ ಚಾಲನೆ ನೀಡಿದ ಅವರು, ಪ್ರತಿಷ್ಠಾನದ ಮಾರ್ತಾಂಡಪ್ಪ ಕತ್ತಿ ಕಳೆದ ಎರಡು ದಶಕಗಳಿಂದ ಯುವ ಸಮುದಾಯಕ್ಕೆ ನೂತನ ಮತ್ತು ಉಪಯುಕ್ತವಾದ ಕಾರ್ಯಕ್ರಮಗಳ ಆಯೋಜನೆ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು. ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲೀನಾ ಸಕ್ರಿ, ಚಿತ್ರಕಲೆಗಳಲ್ಲಿ ನಿಮ್ಮ ಬುದ್ಧಿಮತ್ತೆಯ ಕಲ್ಪನೆ ಹಾಗೂ ಕೃತಕತೆಯನ್ನು ಅಳವಡಿಸಿದಾಗ ಸಿಗುವ ಹೊಸ ಕಲ್ಪನೆ ಕ್ರಿಯಾತ್ಮಕತೆ ಹುಟ್ಟುತ್ತದೆ. ಅದನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಎಐ ಮೇಲೆ ಅವಲಂಬನೆಯಾಗದೆ ಮೂಲತತ್ವಕ್ಕೆ ದಕ್ಕೆಯಾಗದಂತೆ ಕಾಯ್ದುಕೊಂಡು ಸೃಜನಶೀಲತೆ ಹುಟ್ಟುಹಾಕಿಕೊಳ್ಳಲು ಸಲಹೆ ನೀಡಿದರು. ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪುಷ್ಪಲತಾ ನಿಕ್ಕಂ, ಎಐ ಬಳಕೆಯಿಂದ ಚಿತ್ರದ ಗುಣಾತ್ಮಕತೆ ಹೆಚ್ಚಿಸಬಹುದು. ಇದರಿಂದ ಮಾನವ ಸಂಪನ್ಮೂಲದ ಬಳಕೆ ಕಡಿಮೆಯಾಗುತ್ತದೆ ಎಂಬ ಕಲ್ಪನೆಯಿಂದ ದೂರ ಬರಬೇಕಿದೆ. ಎಐದಲ್ಲಿ ಭಾವನೆ, ಅನುಭವ, ಸಂಸ್ಕೃತಿ ಮತ್ತು ವೈಯಕ್ತಿಕ ಅಭಿವ್ಯಕ್ತಿತ್ವ ಇರುವುದಿಲ್ಲ. ಹಾಗಾಗಿ ನೈಜತೆಗೆ ಹೆಚ್ಚು ಬೆಲೆ ಇರುತ್ತದೆ ಎಂದು ಹೇಳಿದರು.
ಸರ್ಕಾರಿ ಚಿತ್ರಕಲಾ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಕುರಿ ಅಧ್ಯಕ್ಷತೆ ವಹಿಸಿದ್ದರು. ಶೀತಲ ಗೋಲ್ಡ್ನ ಮಾಲೀಕ ಜಯಂತಿಲಾಲ ಜೈನ್, ಸಮಾವೇಶದ ಸರ್ವಾಧ್ಯಕ್ಷ ಸುನಿಲ ಬಾಗೇವಾಡಿ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಪರಾಸ್ ಮಾತನಾಡಿದರು. ಉಪಾಧ್ಯಕ್ಷ ಸುರೇಶ ಬೆಟಗೇರಿ ಮತ್ತು ಉಪನ್ಯಾಸಕ ಎಸ್.ಕೆ. ಪತ್ತಾರ ನಿರೂಪಿಸಿದರು. ಸಂಯೋಜಕ ಅರುಣ ಕುಮಾರ ಶೀಲವಂತ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.