ನರಗುಂದ: ಈ ಹಿಂದೆ ಸಮಾಜದಲ್ಲಿ ಏಡ್ಸ್ ರೋಗ ಎಷ್ಟೋ ಜನರ ಪಾಣ ಬಲಿ ಪಡೆದುಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಈ ರೋಗ ನಿಯಂತ್ರಣ ಮಾಡಲು ಸಾಧ್ಯವಾಗಿದೆ ಎಂದು ಡಾ. ರೇಣುಕಾ ಕೊರವನವರ ಹೇಳಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಜಗತ್ತ ನಾಯಕ ಕಣವಿ ಮಾತನಾಡಿ, ಏಡ್ಸ್ ರೋಗವು ಲೈಂಗಿಕ ಕ್ರಿಯೆ ಮತ್ತು ಒಬ್ಬರ-ಇನ್ನೊಬ್ಬರ ರಕ್ತ ಹತ್ತುವುದರಿಂದ ರೋಗ ಹರಡುತ್ತದೆ. ಕಾನೂನಿನ ಸಲಹೆ ಮತ್ತು ಸಹಾಯಬೇಕಾದರೆ ಯಾವುದೇ ತರಹದ ಹಣ ಪಾವತಿ ಮಾಡುವಂತಿಲ್ಲ ಮತ್ತು ವಾರ್ಷಿಕ ಆದಾಯ ₹ 2 ಲಕ್ಷ 50 ಸಾವಿರಗಳಿಗಿಂತ ಕಡಿಮೆ ಇರುವಂತರು ತಮ್ಮ ಪ್ರಕರಣದ ಸಲುವಾಗಿ ನ್ಯಾಯವಾದಿಗಳ ಫೀ ಕೊಡದೇ ಆದ ಪಕ್ಷದಲ್ಲಿ ನಮ್ಮ ಕಾನೂನು ಸೇವೆಗಳ ಪ್ರಾಧಿಕಾರದವರು ಉಚಿತವಾಗ ನ್ಯಾಯವಾದಿಗಳನ್ನು ನೇಮಕ ಮಾಡಿ ಸರ್ಕಾರವೇ ವಕೀಲರ ಫೀ ಭರಣ ಮಾಡುತ್ತಾರೆ ಎಂದರು.
ಆಪ್ತ ಸಮಾಲೋಚಕ ಎನ್.ಎಲ್. ಮಡಿವಾಳಕರ ಮಾತನಾಡಿ, ಎಚ್ಐವಿ ಸೋಂಕಿಗೆ ಒಳಗಾದ 3-4 ವಾರಗಳ ನಂತರ ಬಹಳಷ್ಟು ವ್ಯಕ್ತಿಗಳಲ್ಲಿ ಫ಼್ಲೂನಂತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಕೆಲ ದಿನಗಳಲ್ಲಿ ಅಥವಾ ವಾರಗಳಲ್ಲಿ ಅವು ಗುಣವಾಗುತ್ತವೆ. ಆ ಲಕ್ಷಣಗಳು ಸಾಮಾನ್ಯವಾಗಿ ಜ್ವರ, ತಲೆನೋವು, ಕೀಲುನೋವು, ಆಯಾಸ, ಬಾಯಿ ಮತ್ತು ಗಂಟಿಲಿನಲ್ಲಿ ಹುಣ್ಣುಗಳು, ಚರ್ಮದ ತುರಿಕೆ ಇರುತ್ತದೆ ಎಂದು ತಿಳಿಸಿದರು.ಪ್ರಾಂಶಪಾಲ ಡಾ. ಆನಂದಕುಮಾರ ಲಾಳಸಂಗಿ, ನ್ಯಾಯವಾದಿ ಎಸ್.ಕೆ.ಹರಪನಹಳ್ಳಿ, ನವೀನ, ಜಿ.ವಿ. ಕೊಣ್ಣೂರ, ಬಿ.ಎಫ್. ಕುಂಬಾರ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.