ರಾಮನಗರ: ಬಿಡದಿ ಪುರಸಭೆ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ನ ಆಯಿಷಾಖಲೀಲ್ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಮಂಜುಳಾ ಗೋವಿಂದಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಪುರಸಭೆಯಲ್ಲಿ ಚುನಾವಣೆ ನಡೆಯಿತು.ಬಿಸಿಎಂ ‘ಎ’ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ 10ನೇ ವಾರ್ಡಿನ ಜೆಡಿಎಸ್ ಸದಸ್ಯೆ ಆಯಿಷಾ ಖಲೀಲ್ ಮತ್ತು 15ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಬಿಂದಿಯಾ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ 14 ಮತ ಪಡೆದ ಆಯಿಷಾ ಖಲೀಲ್ ಪ್ರತಿಸ್ಪರ್ಧಿ ಕಾಂಗ್ರೆಸ್ ಸದಸ್ಯೆ ಬಿಂದಿಯಾ ಅವರನ್ನು (ಪಡೆದ ಮತ 9) 5 ಮತಗಳ ಅಂತರದಿಂದ ಪರಾಭವಗೊಳಿಸಿದರು. ಚುನಾವಣಾಧಿಕಾರಿಗಳಾಗಿ ರಾಮನಗರ ತಹಸೀಲ್ದಾರ್ ತೇಜಸ್ವಿನಿ ಕರ್ತವ್ಯ ನಿರ್ವಹಿಸಿದರು. ಮುಖ್ಯಾಧಿಕಾರಿ ಎಂ.ಮೀನಾಕ್ಷಿ ಇತರರಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆಯಿಷಾಖಲೀಲ್, ನಾನು ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತೆ ಹಾಗೂ ಅಲ್ಪಸಂಖ್ಯಾತ ಸಮುದಾಯ ವರ್ಗಕ್ಕೆ ಸೇರಿದ ನನ್ನನ್ನು ಗುರುತಿಸಿ ಜೆಡಿಎಸ್ ವರಿಷ್ಠರು ಮತ್ತು ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಬಿಡದಿ ಪುರಸಭೆ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡು ಪುರಸಭೆ ವ್ಯಾಪ್ತಿಯ 23 ವಾರ್ಡ್ ಗಳಿಗೂ ಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ ಸರ್ಕಾರಿ ಸವಲತ್ತುಗಳನ್ನು ಅರ್ಹ ಫಲಾನುಭವಿ ಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಬಿಡದಿ ಪುರಸಭೆ ರಚನೆಯಾದ ದಿನದಿಂದಲೂ ಜೆಡಿಎಸ್ ಪಕ್ಷ ಅಧಿಕಾರ ನಡೆಸುತ್ತಿದ್ದು, ಜನಪರವಾದ ಕಾರ್ಯಕ್ರಮಗಳನ್ನು ಕೊಡುತ್ತಿದೆ. ಈಗ ಅಧ್ಯಕ್ಷೆ ಭಾನುಪ್ರಿಯಾ ಮತ್ತು ಉಪಾಧ್ಯಕ್ಷೆ ಆಯಿಷಾಖಲೀಲ್ ಅವರು ಎಲ್ಲ ಸದಸ್ಯರ ವಿಶ್ವಾಸ ಪಡೆದುಕೊಂಡು ಉತ್ತಮ ಆಡಳಿತ ನೀಡುವ ಜೊತೆಗೆ ಜನಪರ, ಜನಸ್ನೇಹಿ ಆಡಳಿತಕ್ಕೆ ಒತ್ತು ಕೊಡಬೇಕು. ಪಟ್ಟಣದ ಸ್ವಚ್ಛತೆ, ಸೌಂದರ್ಯ ಹೆಚ್ಚಿಸುವ ಬಗ್ಗೆ ಚಿಂತನೆ ಮಾಡುವಂತೆ ಸಲಹೆ ನೀಡಿದರು.
ನೂತನ ಉಪಾಧ್ಯಕ್ಷೆ ಆಯಿಷಾಖಲೀಲ್ ಅವರನ್ನು ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಸದಸ್ಯರಾದ ಎಚ್.ಎಸ್.ಲೋಹಿತ್ ಕುಮಾರ್, ಎಂ.ಎನ್.ಹರಿಪ್ರಸಾದ್, ಸೋಮಶೇಖರ್, ದೇವರಾಜು, ರಾಕೇಶ್, ರಮೇಶ್, ಮಂಜುಳಾ, ಮನು, ಲಲಿತಾ ನರಸಿಂಹಯ್ಯ, ಯಲ್ಲಮ್ಮ, ಸರಸ್ವತ್ತಮ್ಮ, ನಾಗರಾಜು, ಮುಖಂಡರಾದ ರಮೇಶ್, ಬಸವರಾಜು, ಸೋಮೇಗೌಡ, ವಸಂತ ಕುಮಾರ್, ಸೋಮಣ್ಣ, ಅಕ್ರಂ ಪಾಷ, ಅಲ್ತಾಫ್, ಚಾನ್ ಪಾಷ, ಮೋಯಿನ್, ರೋಷನ್, ಮಾಜಿ ಅಧ್ಯಕ್ಷ ರಮೇಶ್, ಬಿ.ಮಂಜುನಾಥ್, ಮಂಜು ಆರ್.ಗೌಡ, ಮಂಜು ಕೊಡಿಯಾಲ, ಹಾಜಿ ಇಬ್ರಾಹಿಂ ಸಾಬ್, ಇಮ್ತಿಯಾಜ್ ಮತ್ತಿತರರು ಅಭಿನಂದಿಸಿದರು.4ಕೆಆರ್ ಎಂಎನ್ 6.ಜೆಪಿಜಿ
ಬಿಡದಿ ಪುರಸಭೆ ನೂತನ ಉಪಾಧ್ಯಕ್ಷೆ ಆಯಿಷಾ ಖಲೀಲ್ ಅವರನ್ನು ಮುಖಂಡರು ಅಭಿನಂದಿಸಿದರು.