ಕನ್ನಡಪ್ರಭ ವಾರ್ತೆ ಹಿರಿಯೂರು
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಕುಮಾರ್ ರಾಜೀನಾಮೆ ನೀಡುವುದರೊಂದಿಗೆ ಕಳೆದ 8-10 ದಿನಗಳಿಂದ ಸಚಿವರು ಮತ್ತು ನಗರಸಭೆ ಅಧ್ಯಕ್ಷರ ನಡುವೆ ಇದ್ದ ಮುನಿಸಿಗೆ ತೆರೆ ಬಿದ್ದಂತಾಗಿದೆ.ಆವಿಶ್ವಾಸ ಮಂಡನೆಗೆ ಸದಸ್ಯರು ಸಹಿ ಹಾಕಿದ ಪತ್ರ ನೀಡಿದ ಮೇಲೆ ರೆಬೆಲ್ ಆಗಿದ್ದ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಅವರು ಸಚಿವರ ಮೇಲೆ ಗರಂ ಆಗಿದ್ದರು. ಆಗಿದ್ದಾಗಲಿ ನಾನು ರಾಜೀನಾಮೆ ನೀಡುವುದಿಲ್ಲ, ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದಿದ್ದ ನಗರಸಭೆ ಅಧ್ಯಕ್ಷರ ಮನವೊಲಿಸುವಲ್ಲಿ ಸಚಿವ ಡಿ.ಸುಧಾಕರ್ ಯಶಸ್ವಿಯಾಗಿದ್ದಾರೆ.
ನಗರಸಭೆ ಸದಸ್ಯರ ಎರಡು ಸಭೆ ನಡೆಸಿದ್ದ ಸಚಿವರು ಅಧ್ಯಕ್ಷ ಅಜಯ್ ಕುಮಾರ್ ರವರ ಮೇಲೆ ಸಿಟ್ಟಾಗಿದ್ದು ಸುಳ್ಳಲ್ಲ. ಉಳಿದ ನಾಲ್ಕು ತಿಂಗಳ ಅವಧಿಗೆ ಬೇರೆಯವರಿಗೆ ಅವಕಾಶವಾಗಲಿ, ಸಾಮಾಜಿಕ ನ್ಯಾಯ ಪರಿಪಾಲನೆ ಆಗಲಿ ಎಂದು ಸಚಿವರು ರಾಜೀನಾಮೆ ನೀಡು ಎಂದು ಒತ್ತಾಯಿಸಿದ್ದರು. ಆದರೆ ರಸ್ತೆ ವಿಸ್ತರಣೆ ಮಾಡದೇ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಪತ್ರಿಕೆಗಳ ಮುಖಾಂತರ ಖಡಾಖಂಡಿತವಾಗಿ ಹೇಳಿದ್ದರು. ಕೆಲ ಸದಸ್ಯರು ಸಚಿವರ ಜತೆಗೆ ಇತ್ತ ನಗರಸಭೆ ಅಧ್ಯಕ್ಷರ ಜತೆಗೆ ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಾ ಮುಂದೇನು ಎಂಬ ಚಿಂತೆಯಲ್ಲಿದ್ದರು. ಆದರೆ ಕಳೆದ ಭಾನುವಾರ ಅದೆಲ್ಲಕ್ಕೂ ತೆರೆ ಬಿದ್ದಿದ್ದು ಅಧ್ಯಕ್ಷರ ಮನೆಗೆ ಭೇಟಿ ನೀಡಿದ್ದ ಸಚಿವರ ಜತೆಗೆ ಮಾತನಾಡಿದ್ದ ಅಜಯ್ ಕುಮಾರ್ ಅವರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರ ತಲುಪಿಸಿ ಬಂದಿದ್ದಾರೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅಜಯ್ ಕುಮಾರ್, ಯಾವ ಒತ್ತಡವೂ ಇಲ್ಲದೆ ಆತ್ಮ ತೃಪ್ತಿಯಿಂದ ನನ್ನ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ರಸ್ತೆ ವಿಸ್ತರಣೆಗೆ ಕಟ್ಟಡ ಹೊಡೆದ ಮೇಲೆಯೇ ನಾನು ರಾಜೀನಾಮೆ ಕೊಡುವುದು ಎಂದು ಹಠ ಹಿಡಿದಿದ್ದೆ. ಆದರೆ ಸಚಿವರದು ಮತ್ತು ನನ್ನದು ಇಂದು ನಿನ್ನೆಯ ಸಂಬಂಧವಲ್ಲ. ಅವರ ಮನಸ್ಸಿಗೆ ನೋವಾಗುವ ಕೆಲಸ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಸಣ್ಣ ಪುಟ್ಟ ಮುನಿಸುಗಳಿದ್ದದ್ದು ಸಹಜ. ಆದರೆ ನಮ್ಮದೆಲ್ಲ ಒಂದೇ ಕುಟುಂಬ. ಅದು ಕಾಂಗ್ರೆಸ್ ಕುಟುಂಬ. ಎಲ್ಲಾ ವೈ ಮನಸ್ಸನ್ನು ಪಕ್ಕಕ್ಕಿಟ್ಟು ಸಚಿವರ ಸೂಚನೆಗೆ ಗೌರವ ಕೊಟ್ಟು ರಾಜೀನಾಮೆ ಕೊಟ್ಟು ಬಂದಿದ್ದೇನೆ. ಸಚಿವರು ಮತ್ತು ನನ್ನ ನಡುವೆ ಬಿರುಕು ಮೂಡಿದೆ. ಸಚಿವರಿಂದ ಅಜಯ್ ಕುಮಾರ್ ದೂರ ಆದರು ಎಂದು ಒಳಗೊಳಗೇ ಸಂಭ್ರಮಪಟ್ಟವರನ್ನು ಯಾರಾದರೂ ಸಮಾಧಾನಿಸಬೇಕು. ನಾನು ಇಂದಿಗೂ ಎಂದಿಗೂ ಸಚಿವರ ಅಣತಿಯಂತೆ ನಡೆದವನು, ನಡೆಯುವವನು. ಹಾಗಾಗಿ ಅವರ ಸೂಚನೆ ಪಾಲಿಸಿದ್ದೇನೆ.
ನಮ್ಮ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ, ನಗರಸಭೆ ಸದಸ್ಯರ ಬೆಂಬಲದಿಂದ ಸಚಿವ ಡಿ.ಸುಧಾಕರ್ ರವರ ಆಶೀರ್ವಾದದಿಂದ ನಾನು 10 ತಿಂಗಳ ಹಿಂದೆ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೆ.ನನ್ನ ಅಧಿಕಾರದ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನಗರಸಭೆಯ ಆಡಳಿತದಲ್ಲಿ ಸಾಕಷ್ಟು ಸುಧಾರಣೆ ಮಾಡಿ ನಗರದ ನಾಗರೀಕರ ಪ್ರತಿಯೊಂದು ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇನೆ.
ನಗರಸಭೆ ಅಧಿಕಾರಿ ವರ್ಗ ಮತ್ತು ಪೌರ ಕಾರ್ಮಿಕರಿಗೆ ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲು ಅನುಕೂಲ ಕಲ್ಪಿಸಿದ್ದೆ. ಸಿಬ್ಬಂದಿಗಳ ಸಂಬಳವನ್ನು ಸಕಾಲಕ್ಕೆ ಸಿಗುವಂತೆ ವ್ಯವಸ್ಥೆ ಮಾಡಿದ್ದೆ.ನಗರಸಭೆಗೆ ಬರಬೇಕಿದ್ದ ಬಾಕಿ ಕಂದಾಯವನ್ನು ನಿರ್ದಾಕ್ಷಿಣ್ಯವಾಗಿ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿತ್ತು.ಕಂದಾಯ ಕಟ್ಟುವ ಸಲುವಾಗಿ ಜನರು ಓಡಾಟ ಮಾಡಬಾರದೆಂದು ನಗರಸಭೆ ಆವರಣದಲ್ಲಿ ಬ್ಯಾಂಕಿನ ಕ್ಯಾಷ್ ಕೌಂಟರ್ ಪ್ರಾರಂಭ ಮಾಡಲಾಗಿತ್ತು. ನೂತನ ಕಟ್ಟಡದಲ್ಲಿ ನಗರಸಭೆ ಕಾರ್ಯಾರಂಭ ಮಾಡಲು ಕ್ರಮ ವಹಿಸಿದ್ದೆವು.
ಹುಳಿಯಾರು ರಸ್ತೆ ಅಗಲೀಕರಣ ಮಾಡಲು ಇದ್ದ ಅಡ್ಡಿ ಆತಂಕಗಳನ್ನು ಬಹುತೇಕ ನಿವಾರಣೆ ಮಾಡಿ ಕಟ್ಟಡಗಳ ತೆರವು ಮಾಡಿಸುವ ಕೆಲಸ ಇದೀಗ ಆರಂಭಿಸಬೇಕಿದೆ. ಅದೇ ವಿಚಾರಕ್ಕಾಗಿ ನಾನು ರಸ್ತೆ ವಿಸ್ತರಣೆ ಮಾಡಿ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಆದರೆಸಚಿವರ ಸೂಚನೆಯಂತೆ, ಪಕ್ಷದ ಹಿತದೃಷ್ಟಿಯಿಂದ, ಯಾವುದೇ ಒತ್ತಡ ಇಲ್ಲದೆ ಬಹಳ ಸಂತೋಷದಿಂದ, ಸಾರ್ಥಕ ಮನೋಭಾವದಿಂದ ನನ್ನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.