ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನಲ್ಲಿ ನಡೆದಿರುವ ಕುಡಿಯುವ ನೀರಿನ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಗ್ರಾಮಸ್ಥರಿಂದ ದೂರು ಬರುತ್ತಿವೆ. ಇಂತಹ ಕಾಮಗಾರಿ ಬಗ್ಗೆ ಅಧಿಕಾರಿಗಳು ಕ್ರಮವಹಿಸಿ ಇನ್ನೂ ಹದಿನೈದು ದಿನದಲ್ಲಿ ಬಾಕಿ ಕೆಲಸ ಮುಗಿಸಿ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು ಎಂದು ಶಾಸಕ ಎಸ್. ಆರ್.ಶ್ರೀನಿವಾಸ್ ತಾಕೀತು ಮಾಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ವಿಭಾಗದಿಂದ ನಡೆದ ವಿಶೇಷ ಸಭೆ ನಡೆಯಲ್ಲಿ ಅವರು ಮಾತನಾಡಿದರು. ಜಲ ಜೀವನ್ ಮಿಶನ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಕಾಮಗಾರಿ ವಿಳಂಬ, ಅರ್ಧಕ್ಕೆ ನಿಲ್ಲಿಸಿದ ಕೆಲಸ, ಹಸ್ತಾಂತರಕ್ಕೆ ಮೀನಾ ಮೇಷ ಎಣಿಸುತ್ತಿರುವ ಬಗ್ಗೆ ಗ್ರಾಪಂ ಅಧಿಕಾರಿಗಳು, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತರಾಟೆ ತೆಗೆದುಕೊಂಡರು. ತಾಲೂಕಿನ 34ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲಸಗಳ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು ತಾಂತ್ರಿಕ ಸಮಸ್ಯೆ ಬಗ್ಗೆ ಆಲಿಸಿದ್ದೇನೆ. ಪ್ರತಿ ಹೋಬಳಿ ಮಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆಲಸಗಳ ಬಗ್ಗೆ ಮಾಹಿತಿ ಪಡೆದು ಚರ್ಚೆ ಮಾಡಲಾಯಿತು. ಕೆಲಸ ಮುಗಿದು ನೀರು ಪೂರೈಕೆ ಮಾಡುತ್ತಿರುವ ಗ್ರಾಮಗಳಿಗೆ ಪಿಡಿಓ ಸ್ಥಳ ಪರಿಶೀಲನೆ ಮಾಡಿ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ತಿಳಿಸಿ ಕೆಲವಡೆ ಕೊರೆದ ಬೋರ್ ವೆಲ್ ವಿಫಲವಾಗಿದೆ. ಮತ್ತೆ ಕೆಲ ಗ್ರಾಮದಲ್ಲಿ ಕುಡಿಯಲು ಯೋಗ್ಯವಿಲ್ಲ ಎಂಬ ಪರೀಕ್ಷೆ ಫಲಿತಾಂಶ ಬಂದಿದೆ. ಇಂತಹ ಕಡೆ ಕೂಡಲೇ ಮತ್ತೊಂದು ಬೋರ್ ವೆಲ್ ವ್ಯವಸ್ಥೆ ಮಾಡಿ ನೀರು ಸರಬರಾಜು ಮಾಡುವಂತೆ ಸೂಚಿಸಿದರು.ಚರ್ಚೆಯ ಸಮಯದಲ್ಲಿ ಗುತ್ತಿಗೆದಾರರು ತಮ್ಮ ಅಹವಾಲು ಹೇಳಿಕೊಂಡರು. ತುಮಕೂರು ಜಿಲ್ಲೆಯಲ್ಲಿ ನಮ್ಮ ಹಣದಲ್ಲಿ ಶೇಕಡಾ 35ರಷ್ಟು ಹಣ ಹಿಡಿಯುತ್ತಿದ್ದಾರೆ. ಹಾಸನ ಮತ್ತು ರಾಮನಗರ ಜಿಲ್ಲೆಯಲ್ಲಿ ಇಎಂಡಿ, ಎಫ್ ಎಸ್ ಟಿ ಹೆಸರಿನಲ್ಲಿ ಹಣ ಹಿಡಿದಿಲ್ಲ. ಆದರೆ ತುಮಕೂರು ಜಿಲ್ಲೆಯ ಮಾತ್ರ ಹಿಡಿದಿದ್ದಾರೆ. ಈ ಜೊತೆಗೆ ಎಲ್ಲಾ ಸಮಸ್ಯೆಗೆ ಗುತ್ತಿಗೆದಾರರೇ ಹೊಣೆ ಮಾಡುತ್ತಿದ್ದಾರೆ. ಯಾವ ಅಧಿಕಾರಿಯೂ ಜವಾಬ್ದಾರಿ ಹೊರದೆ ಎಲ್ಲಾ ಕಾರಣಕ್ಕೂ ಶನೇಶ್ವರ ಹೊಣೆ ಎನ್ನುತ್ತಿದ್ದಾರೆ ಎಂದು ಗುತ್ತಿಗೆದಾರ ಪರವಾಗಿ ರೇಣುಕಾ ಪ್ರಸಾದ್ ಕಿಡಿಕಾರಿದರು. ಲಿಂಗಮ್ಮನಹಳ್ಳಿ, ಚಾಕೇನಹಳ್ಳಿ, ಇಸ್ಲಾಂ ನಗರ ಗ್ರಾಮದಲ್ಲಿ ಬೋರ್ ಹಾಗೂ ಪೈಪ್ ಲೈನ್ ಸಮಸ್ಯೆ ಕೂಡಲೇ ಬಗೆಹರಿಸಬೇಕು. ಪರಿವರ್ತಕ ಅಳವಡಿಕೆಗೆ ಬೆಸ್ಕಾಂ ಹಾಗೂ ಕುಡಿಯುವ ನೀರು ನೈರ್ಮಲ್ಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿ, ಗುತ್ತಿಗೆದಾರರು ವಿಳಂಬ ಅನುಸರಿಸಿ ಬಿಲ್ ಆಗಲಿಲ್ಲ ಅಂತ ಊರು ಬಿಡುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಆಗಬಾರದು. ಕೂಡಲೇ ಕೆಲಸವನ್ನು ಪೂರ್ಣಗೊಳಿಸಿ ಎಂದು ಹೇಳಿದರು.