ಗಜೇಂದ್ರಗಡ: ಪಟ್ಟಣದ ಗಂಜಿಪೇಟೆಯ ಶ್ರೀಸೀತಾರಾಮ ಮಂದಿರ ಹಾಗೂ ಪತ್ತಾರಗಲ್ಲಿಯ ವಿಶ್ವನಾಥ ಸೀತಾ ರಾಮಚಂದ್ರ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಜ. ೨೨ರಂದು ನಡೆಯುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಸಕಲ ಸದ್ಭಕ್ತರು ಅಖಂಡ ರಾಮನಾಮ ಸ್ಮರಣೆ ಕಾರ್ಯಕ್ರಮ ನಡೆಯಿತು.
ಶ್ರೀರಾಮ ಜಯರಾಮ ಜಯಜಯ ರಾಮ ಎಂಬ ನಾಮವನ್ನು ೧೦೮ ಬಾರಿ ಜಪಿಸಿದರು. ೧೧ ಬಾರಿ ಜಪ ಮಾಡುವ ಮೂಲಕ ಏಕಕಾಲಕ್ಕೆ ಮಹಿಳೆಯರಿಂದ ಹೊರಬಂದ ರಾಮನಾಮ ಜಪದ ಸ್ವರಗಳು ಗಮನ ಸೆಳೆದವು.
ಜ.೨೨ರಂದು ಗಂಜಿಪೇಟೆಯ ಶ್ರೀಸೀತಾರಾಮ ಮಂದಿರದಲ್ಲಿ ರಾಮತಾರಕ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಗಳು ನಡೆಯಲಿದೆ. ಪತ್ತಾರಗಲ್ಲಿಯ ವಿಶ್ವನಾಥ ಸೀತಾ ರಾಮಚಂದ್ರ ದೇಗುಲದಲ್ಲಿ ಶ್ರೀರಾಮ ಮೂರ್ತಿಗೆ ಅಭಿಷೇಕ, ಅಲಂಕಾರ ವಿಶೇಷ ಪೂಜೆಯೊಂದಿಗೆ ಸಕಲ ಭಕ್ತರಿಗೆ ಅನ್ನಸಂತರ್ಪಣೆಗೆ ಸಿದ್ಧತೆ ಮಾಡಲಾಗಿದೆ. ಸಂಜೆ ಪಟ್ಟಣದ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ರಾಮನಾಮ ಜಪ, ದೀಪೋತ್ಸವ ಕಾರ್ಯಕ್ರಮಗಳು ವೈಭವ ಪೂರ್ವಕವಾಗಿ ನಡೆಯಲಿದೆ.ಶ್ರೀರಾಮ ಮಂದಿರ ನಿರ್ಮಾಣದ ಉದ್ಘಾಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ಗ್ರಾಮಗಳಲ್ಲಿ ಹಿಂದೂಗಳೆಲ್ಲರೂ ಸಂಭ್ರಮ ಸಡಗರದಿಂದ ದೀಪಾವಳಿ ಹಬ್ಬದಂತೆ ಆಚರಿಸಲು ಮುಂದಾಗಿದ್ದಾರೆ.