- ಹರಿಹರ ನಗರ ಕ್ರೀಡಾ ಇಲಾಖೆ ವಾಣಿಜ್ಯ ಸಂಕೀರ್ಣದಲ್ಲಿ ಕ್ಯಾಂಟೀನ್ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಹರಿಹರ
ಮಹಿಳೆಯರ ಆರ್ಥಿಕ ಸಬಲತೆಗಾಗಿ ರಾಜ್ಯ ಸರ್ಕಾರ ಅಕ್ಕ ಕೆಫೆ ಕ್ಯಾಂಟೀನ್ ಯೋಜನೆ ಆರಂಭಿಸಿದೆ ಎಂದು ಸಂಸದೆ ಡಾ.ಪ್ರಭಾ ಹೇಳಿದರು.ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪಕ್ಕದ ಯುವಜನ ಸೇವೆ ಕ್ರೀಡಾ ಇಲಾಖೆ ವಾಣಿಜ್ಯ ಸಂಕೀರ್ಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ- ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಅರಂಭಿಸಿದ ಅಕ್ಕ ಕೆಫೆ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ರಾಜ್ಯ ಬಜೆಟ್ನಲ್ಲಿ ಘೋಷಿಸಿದಂತೆ ಸರ್ಕಾರ ರಾಜ್ಯದಲ್ಲಿ 50 ಅಕ್ಕ ಕೆಫೆ ಆರಂಭಿಸಿದೆ. ದಾವಣಗೆರೆಯ ಅರುಣ ಚಿತ್ರ ಮಂದಿರದ ಬಳಿ ಹಾಗೂ ಹರಿಹರದಲ್ಲಿ ಒಂದು ಕೆಫೆ ಆರಂಭಿಸಿದೆ. ಕೈಗೆಟುವ ದರದಲ್ಲಿ ಶುಚಿ, ರುಚಿಯಾದ ಆಹಾರ ಒದಗಿಸುವುದು ಯೋಜನೆ ಉದ್ದೇಶವಾಗಿದೆ ಎಂದರು.ಮಹಿಳೆಯರ ಸಬಲತೆ ದೃಷ್ಟಿಯಿಂದ ಸರ್ಕಾರವೇ ₹15 ಲಕ್ಷ ವೆಚ್ಚ ಮಾಡಿ ಕೆಫೆಯಲ್ಲಿ ಹೋಟಲ್ಗೆ ಬೇಕಾದ ಪರಿಕರಗಳನ್ನು ರೂಪಿಸಿದೆ, ಸ್ವಸಹಾಯ ಸಂಘಕ್ಕೆ ಈ ಮಳಿಗೆ ಉಚಿತವಾಗಿ ನೀಡಲಾಗಿದೆ. ಉತ್ತಮವಾಗಿ ನಡೆದರೆ ಈ ಸಂಘಕ್ಕೆ ಕೆಫೆ ನಿರ್ವಹಣೆ ಜವಾಬ್ದಾರಿ ಮುಂದುವರಿಸಲಾಗುವುದು ಎಂದರು.
ಹೋಟಲ್ ವ್ಯಾಪಾರ, ಶುಚಿ, ರುಚಿಯಿಂದ ಅಡುಗೆ ತಯಾರಿಕೆ, ಲೆಕ್ಕಪತ್ರ ನಿರ್ವಹಣೆ ಸೇರಿದಂತೆ ಈ ಉದ್ಯಮ ನಡೆಸಲು ಅಗತ್ಯ ಕುಶಲತೆಯ ತರಬೇತಿ ಕೇರಳದ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತಿದೆ. ಊಟ, ತಿಂಡಿಗಳಿಗೆ ಕೈಗೆಟುವ ದರ ಇರುವದರಿಂದ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕೆಂದು ಕೋರಿದರು.ಆರಂಭದಲ್ಲಿ ಆಗಮಿಸಿದ ಶಾಸಕ ಬಿ.ಪಿ.ಹರೀಶ್ ಆಗಮಿಸಿ ಶುಭ ಹಾರೈಸಿ ತೆರಳಿದರು. ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಸದಸ್ಯರಾದ ಎಂ.ಆರ್.ಮುಜಮ್ಮಿಲ್ (ಬಿಲ್ಲು), ಸೈಯದ್ ಅಬ್ದುಲ್ ಅಲೀಂ, ಕೆ.ಬಿ.ರಾಜಶೇಖರ್, ಸಂತೋಷ್ ದೊಡ್ಮನಿ, ಜೆಡಿಎಸ್ ಮುಖಂಡ ಮಾರುತಿ ಬೇಡರ್, ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ತಹಸೀಲ್ದಾರ್ ಗುರುಬಸವರಾಜ್, ತಾಪಂ ಇಒ ಸುಮಲತ ಎಸ್.ಪಿ., ಇತರರಿದ್ದರು.
- - -(ಕೋಟ್) ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ವಿಷಯವಾಗಿ ಸಚಿವರ ಸಭೆಯಲ್ಲಿ ಚರ್ಚಿಸಲಾಗುವುದು, ಶಾಸಕ ಡಾ.ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ ಜಾತಿಗಣತಿ ವರದಿ ಕುರಿತು ಆತಂಕ ಬೇಡ ಎಂದಿದ್ದಾರೆ. ಜಾತಿಗಣತಿ ಆಗುಹೋಗುಗಳ ಬಗ್ಗೆ ನಿರ್ಣಯಿಸಲು ಸರ್ಕಾರ ಉಪಸಮಿತಿ ರಚಿಸುವ ಅಥವಾ ಇತರೆ ಉಪಕ್ರಮಗಳನ್ನು ಕೈಗೊಳ್ಳುವ ಭರವಸೆ ಇದೆ
- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ, ದಾವಣಗೆರೆ ಕ್ಷೇತ್ರ - - --hrr1- 1A:
ಹರಿಹರದ ಬಸ್ ನಿಲ್ದಾಣ ಸಮೀಪ ಗುರುವಾರ ಅಕ್ಕ ಕೆಫೆ ಉದ್ಘಾಟಿಸಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ರಾಗಿ ಮಾಲ್ಟ್ ರುಚಿ ನೋಡಿದರು. -ಹರಿಹರದ ಬಸ್ ನಿಲ್ದಾಣ ಸಮೀಪ ಗುರುವಾರ ಅಕ್ಕ ಕೆಫೆ ಉದ್ಘಾಟಿಸಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನಿರ್ವಹಣೆಯ ಮಾಹಿತಿ ಪಡೆದರು.