ಅಕ್ಕನ ವಚನ ಮಹಿಳೆಯರ ಸುಖ ಜೀವನದ ಸೋಪಾನ

ಇಂದು ಮಹಿಳೆಯರು ಕೌಟುಂಬಿಕ,ಸಾಮಾಜಿಕ ಜೀವನದಲ್ಲಿ ಎದುರಾಗುವ ಅನ್ಯಾಯ, ಅನೀತಿ, ಅತ್ಯಾಚಾರಗಳನ್ನು ಪ್ರತಿಭಟಿಸುವ ಶಕ್ತಿವಂತರಾಗಬೇಕು

KannadaprabhaNewsNetwork | Published : Apr 26, 2024 7:47 PM IST

ಗದಗ: ಇಂದು ಮಹಿಳೆಯರು ಸಾಕಷ್ಟು ಸೌಲಭ್ಯಗಳ ಅನುಕೂಲತೆಯಿಂದ ಐಷಾರಾಮಿ ಜೀವನ ನಡೆಸುತ್ತಿದ್ದರೂ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ ಇಲ್ಲದಾಗಿವೆ. ಯಾವುದೇ ಹೆಚ್ಚಿನ ಸೌಲಭ್ಯಗಳು ಇಲ್ಲದ ಅಂದಿನ ಕಾಲದಲ್ಲಿ ಅಕ್ಕಮಹಾದೇವಿ ಅನೇಕ ಸಂಕಷ್ಟ ಎದುರಿಸಿ ಶಾಂತಿ, ಸಮಾಧಾನಕರದಿಂದ ಬಾಳಿ ಬದುಕಿದ್ದಳೆಂಬುದಕ್ಕೆ ಅಕ್ಕಮಹಾದೇವಿಯ ಅನೇಕ ವಚನಗಳು ಸಾಕ್ಷಿಯಾಗಿವೆ ಎಂದು ಎಂದು ನಿವೃತ್ತ ಶಿಕ್ಷಕಿ ಶಾಂತಾ ಕುಂದಗೋಳ ಹೇಳಿದರು.

ನಗರದ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಎಸ್.ವೈ.ಬಿ.ಎಂ.ಎಸ್.ಯೋಗ ಪಾಠ ಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ವತಿಯಿಂದ ನಡೆದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಶರಣೆ ಅಕ್ಕಮಹಾದೇವಿ ವಚನಗಳು ಮಹಿಳೆಯರ ಸುಖ ಜೀವನದ ಸೋಪಾನಗಳಾಗಿವೆ. ಮಹಿಳೆಯರಾದ ನಾವೆಲ್ಲರೂ ಇಂದು ಆಡಂಬರ, ಐಷಾರಾಮಿ ಜೀವನಕ್ಕೆ ಹೆಚ್ಚಿನ ಗಮನ ಕೊಡದೇ ಆದರ್ಶಮಯ, ಸುಖಮಯ, ಸಮಾಧಾನಕರ, ಶಾಂತಿ, ನೆಮ್ಮದಿಯ ಬದುಕಿಗಾಗಿ ಅಕ್ಕನ ತತ್ವಾದರ್ಶ ಪರಿಪಾಲಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಮಾತನಾಡಿ, ಅಕ್ಕಮಹಾದೇವಿ ಅಂದು ಅನುಭವ ಮಂಟಪದಲ್ಲಿ ಶರಣರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಎಲ್ಲರಿಗೂ ಅಕ್ಕನಾದಂತೆ ಇಂದು ಮಹಿಳೆಯರು ಕೌಟುಂಬಿಕ,ಸಾಮಾಜಿಕ ಜೀವನದಲ್ಲಿ ಎದುರಾಗುವ ಅನ್ಯಾಯ, ಅನೀತಿ, ಅತ್ಯಾಚಾರಗಳನ್ನು ಪ್ರತಿಭಟಿಸುವ ಶಕ್ತಿವಂತರಾಗಬೇಕು. ಅದಕ್ಕಾಗಿ ಅಕ್ಕನ ಜೀವನ ಚರಿತ್ರೆ ಆಧಾರವಾಗಿಟ್ಟುಕೊಳ್ಳಬೇಕೆಂದು ಹೇಳಿದರು.

ಮಾಜಿ ಅಧ್ಯಕ್ಷೆ ಜಯಶ್ರೀ ವಸ್ತ್ರದ, ಹಿರಿಯ ಸದಸ್ಯೆ ಗಿರಿಜಕ್ಕ ನಾಲತ್ವಾಡಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೀಣಾ ಮಾಲಿಪಾಟೀಲ, ಶಕುಂತಲಾ ಬೆಲ್ಲದ, ಅರುಣಾ ಇಂಗಳಳ್ಳಿ, ಗಿರಿಜಾ ಅಂಗಡಿ, ಪ್ರೇಮಾ ಗಾಣಿಗೇರ, ಶೋಭಾ ಭಾಂಡಗೆ, ಮಹಾದೇವಿ ಚರಂತಿಮಠ ಇನ್ನಿತರ ಸದಸ್ಯರು ಇದ್ದರು.

ಗೌರಿ ಜಿರಂಕಳಿ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಮೇಕಳಿ ಸ್ವಾಗತಿಸಿದರು. ಕಾರ್ಯದರ್ಶಿ ಸುಲೋಚನಾ ಐಹೊಳ್ಳಿ ನಿರೂಪಿಸಿದರು.

Share this article