ಕನ್ನಡಪ್ರಭ ವಾರ್ತೆ ನಂಜನಗೂಡು ರೈತರು ಕೇವಲ ಕೃಷಿಗೆ ಮಾತ್ರ ಸೀಮಿತವಾಗದೆ ಬೆಳೆಗಳನ್ನು ಸಂರಕ್ಷಣೆ ಮಾಡಿ ಉದ್ಯಮಿಗಳಾಗಿ ಬದಲಾವಣೆ ಹೊಂದಬೇಕು, ಆಗ ಮಾತ್ರ ಕೃಷಿ ಲಾಭದಾಯಕವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ ಹೇಳಿದರು. ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ನೂತನ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.ಆಳುವ ಸರ್ಕಾರಗಳ ನಿರ್ಲಕ್ಷ್ಯತನದಿಂದ ಪ್ರತಿದಿನ ರೈತರ ಆತ್ಮಹತ್ಯೆಗಳು ನಿರಂತರವಾಗಿವೆ. ರೈತರು ಕೂಡ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯನ್ನು ವಿಷಮಯವಾಗಿಸುತ್ತಿದ್ದಾರೆ, ಇದರಿಂದ ಆಹಾರ ಪದಾರ್ಥಗಳು ವಿಷಮಯಗೊಂಡು ಔಷಧ ಮಾತ್ರೆಗಳಿಂದ ಬದುಕುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ರೈತರು ರಾಸಾಯನಿಕ ಕೃಷಿಯನ್ನು ತೊರೆದು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎಂದರು.ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯನ್ನು ಹುಡುಕುವ ಬದಲಾಗಿ ಬೆಳೆಗಳನ್ನು ಸಂಸ್ಕರಣೆ ಮಾಡಿ ಉದ್ಯಮಿಗಳಾಗುವ ಮೂಲಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು ಆಗ ಮಾತ್ರ ಕೃಷಿ ಲಾಭದಾಯಕವಾಗಲಿದೆ, ರೈತರು ಆತ್ಮಹತ್ಯೆಯ ದಾರಿ ಹಿಡಿಯಬಾರದು ಮುಂದಿನ ದಿನಗಳಲ್ಲಿ ಭೂಮಿ ಇದ್ದವನೇ ಶ್ರೀಮಂತನಾಗುವ ಕಾಲ ಬರುತ್ತದೆ ಎಂದು ಹೇಳಿದರು. ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ರೈತರು ರಾಸಾಯನಿಕ ಕೃಷಿ ಪದ್ಧತಿಯನ್ನು ತೊರೆದು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು, ಈ ನಿಟ್ಟಿನಲ್ಲಿ ರೈತ ಸಂಘಟನೆಗಳು ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದ ಅವರು, ನಾನು ಒಬ್ಬ ರೈತನ ಮಗನಾಗಿ ಕೃಷಿಯನ್ನು ಅವಲಂಬಿಸಿರುವುದರಿಂದ ರೈತರ ಸಂಕಷ್ಟಗಳ ಬಗ್ಗೆ ನನಗೂ ಅರಿವು ಇದೆ, ಕಾಡಂಚಿನ ಭಾಗಗಳಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷವನ್ನು ತಪ್ಪಿಸುವ ಸಲುವಾಗಿ ರೈಲ್ವೆ ಬ್ಯಾರಿಕೆಡ್ ಮತ್ತು ಮೆಸ್ ಅಳವಡಿಕೆ ಕಾರ್ಯವನ್ನು ನಡೆಸಲಾಗಿದೆ, ನಮ್ಮ ಸರ್ಕಾರ ರೈತ ಪರವಾಗಿದ್ದು, ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೈಸೂರು ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎನ್. ಸದಾನಂದ, ಹೇಮಂತ್ ಗೌಡ, ಹರೀಶ್ ಗೌಡ, ಜಗದೀಶ್, ಮಂಜುನಾಥ್ ಗೌಡ, ಪುನೀತ್, ಅಪ್ಪು, ಗಿರೀಶ್, ರವಿಕುಮಾರ್, ಮಹದೇವು, ರೈತ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.