- ಒಳಪಂಗಡ ಮರೆತು ನೇಕಾರರೆಂದು ದಾಖಲಿಸಬೇಕು: ಒಕ್ಕೂಟದ ಸೋಮಶೇಖರ್ ಸಲಹೆ - - -
ರಾಜ್ಯಾದ್ಯಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ನೇಕಾರ ಸಮುದಾಯದ 29 ಒಳ ಪಂಗಡದವರೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಕೈಗೊಳ್ಳುವ ಜಾತಿಗಣತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ ಹೇಳಿದರು.
ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಹಮ್ಮಿಕೊಂಡಿದ್ದ ಸಮಾಜದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕೈಗೊಂಡಿದ್ದ ಜಾತಿಗಣತಿಯಲ್ಲಿ ಅಖಂಡ ನೇಕಾರ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಹಿನ್ನೆಲೆ ಒಕ್ಕೂಟ ಕೈಗೊಂಡ ಜಾತಿಗಣಿಯಲ್ಲಿ ನೇಕಾರ ಬಾಂಧವರು ಸ್ವಪ್ರೇರಣೆಯಿಂದ ಭಾಗಿಯಾಗಬೇಕು ಎಂದರು.ನೇಕಾರ ಸಮಾಜವು 29 ಉಪ ಜಾತಿಗಳಲ್ಲಿ ಹಂಚಿಹೋಗಿದೆ. ಅವೆಲ್ಲವನ್ನೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದಡಿ ತರುವ ಕೆಲಸವನ್ನು ಸಮಾಜವು ಮಾಡುತ್ತಿದೆ. ಸಮಾಜ ಬಾಂಧವರು ಒಳ ಪಂಗಡಗಳನ್ನು ಮರೆತು, ನೇಕಾರ ಸಮುದಾಯದ ಹೆಸರಿನಲ್ಲಿ ಒಂದಾಗಬೇಕು ಎಂದರು.
ನೇಕಾರ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಉಮಾ ಜಗದೀಶ ಮಾತನಾಡಿ, ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಮಹಿಳಾ ಸಂಘಟನೆ ಬಲಗೊಳ್ಳಬೇಕಿದೆ. ಮಹಿಳೆಯರು ಒಂದಾಗಿ ನಿಂತರೆ ಸಮಾಜ ಸಂಘಟನೆ ಅತ್ಯಂತ ಸುಲಭವಾಗುತ್ತದೆ. ಒಬ್ಬ ಮಹಿಳೆ ಸಂಘಟನೆಯಲ್ಲಿ ತೊಡಗಿದರೆ ಆ ಮನೆಯ ಎಲ್ಲ ಸದಸ್ಯರೂ ಸಂಘಟನೆ ವ್ಯಾಪ್ತಿಗೆ ಬಂದಷ್ಟು ಪರಿಣಾಮಕಾರಿ ಆಗಿರುತ್ತದೆ. ಮಹಿಳೆಯರು ಸಂಘಟನೆಗೆ ತೊಡಗಿದರೆ ಸಮಾಜದ ಬಲವರ್ಧನೆಗೆ ಹೊಸ ಆಯಾಮ ಸಿಕ್ಕಂತಾಗುತ್ತದೆ ಎಂದರು.
ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ, ಬೆನಕಲ್ಲಪ್ಪ ಬುಗಡೆ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ ಶೆಟ್ಟರ್, ಸಮಾಜದ ಮುಖಂಡ ಎಸ್.ಟಿ.ಪಿ.ತಿಪ್ಪೇಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಯೋತಿ, ಚಿನ್ನಿಕಟ್ಟೆ ಶ್ರೀನಿವಾಸ, ಎಸ್.ಕೆ.ಬಸವರಾಜ, ಧನಂಜಯ ಶೆಟ್ಟಿಗಾರ್, ಶ್ರೀಕಾಂತ ಕಾಕಿ, ಡಿ.ಎಸ್.ಕೆ.ಪರಶುರಾಮ, ಗಿರಿಮಲ್ಲೇಶ ಕನಕಿ, ರಮೇಶ ಜಂಬಣ್ಣ, ಸಿಎ ಗಣಪಿ, ಜಿಎಂಐಟಿ ರಘುರಾಮ ಇತರರು ಇದ್ದರು.- - -
-25ಕೆಡಿವಿಜಿ6, 7.ಜೆಪಿಜಿ:ದಾವಣಗೆರೆ ತೊಗಟವೀರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಾಜ್ಯ ನೇಕಾರ ಒಕ್ಕೂಟದ ನೇತೃತ್ವದಲ್ಲಿ ನಡೆದ ನೇಕಾರರ ಸಮುದಾಯಗಳ ಸಭೆಯಲ್ಲಿ ಅಧ್ಯಕ್ಷ ಬಿಎಸ್ ಸೋಮಶೇಖರ ಇತರರು ಭಾಗವಹಿಸಿದ್ದರು.