ಚಾಮರಾಜನಗರ: ಎಲ್ಲರೂ ಕೂಡ ಧರ್ಮದ ಸಂಸ್ಕಾರವನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಮೂಡುಗೂರು ವಿರಕ್ತ ಮಠಾಧ್ಯಕ್ಷ ಶ್ರೀ ಇಮ್ಮಡಿ ಉದ್ಧಾನ ಸ್ವಾಮೀಜಿ ಕರೆ ನೀಡಿದರು.ನಗರದ ರಥ ಬೀದಿಯಲ್ಲಿ ಶ್ರೀವಿದ್ಯಾಗಣಪತಿ ಮಂಡಳಿಯ 62ನೇ ವರ್ಷದ ಶ್ರೀವಿದ್ಯಾಗಣಪತಿ ಪೂಜಾ ಮಹೋತ್ಸವ ಅಂಗವಾಗಿ ಶ್ರೀ ಅಯೋಧ್ಯೆ ಶ್ರೀ ರಾಮಚಂದ್ರಪ್ರಭು ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭರತಭೂಮಿಯಲ್ಲಿ ಧರ್ಮದ ಸಂಸ್ಕಾರಗಳನ್ನು ಅಳವಡಿಸಿಕೊಂಡು ಎಲ್ಲರೊಡನೆ ಸಂತೋಷದಿಂದ ಬದುಕಬೇಕು. ಧರ್ಮ ಸಂಸ್ಕಾರಗಳನ್ನು ಪಡೆದು ಪುನೀತಾರಾಗಬೇಕು.
ಸಾರ್ವಜನಿಕ ಗಣೇಶೋತ್ಸವ ಮುಖಾಂತರವೇ ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಸಮಾಜ, ನಮ್ಮ ದೇಶವನ್ನು ಬಲಿಷ್ಠಗೊಳಿಸುವಂತಹ ವೇದಿಕೆಗಳಾಗುತ್ತಿವೆ. ಸಾರ್ವಜನಿಕ ಗಣೇಶೋತ್ಸವಗಳು ಬಾಲಗಂಗಾಧರನಾಥ ತಿಲಕ್ ಅವರು ಮನೆಯಲ್ಲಿ ಪೂಜಿಸುತ್ತಿದ್ದ ಗಣೇಶನ್ನು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಸಾರ್ವಜನಿಕ ಗಣೇಶೋತ್ಸವ ಮಾಡಿದರು. ಇಂದು ದೇಶದ ಮೂಲೆಮೂಲೆಯಲ್ಲೂ ಸಾರ್ವಜನಿಕ ಗಣೇಶೋತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತಿವೆ. ಆದರೂ ಕೂಡ ಕೆಲವು ಕಡೆ ಕಿಡಿಗೇಡಿಗಳು ಸಾರ್ವಜನಿಕ ಗಣೇಶೋತ್ಸವದಲ್ಲಿ ಬೆಂಕಿ ಹಚ್ಚುವ ಕೆಲಸಗಳು ನಡಯುತ್ತಿವೆ. ಎಷ್ಟೇ ಅಡ್ಡಿ ಪಡಿಸಿದರೂ ಗಣೇಶೋತ್ಸವ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ನಡೆಯುತ್ತದೆ ಎಂದರು.
ಗಮನ ಸೆಳೆದ ಭರತನಾಟ್ಯ ಪ್ರದರ್ಶನ: ಚರಿತಾ.ಎನ್ ಮತ್ತು ತಂಡ ನಡೆಸಿಕೊಟ್ಟ ಭರತನಾಟ್ಯ ಪ್ರಕಾರಗಳು ವೀಕ್ಷಕರ ಗಮನ ಸೆಳೆಯಿತು. ಕದಳಿ ಮಹಿಳಾ ವೇದಿಕೆ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು.ಶ್ರೀವಿದ್ಯಾ ಗಣಪತಿ ಮಂಡಳಿ ಅಧ್ಯಕ್ಷ ಸುಂದರ್ರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ. ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಶ್ರೀವಿದ್ಯಾ ಗಣಪತಿ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ವಿರಾಟ್ ಶಿವು, ಮಹೇಶ್, ಕಾರ್ಯಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಬುಲೆಟ್ ಚಂದ್ರು, ಶಂಕರ್, ಮಣಿಕಂಠ, ಮಂಜುನಾಥಗೌಡ ಕೂಸಣ್ಣ ರಾಮಪ್ರಸಾದ್, ಹೇಮಂತ್, ರುದ್ರ, ಸಂತೋಷ್, ರಾಜೇಂದ್ರ, ಕೃಷ್ಣ ಇತರರು ಹಾಜರಿದ್ದರು.