ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂಬರ್ 19 ತಾಂತ್ರಿಕ ಲೋಪದಿಂದ ಮುರಿದಿದ್ದು, ಉಳಿದ ಎಲ್ಲ ಗೇಟ್ಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಇಲ್ಲಿನ ಟಿಬಿ ಡ್ಯಾಂ 19ನೇ ಗೇಟ್ ಮುರಿದ ಸ್ಥಳ ವೀಕ್ಷಣೆ ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ಅನ್ನದ ಬಟ್ಟಲು ಆಗಿದೆ. ಹೂಳು ತುಂಬಿರುವುದು ಬಹಳ ದೊಡ್ಡ ಸವಾಲು. ಆದರೆ, ಈಗ ನಡೆದಿರುವ ಘಟನೆ ಎಚ್ಚರಿಕೆ ಗಂಟೆಯಾಗಿದೆ. ಇದರಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇದು ಬಹಳ ಗಂಭೀರವಾದ ವಿಚಾರ. ಯಾರೂ ಇದಕ್ಕೆ ಕಾರಣರಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಇಷ್ಟು ದಿನ ಆಗದಿರುವುದು ಈಗ ಹೇಗಾಯ್ತು? ಎಲ್ಲಿ ಲೋಪ ಅಗಿದೆ ಎಂಬುದು ಗೊತ್ತಾಗಬೇಕು. ಪ್ರಕರಣದ ಕುರಿತು ತನಿಖೆಯಾಗಬೇಕು. ಡ್ಯಾಂ ಎಲ್ಲ ಕ್ರಸ್ಟ್ ಗೇಟ್ಗಳನ್ನು ಪರಿಶೀಲಿಸಬೇಕು ಎಂದರು.ಎಂಜಿನಿಯರ್ಗಳು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹಾಗಾಗಿ ಎಲ್ಲ ಗೇಟ್ಗಳನ್ನು ಪರಿಶೀಲಿಸಬೇಕು. ಮುಂದೆ ಮತ್ತೆ ನೀರು ಬಂದರೆ ಸಮಸ್ಯೆಯಾದರೆ ಯಾರು ಹೊಣೆ? ತನಿಖೆ ಮಾಡಿದರೆ ಎಲ್ಲಿ ವೈಫಲ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಸ್ಟಾಪ್ ಲಾಕ್ ಗೇಟ್ ಹಳೇ ಡ್ಯಾಂಗಳಲ್ಲಿಲ್ಲ. ಇದಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಡ್ಯಾಂಗಳ ಸುರಕ್ಷತೆಗೆ ಕೇಂದ್ರದಂತೆ ರಾಜ್ಯ ಸರ್ಕಾರವೂ ತಜ್ಞರ ತಂಡ ನೇಮಿಸಿ ಆಗಾಗ ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ನಾವು ಇದರಲ್ಲಿ ರಾಜಕಾರಣ ಮಾಡಲ್ಲ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹೇಳಿದಂತೆ ಆಕಸ್ಮಿಕ ಘಟನೆ, ಇದಕ್ಕೆ ಯಾರೂ ಕಾರಣರಲ್ಲ ಎಂಬುದನ್ನು ನಾವು ಒಪ್ಪಲು ಸಾಧ್ಯವಿಲ್ಲ. ತಾಂತ್ರಿಕವಾಗಿ ಇದರಲ್ಲಿ ಲೋಪವಿದ್ದು, ತನಿಖೆಯಾಗಬೇಕು ಎಂದರು.
ಕ್ರಸ್ಟ್ ಗೇಟ್ ಕುಸಿಯಲು ನೀರಿನ ಒತ್ತಡ ಕಾರಣವಾಗಿದೆ. ನಿರ್ವಹಣೆ ಸಮಸ್ಯೆ ಇದೆ. ಗೇಟ್ಗೆ ಸಂಪರ್ಕಿಸುವ ಸಾಕೆಟ್ನಲ್ಲಿ ಲಿಂಕ್ ಕಟ್ ಆಗಿದೆ. ಇದು ವೀಕ್ ಲಿಂಕ್ ಇದೆ. ಒತ್ತಡಕ್ಕೆ ಬಿದ್ದಿದೆ. ಹಾಗಾಗಿ ಜಲಾಶಯದ 33 ಕ್ರಸ್ಟ್ ಗೇಟ್ಗಳ ಪರಿಶೀಲನೆ ನಡೆಸಬೇಕು. ಅಧಿಕಾರಿಗಳ ಲೋಪವೂ ಇದೆ. ನೀರು ರಭಸವಾಗಿ ಬಂದು ಗೇಟ್ ಕಳಚಿ ಬಿದ್ದಿದೆ. ಕ್ಲೋಸರ್ ಸಮಯದಲ್ಲೇ ಎಲ್ಲವನ್ನೂ ಪರಿಶೀಲನೆ ನಡೆಸಬೇಕು. ಈ ರೀತಿ ನಿರ್ಲಕ್ಷ್ಯ ಸಲ್ಲದು ಎಂದರು.ವಿರೋಧ ಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಆಚಾರ್, ಶಾಸಕ ಕೃಷ್ಣನಾಯ್ಕ, ಮುಖಂಡ ಸಿದ್ಧಾರ್ಥ ಸಿಂಗ್ ಮತ್ತಿತರರಿದ್ದರು.