ಇಂದು ಕಾಫಿ ದಸರಾ ಸಂಭ್ರಮಕ್ಕೆ ಸಕಲ ಸಿದ್ಧತೆ

KannadaprabhaNewsNetwork |  
Published : Sep 24, 2025, 01:02 AM IST

ಸಾರಾಂಶ

ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮಗಳು ಆಯೋಜಿತವಾಗಿರುವ ಗಾಂಧಿ ಮೈದಾನ ಕಲಾ ಸಂಭ್ರಮ ವೇದಿಕೆಯಲ್ಲಿ ಕಾಫಿ ಕಂಪು ಮೇಳೈಸಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ಜನೋತ್ಸವ ದಸರಾ ಕಾರ್ಯಕ್ರಮಗಳು ಆಯೋಜಿತವಾಗಿರುವ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.24 ರಂದು ಬುಧವಾರ ಕಾಫಿ ಕಂಪು ಮೇಳೈಸಲಿದೆ. ಕಾಫಿ ದಸರಾದಲ್ಲಿ ಕಾಫಿ ಕೃಷಿ ಸಂಬಂಧಿತ ಮತ್ತು ಕೆಫೆ ಸೇರಿದಂತೆ 45 ಮಳಿಗೆಗಳು ಜನರ ಗಮನ ಸೆಳೆಯಲಿವೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ ಕಳೆದ ವರ್ಷದಿಂದ ಮಡಿಕೇರಿ ದಸರಾಕ್ಕೆ ಪರಿಚಯಿಸಲ್ಪಟ್ಟ ಕಾಫಿ ದಸರಾ ಈ ಬಾರಿಯೂ ಉತ್ತಮ ಸ್ಪಂದನ ದೊರಕುವ ನಿರೀಕ್ಷೆಯಿದೆ. ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಸಹಯೋಗ ನೀಡಿರುವ ಕಾಫಿ ದಸರಾವನ್ನು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ದೇವವೃಂದ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರ ಶಾಸಕ ಎ. ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟರಾಜಾ, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಬಿ.ವೈ.ರಾಜೇಶ್, ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯುತಿಕಾ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಕಾಫಿ ಕೃಷಿ ಮಾಹಿತಿ: ಕಾಫಿ ದಸರಾ ಅಂಗವಾಗಿ ಕಾಫಿ ಕೃಷಿಕರಿಗೆ ಸಾಕಷ್ಟು ಮಾಹಿತಿ ನೀಡುವ ಉಪನ್ಯಾಸ ಕಾರ್ಯಕ್ರಮವನ್ನು ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಏರ್ಪಡಿಸಲಾಗಿದೆ. ಭಾರತೀಯ ಕಾಫಿ ಮಂಡಳಿಯ ಗುಣಮಟ್ಟ ವಿಭಾಗದ ನಿರ್ದೇಶಕ ಡಾ.ಐಚೆಟ್ಟೀರ ಮಂದಪ್ಪ ಕಾಫಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ವಿಚಾರ ಸಂಬಂಧಿತ ಮಾತನಾಡಲಿದ್ದು, ಸಕಲೇಶಪುರದ ಪ್ರಗತಿಪರ ಕೃಷಿಕ ಕರಣ್ ಅವರು ಕಾಫಿ ಕೃಷಿಯಲ್ಲಿ ಇತ್ತೀಚಿನ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕುಶಾಲನಗರದ ಪ್ರಗತಿ ಪರ ಕೃಷಿಕ ಜೆರ್ಮಿ ಡಿಸೋಜಾ ಅವರು ರೋಬಸ್ಟಾ ಕಾಫಿಯಲ್ಲಿ ಕುಬ್ಜ ತಳಿಯ ಬಗ್ಗೆ ಮಾಹಿತಿ ನೀಡಿದರೆ, ಪಶುವೈದ್ಯ ಇಲಾಖೆಯ ಪಾಲಿ ಕ್ಲಿನಿಕ್ ಆಸ್ಪತ್ರೆಗಳ ಸಹಾಯಕ ನಿರ್ದೇಶಕ ಡಾ. ಚೇಂದ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ ಅವರು ಕಾಫಿ ಕೃಷಿಗೆ ಪೂರಕವಾದ ಮಣ್ಣಿನ ಫಲವತ್ತತೆ ಬಗ್ಗೆ ಮಾಹಿತಿ ನೀಡಲಿದ್ದಾರೆ.ಸಾಧಕ ಕಾಫಿ ಬೆಳೆಗಾರರಿಗೆ ಸನ್ಮಾನ: ಕಾಫಿ ದಸರಾ ಅಂಗವಾಗಿ ಜಿಲ್ಲೆಯ 10 ಸಾಧಕ ಕೃಷಿಕರಿಗೆ ಮಧ್ಯಾಹ್ನ 1 ಗಂಟೆಗೆ ಸನ್ಮಾನದ ಗೌರವ ನೆರವೇರಲಿದೆ. ಸುಂಟಿಕೊಪ್ಪ ಬಳಿಯ ಬೆಟ್ಟಗೇರಿ ಎಸ್ಟೇಟ್ ಮಾಲೀಕ ವಿನೋದ್ ಶಿವಪ್ಪ, ಕಿರಗಂದೂರು ಗ್ರಾಮದ ಹಿರಿಯ ಕೃಷಿಕರಾದ ಎಸ್.ಎಂ.ಚಂಗಪ್ಪ, ಪ್ರಗತಿಪರ ಬೆಳೆಗಾರ ಲವ ಎಡದಂಟೆ, ಪೊನ್ನಂಪೇಟೆ ಹುದೂರು ಗ್ರಾಮದ ಸಾಧಕ ಕೃಷಿಕ ಬಿ.ಪಿ. ರವಿಶಂಕರ್, ಕೊಡ್ಲಿಪೇಟೆಯ ಕಾಫಿ ನರ್ಸರಿ ಮಾಲೀಕ ಡಿ.ವೈ.ರಜಾಕ್, ಹಿರಿಯ ಕಾಫಿ ಉದ್ಯಮಿ ಮಡಿಕೇರಿಯ ನಿಜಾಮುದ್ದೀನ್ ಸಿದ್ದಿಕಿ, ತಾಕೇರಿಯ ಸಿರಿ ಸ್ವಸಹಾಯ ಮಹಿಳಾ ಸಂಘ, ಕುಂದಗ್ರಾಮದ ಪ್ರಗತಿ ಪರ ಕೃಷಿಕ ಕೊಡಂದೇರ ನರೇನ್ ಕುಟ್ಟಯ್ಯ, ಚೆಟ್ಟಳ್ಳಿ ಪೊನ್ನತ್ತಮೊಟ್ಟೆಯ ಮಿಶ್ರಬೆಳೆ ಕೃಷಿಕ ರಾಬಟ್೯, ಶ್ರೀ ವಿಕ್ರಂ, ಪ್ರಗತಿ ಪರ ಕೖಷಿಕರು, ಮಸಗೋಡು ಇವರನ್ನು ಸನ್ಮಾನಿಸಲಾಗುತ್ತದೆ.ಅಂತೆಯೇ ಕಾಫಿ ಖಾದ್ಯಗಳ ಸ್ಪರ್ಧೆ ಕೂಡ ಆಯೋಜಿತವಾಗಿದ್ದು ಉತ್ತಮ ಸ್ಪಂದನ ದೊರಕಿದೆ. ಕಾಫಿ ಮಂಡಳಿ, ಕೖಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು, ಕೊಡಗಿನಾದ್ಯಂತಲಿನ 32 ಕಾಫಿ ಕೆಫೆಗಳೂ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತವೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ