ಕಲ್ಯಾಣಿಯಲ್ಲಿ ಗಣೇಶ್‌ ವಿಸರ್ಜನೆಗೆ ಸಕಲ ಸಿದ್ಧತೆ

KannadaprabhaNewsNetwork | Published : Sep 11, 2024 1:12 AM

ಸಾರಾಂಶ

ಕಡೂರು ಪಟ್ಟಣದ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗೆ ಪುರಸಭೆಯ ವತಿಯಿಂದ ಸುತ್ತಲು ಅಳವಡಿಸಿರುವ ಬ್ಯಾರಿಕೇಡ್ ಮತ್ತು ಸುರಕ್ಷತಾ ಕ್ರಮಗಳನ್ನು ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಪಟ್ಟಣದಲ್ಲಿ ಪ್ರತಿಷ್ಠಾಪನೆಗೊಳ್ಳುವ ಪರಿಸರಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪಟ್ಟಣದ ಕೆ.ಹೊಸಳ್ಳಿಯ ಕಲ್ಯಾಣಿಯ ಸುತ್ತಮುತ್ತಲೂ ಪುರಸಭೆಯಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಯಿತು.

ಪಟ್ಟಣದ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಪುರಸಭೆಯಿಂದ ಕಲ್ಯಾಣಿಯ ಸುತ್ತಲು ಬ್ಯಾರಿಕೇಡ್ ಮತ್ತು ವಿದ್ಯುತ್ ದೀಪಗಳು ಹಾಗೂ ಕಲ್ಯಾಣಿಗೆ ನೀರಿನ ಪೂರೈಕೆಯ ವ್ಯವಸ್ಥೆ ಕಲ್ಪಿಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ಪರಿಶೀಲಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರು, ಈ ಬಾರಿಯ ಗಣೇಶ ಹಬ್ಬದ ಹಿನ್ನೆಲೆ ಹಲವು ಸುರಕ್ಷತಾ ನಿಯಮಗಳನ್ನು ಅನುಸರಿಸಲಾಗುತ್ತಿದೆ.

ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಗಳನ್ನು ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ವಿಸರ್ಜನೆಗೆ ಪುರಸಭೆಯಿಂದ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣಿಯ ಸುತ್ತಲೂ ಭದ್ರತೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯೋಜಕರು ಸುರಕ್ಷಿತ ಕ್ರಮವಾಗಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದರ ಜೊತೆಗೆ ಸ್ವಚ್ಛತೆಯ ಕಡೆಗೂ ಪುರಸಭೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, ಪಟ್ಟಣದ ವಾರ್ಡ್‌ಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಗೆ ಪರವಾನಗಿ ಪಡೆಯಲು ಗವಾಕ್ಷಿಯಡಿ ತೆರೆಯಲಾಗಿದೆ.

ಪಟ್ಟಣದ ನಾಗರೀಕರ ಸುರಕ್ಷತೆಯ ಹಿತದೃಷ್ಟಿಯಿಂದ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಉತ್ಸವ ಸಂದರ್ಭದಲ್ಲಿ ಯಾವುದೇ ಸಂಘರ್ಷಗಳು ನಡೆಯದಂತೆ ಮತ್ತು ಬಹುಮುಖ್ಯವಾಗಿ ಕಲ್ಯಾಣಿಯಲ್ಲಿ ವಿಸರ್ಜನೆ ವೇಳೆ ಹೂವು, ಮತ್ತಿತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕ ಸ್ಥಳದಲ್ಲಿ ಇಟ್ಟು ಬಳಿಕ ಮೂರ್ತಿಗಳನ್ನು ವಿಸರ್ಜಿಸಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.

ಈ ವೇಳೆ ಸೈಯ್ಯದ್ ಯಾಸೀನ್, ಚಿನ್ನರಾಜು, ಶ್ರೀನಿವಾಸ್ ಮೂರ್ತಿ, ಜಗದೀಶ್, ವಾಸು ಮತ್ತಿತರಿದ್ದರು.

Share this article