ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನದ ಸಂಸ್ಥಾಪಕ, ಯುವ ನಾಯಕ ಎಂ. ಮಿಥುನ್ ರೈ ನೇತೃತ್ವದಲ್ಲಿ ಅ.1ರಂದು ನಡೆಯಲಿರುವ ದಶಮ ಸಂಭ್ರಮದ ‘ಪಿಲಿನಲಿಕೆ ಪಂಥ-10’ಕ್ಕೆ ಮಂಗಳಾ ಸ್ಟೇಡಿಯಂನ ಕರಾವಳಿ ಉತ್ಸವ ಮೈದಾನ ಸಜ್ಜುಗೊಂಡಿದೆ. ಕಾರ್ಯಕ್ರಮ ಉದ್ಘಾಟನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ, ಈ ಕಾರ್ಯಕ್ರಮಕ್ಕೆ ಶಿವಶರಣ್ ಶೆಟ್ಟಿ ನೇತೃತ್ವದ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದೆ. ಸೆಲೆಬ್ರಿಟಿಗಳ ದಂಡೇ ಪಿಲಿನಲಿಕೆ ಪಂಥಕ್ಕೆ ಆಗಮಿಸಲಿದೆ. ಹೆಸರಾಂತ ಸಿನಿಮಾ ನಟರಾದ ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಕ್ರಿಕೆಟ್ ತಾರೆಗಳಾದ ಅಜಿಂಕ್ಯಾ ರಹಾನೆ, ಜಿತೇಶ್ ಶರ್ಮಾ, ಇಂಡಿಯನ್ ಬಾಕ್ಸರ್ ವಿಜೇಂದ್ರ ಸಿಂಗ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಕಕಾಲಕ್ಕೆ 25 ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗುವುದು. ಜರ್ಮನ್ ಟೆಂಟ್ನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸ್ಪರ್ಧೆಗೆ 10 ತಂಡಗಳು:ಪಿಲಿನಲಿಕೆ ಸ್ಪರ್ಧೆಗೆ ಅಗಸ್ತ್ಯ ಮಂಗಳೂರು, ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್ಸ್, ಮುಳಿಹಿತ್ಲು ಗೇಮ್ಸ್ ಟೀಮ್, ಅನಿಲ್ ಕಡಂಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್, ಪೊಳಲಿ ಟೈಗರ್ಸ್, ಗೋರಕ್ಷನಾಥ ಹುಲಿ ಸೇರಿದಂತೆ 10ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಡಿಕೆಶಿ ಸಹಿತ ಗಣ್ಯರ ಆಗಮನ:ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಸಂಸದರು, ಶಾಸಕರು ಆಗಮಿಸಲಿದ್ದಾರೆ.26 ಲಕ್ಷ ರು. ಒಟ್ಟು ಬಹುಮಾನ:ಪ್ರಥಮ ಬಹುಮಾನ 10 ಲಕ್ಷ ರು., ದ್ವಿತೀಯ 5 ಲಕ್ಷ ರು., ತೃತೀಯ 3 ಲಕ್ಷ ರು. ಸೇರಿದಂತೆ ಒಟ್ಟು 26 ಲಕ್ಷ ರು. ಬಹುಮಾನ ನಿಗದಿಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಹಕಾರಿ ರತ್ನ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಗುವುದು. ಅದೇ ರೀತಿ ಮೂಡುಬಿದಿರೆಯ ಶಾಲೆಯನ್ನು ದತ್ತು ಪಡೆದು ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಮಿಥುನ್ ರೈ ತಿಳಿಸಿದರು.----------ಹುಲಿವೇಷಕ್ಕೆ ಅಂತಾರಾಷ್ಟ್ರೀಯ ಮನ್ನಣೆಹುಲಿಕುಣಿತ ಎನ್ನುವುದು ದೇವರ ಆರಾಧನಾ ಕಲೆ. ಈ ಕಲೆಗೆ ಶಾಶ್ವತ ವೇದಿಕೆ ನಿರ್ಮಿಸಿ, ಅಶಕ್ತ ಕಲಾವಿದರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವ ಪಿಲಿನಲಿಕೆ ಪ್ರತಿಷ್ಠಾನದ ಪ್ರಯತ್ನ ಕಾರ್ಯರೂಪಕ್ಕೆ ಬರುತ್ತಿದೆ. ಪಿಲಿನಲಿಕೆ ಪಂಥದ ಮೂಲಕ ಪ್ರವರ್ಧಮಾನಕ್ಕೆ ಬಂದ, ಕಳೆದ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ ತಂಡಕ್ಕೆ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ನಲ್ಲಿ ಅವಕಾಶ ದೊರೆತಿದೆ. ಅವರ ಪ್ರದರ್ಶನ ನೋಡಲು ಇಡೀ ವಿಶ್ವ ಕಾಯುತ್ತಿದೆ. ಪಿಲಿನಲಿಕೆ ಪಂಥದ 10ನೇ ವರ್ಷದ ಸಾಧನೆ ಇದು ಎಂದು ಮಿಥುನ್ ರೈ ಹೇಳಿದರು.