ಗದಗ: ತಾಲೂಕಿನ ಕಳಸಾಪುರಿನ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಬೃಹತ್ ಕುಂಭ ಮೆರವಣಿಗೆ ಜರುಗಿತು.
ಓಂಕಾರಗಿರಿ ಓಂಕಾರೇಶ್ವರ ಶ್ರೀಮಠದ ಫಕೀರೇಶ್ವರ ಶಿವಾರ್ಚಾಯರು ಸಾನ್ನಿಧ್ಯ ವಹಿಸಿ ಮಾತನಾಡಿ, ದೇಹ ಎನ್ನುವುದು ಕಾಮ, ಕ್ರೋಧ, ಲೋಭ, ಮೋಹ, ಮತ್ಸರ, ಮದ ಎಂಬ ಬುನಾದಿಗಳನ್ನು ತುಂಬಿದ ಬಂಡಿಯಾಗಿದೆ. ರೈತರ ಬಂಡಿಗೆ ಕಬ್ಬಿಣದ ಕೀಲು ಆಸರೆಯಾದರೆ, ದೇಹದ ಈ ಬಂಡಿಗೆ ವಚನಗಳೇ ಕೀಲವಾಗಬೇಕಿದೆ ಎಂದು ಹೇಳಿದರು.
ಪ್ರವಚನಕಾರ ಶಿವಲಿಂಗಯ್ಯಶಾಸ್ತ್ರಿಗಳು ಸಿದ್ದಾಪುರ ಮಾತನಾಡಿ, ಸಪ್ತಸೂತ್ರಗಳು ಮನುಷ್ಯನ ಜೀವನದಲ್ಲಿ ಅಳವಡಿಸಿಕೊಂಡಾಗ ಕೋರ್ಟು-ಕಚೇರಿಗಳ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಬಸವಣ್ಣನವರು ಏಳು ಸೂತ್ರಗಳಲ್ಲಿ ತಮ್ಮ ವಚನಗಳಲ್ಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂದು ಹೇಳಿದ್ದಾರೆ ಎಂದರು.ಮಹಾತ್ಮ ಗಾಂಧೀಜಿ ಇದೇ ದೇಶದ ಜನತೆಗೆ ಕೂಡ ಮಾನವ ಬದುಕಿಗೆ ಏಳು ಸೂತ್ರಗಳು ಬಹುಮುಖ್ಯ ಎಂದು ಹೇಳಿದ್ದಾರೆ. ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಏಳು ಸೂತ್ರಗಳನ್ನು ಅಳವಡಿಸಿಕೊಂಡು ಸಾಮಾನ್ಯರು ಶರಣರಾಗಬಹುದು ಎಂದು ಹೇಳಿದರು.