ಜನಪದದಿಂದಲೇ ಜಗತ್ತಿನ ಎಲ್ಲ ಸಾಹಿತ್ಯಗಳ ಉಗಮ: ಬೆಳ್ಳಟ್ಟಿ ಶ್ರೀಬಸವರಾಜ ಸ್ವಾಮೀಜಿ

KannadaprabhaNewsNetwork | Published : Dec 10, 2024 12:31 AM

ಸಾರಾಂಶ

ಜನಪದ ವಿದ್ವಾಂಸರಾದ ಡಾ. ಸಿದ್ದಣ್ಣ ಜಕಬಾಳ ಅವರಿಗೆ ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಗದಗ: ವ್ಯಕ್ತಿ ಸತ್ತ ಮೇಲೆ ಆತ ಮಾಡಿದ ಮಹತ್ಕಾರ್ಯಗಳು, ಶೋಧನೆಗಳು, ಸಂಶೋಧನೆಯು ಹಾಗೇಯೇ ಉಳಿಯಬೇಕು, ಇತರರಿಗೆ ಉಪಯೋಗವಾಗಬೇಕು ಎನ್ನುವಂತೆ ಸಿ.ವಿ. ಕೆರಿಮನಿಯವರು ಬದುಕಿದ್ದಾರೆ ಎಂದು ರಾಮಲಿಂಗೇಶ್ವರ ದಾಸೋಹಮಠ ಬೆಳ್ಳಟ್ಟಿ ಶ್ರೀಬಸವರಾಜ ಸ್ವಾಮಿಗಳು ಹೇಳಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೊ. ಸಿ.ವಿ. ಕೆರಿಮನಿ ದತ್ತಿ ಕಾರ್ಯಕ್ರಮ ಹಾಗೂ ಜನಪದ ವಿದ್ವಾಂಸರಾದ ಡಾ. ಸಿದ್ದಣ್ಣ ಜಕಬಾಳ ಅವರಿಗೆ ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಗತ್ತಿನ ಎಲ್ಲ ಸಾಹಿತ್ಯಗಳು ಜನಪದ ಸಾಹಿತ್ಯದಿಂದಲೇ ಉಗಮವಾಗಿವೆ ಎನ್ನುವ ಭಾವ ಡಾ. ಜಕಬಾಳ ಅವರ ಮಾತುಗಳನ್ನು ಕೇಳಿದಾಗ ಗೋಚರವಾಗುತ್ತಿದೆ. ಆಡು ಭಾಷೆಯಲ್ಲಿ ತಮ್ಮ ಅಭಿಲಾಷೆಗಳನ್ನು ಪ್ರಕಟಿಸಲು ಬುದ್ಧಿವಂತರು ತಾಳ-ಮೇಳಗಳನ್ನು ಮಿಶ್ರಣ ಮಾಡಿ ಹಾಡುವ ಜನಪದ ಹಾಡುಗಳು ವಿಶಿಷ್ಟವಾಗಿವೆ ಎಂದರು.

ಶಿಕ್ಷಕ ಪೂರ್ಣಾಜಿ ಕರಾಟೆ ಮಾತನಾಡಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರವನ್ನು ಕಾರ್ಯಕ್ಷೇತ್ರ ಮಾಡಿಕೊಂಡು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಸರಸ್ವತಿಯ ಸೇವೆ ಮಾಡಿದ ಕೆರಿಮನಿ ಅವರು ಅರ್ಪಣಾ ಮನೋಭಾವದ ಕನ್ನಡ ಪ್ರಾಧ್ಯಾಪಕ, ಪ್ರಾಚಾರ್ಯ ಸೃಜನಶೀಲ ಸಾಹಿತಿಗಳಾಗಿ ಅಪಾರ ಶಿಷ್ಯ ಬಳಗ ಹೊಂದಿ ಮೂವತ್ತಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ ಎಂದರು.ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಹೆಸರಾಂತ ಜನಪದ ವಿದ್ವಾಂಸರಾದ ಡಾ. ಜಕಬಾಳ ಉಪನ್ಯಾಸ ಪ್ರಾತ್ಯಕ್ಷಿಕೆಗಳ ಮೂಲಕ ಜನಪದ ಕಲಾ ಪ್ರಕಾರಗಳನ್ನು ಇಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. 17ಕ್ಕೂ ಅಧಿಕ ಪುಸ್ತಕಗಳನ್ನು ನೂರಾರು ಲೇಖನಗಳನ್ನು ಬರೆದು ರಾಷ್ಟ್ರ ಹಾಗೂ ರಾಜ್ಯಮಟ್ಟದ ಅನೇಕ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ನವೀನ ವಿಚಾರಗಳನ್ನು ಮಂಡಿಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಮನಗಂಡು ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ ದತ್ತಿ ಪ್ರಶಸ್ತಿಯನ್ನು ಪರಿಷತ್ತಿನಲ್ಲಿ ಸ್ಥಾಪಿಸಿ ಪ್ರಥಮವಾಗಿ ನೀಡಿ ಗೌರವಿಸಲಾಗುತ್ತಿದೆ ಎಂದರು.

ಈ ವೇಳೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಎ.ಬಿ. ಹಿರೇಮಠ ಮಾತನಾಡಿದರು. ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ ಪ್ರಶಸ್ತಿಯನ್ನು ಡಾ. ಸಿದ್ದಣ್ಣ ಜಕಬಾಳ ಅವರಿಗೆ ಪ್ರದಾನ ಮಾಡಲಾಯಿತು. ಬಿಜಾಪುರ ಜಿಲ್ಲೆಯ ಆಲಮೇಲ್ ತಾಲೂಕಿನಲ್ಲಿ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಕೆ. ಎಚ್ ಶಾಸ್ತ್ರಿ (ಕಡಣಿ) ಅವರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಪ್ರೊ. ಎ.ಬಿ. ಹಿರೇಮಠ, ಡಾ. ಸಿದ್ದಣ್ಣ ಜಕಬಾಳ, ಲಲಿತಾ ಸಿ. ಕೆರಿಮನಿ, ಶಿವಾನಂದ ಗಿಡ್ನಂದಿ, ಈಶ್ವರ ಮೆಡ್ಲೇರಿ, ಡಿ.ಎಸ್. ಬಾಪುರಿ, ಡಾ. ದತ್ತಪ್ರಸನ್ನ ಪಾಟೀಲ, ಚಂಬಣ್ಣ ಬಾಳಿಕಾಯಿ, ರಮೇಶ ನವಲೆ, ಎಸ್.ಎಫ್.ಆದಿ, ಕೊತ್ತಮ ಮಹದೇವಪ್ಪ, ಸುರೇಶ ರಾಜನಾಯ್ಕರ, ಜೆ.ಎಸ್. ರಾಮಶೆಟ್ರ, ಗಂಗಾಧರ ಅರಳಿ, ಬಿ.ಎಸ್. ಬಾಳೇಶ್ವರಮಠ, ಸಿ.ಎಂ. ಕಗ್ಗಲಗೌಡ್ರ, ಡಾ. ಎಸ್.ಎಸ್. ವೆಂಕಟಾಪುರ, ಎಸ್.ಎಸ್. ಸೂಳಿಕೇರಿ, ಸಿ.ಎಂ. ಮಾರನಬಸರಿ, ಜಯದೇವ ಮೆಣಸಗಿ, ಶಿಲ್ಪಾ ಮ್ಯಾಗೇರಿ, ಪ್ರತಿಮಾ ಮಹಾಜನಶೆಟ್ಟರ, ಜಯಶ್ರೀ ಮೆಳ್ಳಿಗೇರಿ, ಅಕ್ಕಮಹಾದೇವಿ ಮಳಲಿ, ಮಾಲಾದೇವಿ ದಂದರಗಿ, ನಿರ್ಮಲಾ ಅಡವಿ, ಮಹಾನಂದಾ ಕೊಣ್ಣೂರ, ನಂದಾ ಧರ್ಮಾಯತ, ಅಶ್ವಿನಿ ಅಂಕಲಕೋಟಿ, ಮಂಜುಳಾ ವೆಂಕಟೇಶಯ್ಯ, ಅನಿತಾ ಜಕಬಾಳ, ಶೈಲಜಾ ಗಿಡ್ನಂದಿ, ಉಮಾ ಪಾಟೀಲ, ಶಶಿಕಾಂತ ಕೊರ್ಲಹಳ್ಳಿ, ಬಸವರಾಜ ಗಣಪ್ಪನವರ ಇದ್ದರು.

ಶಾಂತಲಾ ಹಂಚಿನಾಳ ಪ್ರಾರ್ಥಿಸಿದರು. ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಸೋಮಶೇಖರ ಕೆರಿಮನಿ ವಂದಿಸಿದರು.

Share this article