ಒಕ್ಕಲಿಗರ ಸಂಘದ ಎಂಕೆಸಿಪಿಎಂ ಪಿಯುಕಾಲೇಜಿನ ಪ್ರಥಮ ವರ್ಷದ ಸ್ವಾಗತ ಕಾರ್ಯಕ್ರಮ
ಪ್ರಪಂಚದ ಎಲ್ಲಾ ತಂತ್ರಜ್ಞಾನ ಮನುಷ್ಯನ ಮೆದುಳಿನ ಕೊಡುಗೆಗಳೇ ಆಗಿವೆ ಎಂದು ಶಿವಮೊಗ್ಗದ ಡಾ.ಅಶೋಕ್ ಪೈ ವಿದ್ಯಾ ಸಂಸ್ಥೆಯ ಪ್ರಾಚಾರ್ಯ ಹಾಗೂ ಸಮಾಲೋಚಕಿ ಸಂಧ್ಯಾ ಕಾವೇರಿ ತಿಳಿಸಿದರು.
ಬುಧವಾರ ಪಟ್ಟಣದ ಒಕ್ಕಲಿಗರ ಸಂಘದ ಎಂಕೆಸಿಪಿಎಂ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನವನ್ನು ನಾವು ಸರಿಯಾದ ಸಮಯದಲ್ಲಿ ಮತ್ತು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಸದ್ವಿನಿಯೋಗ ಪಡಿಸಿಕೊಂಡರೆ ತಂತ್ರಜ್ಞಾನ ಯಶಸ್ಸು ಕಾಣುತ್ತದೆ. ನಮ್ಮ ಸಮಸ್ಯೆ ಗಳನ್ನು ಬೇರೆಯವರ ಮೇಲೆ ಹೇರದೆ ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಂಡರೆ ನಮ್ಮ ಜೀವನದ ಮುಂದಿನ ಹಾದಿ ಸುಗಮವಾಗುತ್ತದೆ ಎಂದರು.ಬೇರೆ, ಬೇರೆ ಕುಟುಂಬದ ಹಿನ್ನೆಲೆ ಹೊಂದಿದ ಹಾಗೂ ಬೇರೆ ವಾತಾವರಣದಿಂದ ಇಲ್ಲಿನ ಕಾಲೇಜಿಗೆ ಬಂದು ಒಂದೇ ಕಡೆ ಶಿಕ್ಷಣ ಕಲಿಯಂತೆ ಮಾಡುವುದು ಅತ್ಯಂತ ಮೌಲ್ಯಯುತವಾಗಿದೆ. ಇಲ್ಲಿನ ಒಕ್ಕಲಿಗರ ಸಂಘದ ವಿದ್ಯಾ ಸಂಸ್ಥೆ ತನ್ನ ಇತಿ ಮಿತಿ ಆದಾಯದಲ್ಲಿ ಎಲ್ಲಾ ರೀತಿಯ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಪದ್ಮ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷೆ ವನಮಾಲಮ್ಮ, ನಿಕಟಪೂರ್ವ ಅಧ್ಯಕ್ಷ ಡಿ.ಸಿ.ದಿವಾಕರ, ಜಂಟಿ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ಖಜಾಂಚಿ ಕಟಗಳಲೆ ಲೋಕೇಶ್, ಉಪಾಧ್ಯಕ್ಷ ಎಲ್.ಎಂ.ಸತೀಶ್, ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವೀಚಾರಕಿ ಚೈತ್ರ ರಮೇಶ್, ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವೀಚಾರಕ ಎಚ್.ಡಿ. ವಿನಯ, .ಜ್ಞಾನೇಶ್ , ಮಧರ ಮಂಜುನಾಥ್ ಇದ್ದರು.