ಹಮನಾಬಾದ್ ಆಸ್ಪತ್ರೆ ಎದುರು ದಲಿತ ಸಂಘಟನೆಗಳ ಮುಖಂಡರಿಂದ ಪ್ರತಿಭಟನೆ ಕನ್ನಡಪ್ರಭ ವಾರ್ತೆ ಹುಮನಾಬಾದ್ ತಲೆನೋವು ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಸರ್ಕಾರಿ ಆಸ್ಪತ್ರೆಯ ಎದುರಿಗೆ ಶನಿವಾರ ಸಂಜೆ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ. ಜಲಸಂಗಿ ಗ್ರಾಮದ ಶಾಮ ಮೇಟಿ (42) ಎಂಬ ವ್ಯಕ್ತಿ ತಲೆನೋವು ಎಂದು ಆಸ್ಪತ್ರೆಗೆ ಬಂದಿದ್ದು, ಕರ್ತವ್ಯದಲ್ಲಿದ್ದ ವೈದ್ಯ ಡಾ. ಪ್ರವೀಣ್ ಕಡಾಳೆ ಹಾಗೂ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿಲ್ಲ. ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಪ್ರಾಣ ಉಳಿಯುತ್ತಿತ್ತು. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎಂದು ನೇರವಾಗಿ ಆರೋಪಿಸಿದರು. ಈ ಸಂದರ್ಭದಲ್ಲಿ ಪ್ರಮುಖರು ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡುವುದಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರವಾನೆ ಮಾಡುವುದು ವ್ಯವಹಾರ ಮಾಡಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಖಾಸಗಿ ಆಸ್ಪತ್ರೆಗಳು ನಡೆದುಕೊಂಡಿದ್ದಾರೆ. ಬಡವರ ಜೀವಕ್ಕೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ ಎಂದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ ಮಾತನಾಡಿ, ಯಾವ ವೈದ್ಯರು ಕೂಡ ಪ್ರಾಣಕ್ಕೆ ಹಾನಿ ತರುವ ಕೆಲಸ ಮಾಡುವುದಿಲ್ಲ. ನುರಿತ ವೈದ್ಯರಿದ್ದಾರೆ, ಸೂಕ್ತ ಚಿಕಿತ್ಸೆ ನೀಡಿರುವುದಾಗಿ ವೈದ್ಯರು ತಿಳಿಸುತ್ತಿದ್ದಾರೆ ಎಂದರು. ಚಿಕಿತ್ಸೆ ನೀಡಿದ ವೈದ್ಯ ಪ್ರವೀಣ ಮಾತನಾಡಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಲ್ಲವು ರೋಗಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಿದ್ದೇನೆ ಎಂದರು. ಡಿವೈಎಸ್ಪಿ ಜೆ.ಎಸ್ ನಾಮೇಗೌಡರ್ ಮಾತನಾಡಿ, ಯಾರೂ ಕೂಡ ಆತಂಕ ಪಡಬಾರದು, ಮೃತ ವ್ಯಕ್ತಿಯ ಕುರಿತು ನೂರಿತ ವೈದ್ಯರಿಂದ ಮೃತದೇಹ ಪರೀಕ್ಷೆ ನಡೆಸಲಾಗುವುದು. ಸಾವು ಹೇಗೆ ಸಂಭವಿಸಿದೆ ಎಂಬುದು ಕೂಡ ವರದಿಯಲ್ಲಿ ಬರುತ್ತದೆ. ಸಂಘಟಕರು ಕಾನೂನಿನ ಮೇಲೆ ವಿಶ್ವಾಸವಿಡಬೇಕು ಎಂದು ಮನವರಿಕೆ ಮಾಡಿದರು. ನಂತರ ಸಂಘಟಕರು ಪ್ರತಿಭಟನೆ ಕೈಬಿಟ್ಟರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಜೈರಾಜ ವೈದ್ಯ, ಗೌತಮ ಪ್ರಸಾದ, ಅನಿಲ ದೊಡ್ಡಿ, ಕೈಲಾಸ ಮೇಟಿ, ರಾಹುಲ್ ಮೇಟಿ, ಕಾನಿಫ್ ಜಾನವೀರ, ಮಾಣಿಕರಾವ ಸೇರಿದಂತೆ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.