ಪಾರಂಪರಿಕ ವೈದ್ಯ ಪದ್ಧತಿಯಿಂದ ಸರ್ವರೋಗ ಉಪಶಮನ: ವೈದ್ಯ ಬಿ.ಆರ್.ಅಂಬರೀಶ

KannadaprabhaNewsNetwork | Published : Nov 13, 2023 1:15 AM

ಸಾರಾಂಶ

ಪಾರಂಪರಿಕ ವೈದ್ಯ ಪದ್ಧತಿಯಿಂದ ಸರ್ವರೋಗ ಉಪಶಮನ: ವೈದ್ಯ ಬಿ.ಆರ್.ಅಂಬರೀಶ

ಪಾರಂಪರಿಕ ವೈದ್ಯ ಪರಿಷತ್ತು ಶ್ರೀ ಧನ್ವಂತರಿ ಜಯಂತಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಹಸ್ರಾರು ವರ್ಷಗಳ ಇತಿಹಾಸವಿರುವ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ನಾಡಿ ಪರೀಕ್ಷೆ ವಿಧಾನ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ವೈದ್ಯ ಬಿ.ಆರ್.ಅಂಬರೀಶ ಭಂಡಿಗಡಿ ಹೇಳಿದರು.

ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಚಿಕ್ಕಮಗಳೂರು ಜಿಲ್ಲಾ ಘಟಕ ಹಾಗೂ ಕೊಪ್ಪ ತಾಲೂಕು ಘಟಕದಿಂದ ಶ್ರೀ ಧನ್ವಂತರಿ ಜಯಂತಿ ಅಂಗವಾಗಿ ಹರಿಹರಪುರದ ನುಗ್ಗಿಮಕ್ಕಿ ಶ್ರೀ ಮಲ್ಲೇಶಯ್ಯನವರ ಛತ್ರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳು, ಗಿಡ ಮರ ಬೇರು ನಾರುಗಳು ಔಷಧಿಯ ಗುಣವನ್ನು ಹೊಂದಿದೆ. ಇದನ್ನ ಸರಿಯಾಗಿ ಅರಿತು ಔಷಧಿ ನೀಡಿದರೆ ಎಂಥ ಅಸಾಧ್ಯ ಆರೋಗ್ಯ ಸಮಸ್ಯೆಗಳು ಕೂಡ ಪರಿಹಾರವಾಗಲು ಸಾಧ್ಯ ಹಾಗೂ ಪಾರಂಪರಿಕ ವೈದ್ಯದ ಒಂದು ಮುಖ್ಯ ಭಾಗವಾಗಿರುವ ನಾಡಿ ಪರೀಕ್ಷೆ ಆರೋಗ್ಯ ಸಮಸ್ಯೆಯನ್ನು ಕರಾರುವಕ್ಕಾಗಿ ತಿಳಿಯಲು ಸಾಧ್ಯವಾಗುತ್ತದೆ.

ವಾತ ಪಿತ್ತ ಕಫ ಈ ತ್ರಿದೋಷಗಳಿಂದ ಉತ್ಪತ್ತಿಯಾಗುವ ಆರೋಗ್ಯ ಸಮಸ್ಯೆಗಳನ್ನು ಸರಿಯಾಗಿ ಕಂಡುಹಿಡಿದು ಔಷಧಿ ನೀಡುವುದು ಪಾರಂಪರಿಕ ವೈದ್ಯರ ಜವಾಬ್ದಾರಿ ಹಾಗೂ ಕರ್ತವ್ಯ. ಈ ನಿಟ್ಟಿನಲ್ಲಿ ಪುರಾತನವಾದ ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಔಷಧಿ ಗಿಡಗಳ ಸಂರಕ್ಷಣೆ ಹಾಗೂ ಅವುಗಳ ಪರಿಚಯದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ವಿದ್ಯಾರ್ಥಿಗಳಿಗೆ ನಿರಂತರವಾಗಿ ಔಷಧಿ ಸಸ್ಯಗಳ ಹಾಗೂ ಮನೆಮದ್ದು ಕಾರ್ಯಕ್ರಮಗಳ ಅವಶ್ಯಕತೆ ಈ ದಿನಗಳಲ್ಲಿ ಹೆಚ್ಚಿದೆ ಹಾಗೂ ಪಾರಂಪರಿಕ ವೈದ್ಯದ ಕುರಿತು, ಔಷಧಿ ಸಸ್ಯಗಳ ಕುರಿತು ಆರೋಗ್ಯ ಸಮಸ್ಯೆ ಕಂಡುಹಿಡಿಯುವ ನಿಟ್ಟಿನಲ್ಲಿ ನಿರಂತರ ಅಧ್ಯಯನ ಕೂಡ ಪಾರಂಪರಿಕ ವೈದ್ಯರಲ್ಲಿ ಆಗಬೇಕಿದೆ ಎಂದರು. ಕೊಪ್ಪ ತಾಲೂಕು ಘಟಕದ ಅಧ್ಯಕ್ಷ ವೈದ್ಯ ಎ.ಎಂ. ಸುಬ್ರಹ್ಮಣ್ಯ ಮಾತನಾಡಿ ಪಾರಂಪರಿಕ ವೈದ್ಯರು ಸಂಘಟಿತರಾಗ ಬೇಕಾಗಿರುವುದು ಅಗತ್ಯ. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ಪ್ರವೃತ್ತರಾಗಬೇಕು ಎಂದರು,

ಎನ್.ಆರ್. ಪುರ ತಾಲೂಕು ಘಟಕದ ಅಧ್ಯಕ್ಷ ಈಶ್ವರ ನಾಯಕ್, ಶೃಂಗೇರಿ ತಾಲೂಕು ಘಟಕದ ಅಧ್ಯಕ್ಷ ಅಬೂಬಕರ್ ದುರ್ಗಾ ದೇವಸ್ಥಾನ, ಕೊಪ್ಪ ತಾಲೂಕಿನ ಬಡಿಯಣ್ಣ ಹೊಲಗೋಡು ಮನೆ ಮದ್ದು ಮಾಹಿತಿ ನೀಡಿದರು,

ಕಾರ್ಯಕ್ರಮದಲ್ಲಿ ಕೊಪ್ಪ, ಶೃಂಗೇರಿ, ಎನ್.ಆರ್. ಪುರ ತಾಲೂಕಿನ ಪಾರಂಪರಿಕ ವೈದ್ಯರಾದ ಬಿ,ಆರ್,ರವಿಪ್ರಸಾದ್, ಶಮೀರ್, ಅಪ್ಪಣ್ಣ ಹೊಲಗೋಡು, ರಾಮಚಂದ್ರ , ಮಧುಮತಿ, ಗೋಪಾಲ , ಕೃಷ್ಣಪ್ಪ, ಶಂಕರಪ್ಪ, ಮುಂತಾದವರು ಉಪಸ್ಥಿತರಿದ್ದರು,

Share this article