ಮೈತ್ರಿ ಅಭ್ಯರ್ಥಿ ಆಯ್ಕೆ ದೆಹಲಿಯಲ್ಲೇ ಅಂತಿಮ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Jul 17, 2024, 12:57 AM IST
2.ರಾಮನಗರದದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ  ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ನನಗೆ ನನ್ನದೇ ಆದ ಜವಾಬ್ದಾರಿ ಇದೆ. ಮುಂದಿನ ನಾಲ್ಕು ವರ್ಷ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಬೇಕು. ಮುಂದಿನ ನಾಲ್ಕು ವರ್ಷ ಇಡೀ ರಾಜ್ಯ ಪ್ರವಾಸ ಮಾಡುತ್ತೇವೆ. ಹಾಗಾಗಿ ಪಕ್ಷಕಟ್ಟುವ ಕೆಲಸದಲ್ಲಿ ಕಾರ್ಯೋನ್ಮುಖನಾಗುತ್ತೇನೆ .

ಕನ್ನಡಪ್ರಭ ವಾರ್ತೆ ರಾಮನಗರ

ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಎನ್ ಡಿಎ ಮೈತ್ರಿಕೂಟದ ಒಂದು ಭಾಗವಾಗಿರುವ ಕಾರಣ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ದೆಹಲಿಯಲ್ಲಿಯೇ ಅಂತಿಮಗೊಳ್ಳಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿ.ಪಿ.ಯೋಗೇಶ್ವರ್ ಅವರು ತಮ್ಮ ಬೆಂಬಲಿಗರ ಪಡೆ ಇಟ್ಟುಕೊಂಡು ಕೆಲಸ‌ ಮಾಡಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಅಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಹಾಗಾಗಿ ಸಾಮಾನ್ಯವಾಗಿ ಜೆಡಿಎಸ್ ಗೆ ಉಳಿಸಿಕೊಳ್ಳಬೇಕು ಎಂಬುದು ಸ್ಥಳೀಯ ಮುಖಂಡರು ಅಭಿಪ್ರಾಯವಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ನನಗೆ ನನ್ನದೇ ಆದ ಜವಾಬ್ದಾರಿ ಇದೆ. ಮುಂದಿನ ನಾಲ್ಕು ವರ್ಷ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಬೇಕು. ಮುಂದಿನ ನಾಲ್ಕು ವರ್ಷ ಇಡೀ ರಾಜ್ಯ ಪ್ರವಾಸ ಮಾಡುತ್ತೇವೆ. ಹಾಗಾಗಿ ಪಕ್ಷಕಟ್ಟುವ ಕೆಲಸದಲ್ಲಿ ಕಾರ್ಯೋನ್ಮುಖನಾಗುತ್ತೇನೆ . ಒಂದು ವೇಳೆ ರಾಷ್ಟ್ರೀಯ ನಾಯಕರು ಸೂಚನೆ ನೀಡಿದರೆ ಕೂತು ಚರ್ಚೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸರ್ವಪಕ್ಷ ಸಭೆಗಿಂತ ಬಾಟೂವೇ ಮುಖ್ಯವಾಗಿತ್ತೇ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಕುಮಾರಣ್ಣನ ಜನತಾದರ್ಶನ ಕಾರ್ಯಕ್ರಮಕ್ಕೆ ಸರ್ಕಾರ ಯಾವರೀತಿ ನಡೆದುಕೊಂಡಿತು. ಅಧಿಕಾರಿಗಳನ್ನು ಕಳುಹಿಸದೇ ಆದೇಶ ಮಾಡಿದ್ದು ಇದೇ ರಾಜ್ಯ ನಾಯಕರು. ರಾಜ್ಯ ಮತ್ತು ಕೇಂದ್ರ ಪರಸ್ಪರ ಬಾಂಧವ್ಯ ಇಟ್ಟುಕೊಂಡು ಕೆಲಸ‌ ಮಾಡಬೇಕು. ಆದರೆ, ರಾಜ್ಯ ಸರ್ಕಾರದ ವರ್ತನೆ ಹೇಗಿದೆ ಅಂತ ಎಲ್ಲಾ ನೋಡುತ್ತಿದ್ದಾರೆ. ಬೇರೆ ರಾಜ್ಯದ ಮುಖ್ಯಮಂತ್ರಿಗಳು‌ ಕೇಂದ್ರ ಸಚಿವರ ಜೊತೆ ಒಳ್ಳೆ ಬಾಂಧವ್ಯ ಹೊಂದಿದ್ದಾರೆ. ನಮ್ಮ ರಾಜ್ಯದ ಸಿಎಂ, ಡಿಸಿಎಂ ಕೇಂದ್ರ ಸಚಿವರ ವಿರುದ್ಧ ಇದ್ದಾರೆ. ಈ ಸರ್ಕಾರ ಸಲಹೆ- ಸೂಚನೆ ತೆಗೆದುಕೊಳ್ಳುವ ಮಟ್ಟಕ್ಕೆ ಇಲ್ಲ. ಸಲಹೆ ಪಡೆಯಲು ಇವರು ಸಿದ್ದರಿಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರಿಗೆ ಡಿ.ಕೆ.ಶಿವಕುಮಾರ್ ಬಹಿರಂಗ ಸವಾಲ್ ಹಾಕಿರುವ ಪ್ರಶ್ನೆಗೆ ಉತ್ತರಿಸಿ, ಇಂತಹ ಸವಾಲ್ ಗಳನ್ನು ಕುಮಾರಸ್ವಾಮಿಯವರು ಸಾಕಷ್ಟು ನೋಡಿದ್ದಾರೆ. ಸವಾಲ್ ಗಳಿಗೆ ಹೆದರಿ ಓಡುವ ಪ್ರಶ್ನೆಯೇ ಇಲ್ಲ. ಸವಾಲುಗಳನ್ನು ಎದುರಿಸಿಯೇ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

2 ಬಾರಿ ನನ್ನ ಸೋಲಿಸಿದ್ರಿ, ನೀವು ಒಂದು ಸೋಲಿಗೆ ಹತಾಶರಾದರೆ ಹೇಗೆ?:

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನಮ್ಮ ಜೊತೆಗಿದ್ದೇ ಎರಡು ಬಾರಿ ನನ್ನನ್ನು ಸೋಲಿಸಿದ್ದೀರಿ. ಒಂದೇ ಒಂದು ಸೋಲಿಗೆ ಇಷ್ಟೊಂದು ಹತಾಶರಾದರೆ ಹೇಗೆ? ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶದಿಂದ ಉಪಮುಖ್ಯಮಂತ್ರಿಗಳು ಹತಾಶರಾಗಿದ್ದಾರೆ. ಅವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಕೇವಲ ಒಂದು ಸೋಲಿಗೆ ಇಷ್ಟೊಂದು ಹತಾಶರಾದರೆ ಹೇಗೆ? ನನ್ನನ್ನು ಎರಡು ಬಾರಿ ಜೊತೆಯಲ್ಲೇ ಇದ್ದು ಸೋಲಿಸಿ ಕುತ್ತಿಗೆ ಕುಯ್ದಿದ್ದೀರಲ್ಲ ಎಂದರು. ನೀವು ಕುಮಾರಸ್ವಾಮಿ ಅವರನ್ನು ನೆನಪಿಸಿಕೊಳ್ಳಬೇಕು. 2019ರ ಚುನಾವಣೆಯಲ್ಲಿ ನಿಮಗೆ ಸಂಪೂರ್ಣ ಸಹಕಾರ ಕೊಟ್ಟಿದ್ದರು. ನಿಮ್ಮ ಸಹೋದರನನ್ನು ಗೆಲ್ಲಿಸಲು ನಾವು ಹೇಗೆ ನಡೆದುಕೊಂಡೆವು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ