ವಿದ್ಯೆಯೊಂದಿಗೆ ಎಲ್ಲರನ್ನೂ ಹೃದಯ ವೈಶಾಲ್ಯತೆ ಅಗತ್ಯ: ಡಾ.ಪೀಟರ್ ಪಾವ್ಲ್ ಸಲ್ದಾನ

KannadaprabhaNewsNetwork | Published : Mar 23, 2025 1:31 AM

ಮಂಗಳೂರಿನ ಕೆಥೋಲಿಕ್ ಶಿಕ್ಷಣ ಮಂಡಳಿಗೆ ಒಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು, ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಶನಿವಾರ ಕಾಲೇಜಿನಲ್ಲಿ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಸಮಾರಂಭ ನಡೆಯಿತು.

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಾಯತ್ತ ಸ್ಥಾನಮಾನದ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಪುತ್ತೂರು

ವಿದ್ಯೆ ಇದ್ದರೆ ಸಾಲದು ಅದರೊಂದಿಗೆ ವಿನಯ ಹಾಗೂ ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆಯೂ ಇರಬೇಕು. ವಿದ್ಯೆ ಕಲಿತು ಜೀವನದಲ್ಲಿ ಉನ್ನತ ಹುದೆಯನ್ನು ಅಲಂಕರಿಸಿದ್ದರೂ ಮಾನವೀಯ ಮೌಲ್ಯಗಳನ್ನು ಎಲ್ಲಿಯೂ ಮರೆಯಬಾರದು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಹೇಳಿದರು.ಅವರು ಮಂಗಳೂರಿನ ಕೆಥೋಲಿಕ್ ಶಿಕ್ಷಣ ಮಂಡಳಿಗೆ ಒಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು, ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಶನಿವಾರ ಕಾಲೇಜಿನಲ್ಲಿ ನಡೆದ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವಾಯತ್ತ ಕಾಲೇಜಿನ ಲಾಂಛನ ಹಾಗೂ ಪರಿಷ್ಕರಿಸಲಾದ ಕಾಲೇಜು ವೆಬ್‌ಸೈಟ್‌ ಬಿಡುಗಡೆಗೊಳಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯದಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದೆ. ಕಳೆದ ೬೬ ವರ್ಷಗಳಿಂದ ಗ್ರಾಮೀಣ ಪ್ರದೇಶದ ಶಿಕ್ಷಣ ವಂಚಿತರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿರುವ ಸಂತ ಫಿಲೋಮಿನಾ ಸಂಸ್ಥೆಯು ಮುಂದೆ ವಿಶ್ವವಿದ್ಯಾನಿಲಯವಾಗಿ ಬೆಳೆಯಲಿ ಎಂದರು.ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಕಾರ್ಯಕ್ರಮ ಉದ್ಘಾಟಿಸಿ, ವಿಮರ್ಶಾತ್ಮಕ ಚಿಂತನೆ, ಜೀವನ ಪರ್ಯಂತ ಕಲಿಕೆಯ ಬಗ್ಗೆ ಒಲವು, ಸಮರ್ಪಕ ಸಂವಹನ ಹಾಗೂ ಅವಿಷ್ಕಾರಕ್ಕೆ ಕಾರಣವಾಗುವಂತಹ ಶಿಕ್ಷಣ ದೊರೆತಲ್ಲಿ ಇತಿಹಾಸ ಸೃಷ್ಟಿಸಬಹುದು ಎಂದು ಹೇಳಿದರು.

ಸ್ವಾಯತ್ತ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಸೌಲಭ್ಯಗಳಾದ ಬೋರ್ಡ್ ರೂಮ್, ಪರೀಕ್ಷಾಂಗ ವಿಭಾಗ, ಶೈಕ್ಷಣಿಕ ವಿಭಾಗ, ಹಣಕಾಸು ವಿಭಾಗ, ನವೀಕರಿಸಿದ ಫುಡ್ ಕೋರ್ಟ್ ಮತ್ತು ಎಂಸಿಎ ಪ್ರಯೋಗಾಲಯಗಳನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ಉದ್ಘಾಟಿಸಿ ಮಾತನಾಡಿ, ಉದ್ಯೋಗ ಕ್ಷೇತ್ರದ ಬೇಡಿಕೆಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ರಚಿಸುವುದು ಮಾತ್ರ ಸ್ವಾಯತ್ತ ಸಂಸ್ಥೆಯ ಜವಾಬ್ದಾರಿಯಲ್ಲ. ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಪಠ್ಯಕ್ರಮವನ್ನು ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ದೊರೆತ ಸಂದರ್ಭದ ಸವಿ ನೆನಪಿಗಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ ‘ಫಿಲೋ ಜೆನೆಸಿಸ್’ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ, ಪುತ್ತೂರು ಅಶೋಕ್ ಕುಮಾರ್ ರೈ, ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ.ಕವಿತಾ ಕೆ ಆರ್, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸುಶ್ರಿ ಸ್ಟೆಲ್ಲಾ ವರ್ಗೀಸ್, ಕೆಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಡಾ.ಪ್ರವೀಣ್ ಲಿಯೋ ಲಸ್ರಾದೊ, ಕೆಥೊಲಿಕ್ ಶಿಕ್ಷಣಮಂಡಳಿಯ ನಿಕಟಪೂರ್ವ ಕಾರ್ಯದರ್ಶಿ ಫಾ. ಆ್ಯಂಟನಿ ಮೈಕೆಲ್ ಶೆರಾ ಮಾತನಾಡಿದರು.

ಸನ್ಮಾನ, ಗೌರವ:

ಸ್ವಾಯತ್ತ ಕಾಲೇಜಿಗೆ ನೇಮಕಗೊಂಡ ರಿಜಿಸ್ಟ್ರಾರ್ (ಅಕಾಡೆಮಿಕ್) ಡಾ.ನಾರ್ಬರ್ಟ್ ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವ ಡಾ.ವಿನಯಚಂದ್ರ, ಹಣಕಾಸು ಅಧಿಕಾರಿ ಡಾ.ಎಡ್ವಿನ್ ಎಸ್. ಡಿಸೋಜ, ಶೈಕ್ಷಣಿಕ ಉಪ ಕುಲಸಚಿವ ವಿಪಿನ್ ನಾಯಕ್ ಎನ್.ಎಸ್. ಹಾಗೂ ಪರೀಕ್ಷಾಂಗ ಉಪಕುಲಸಚಿವರಾದ ಜೋನ್ಸನ್ ಡೇವಿಡ್ ಸಿಕ್ವೇರ, ಅಭಿಷೇಕ್ ಸುವರ್ಣ, ಸಂಸ್ಥೆಯು ಸ್ವಾಯತ್ತ ಸ್ಥಾನಮಾನ ಗಳಿಸುವ ಸಂದರ್ಭ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ ಭಾನು ಪ್ರಕಾಶ್ ಹಾಗೂ ಅಪೇಕ್ಷಾ ಅವರನ್ನು ಸನ್ಮಾನಿಸಲಾಯಿತು. ಕೆಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕ ಫಾ. ಜೆರಾಲ್ಡ್ ಡಿಸೋಜ, ಪ್ರಾಂಶುಪಾಲ ಫಾ. ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಮತ್ತು ಪ್ರೊ.ಲೊಯೋ ನೊರೋನ್ಹಾ ಅವರನ್ನು ಗೌರವಿಸಲಾಯಿತು.ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಮ್ಯಾಕ್ಸಿಮ್ ನೊರೊನ್ಹಾ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ.ಎಂ. ಅಬ್ದುಲ್ ಕುಂಞ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು. ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಭಾರತಿ ಎಸ್. ರೈ ಮತ್ತು ಉಪನ್ಯಾಸಕಿ ಡಾ. ಮೈತ್ರಿ ಭಟ್ ನಿರೂಪಿಸಿದರು.