ಫೆ.೭ರಂದು ಬೆಳಗ್ಗೆ ೮ಕ್ಕೆ ಮಹಾದ್ವಾರದ ಪೂಜೆ, ಹೋಮ-ಹವನ ಪೂಜಾ ಕಾರ್ಯಕ್ರಮಗಳೊಂದಿಗೆ ಅಯ್ಯಾಚಾರ, ಲಿಂಗದೀಕ್ಷೆ, ನಡೆಯಲಿದೆ. ಮಧ್ಯಾಹ್ನ ೨ಕ್ಕೆ ಶ್ರೀಮದ್ ಉಜ್ಜಯಿನಿ ಪೀಠದ ಜಗದ್ಗುರುಗಳ ಅಡ್ಡ ಫಲ್ಲಕ್ಕಿ ಮಹೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಚಬನೂರಿನ ಸಿದ್ಧಿ ಪುರುಷ ಶ್ರೀ ರಾಮಲಿಂಗೇಶ್ವರರ ನೂತನ ಮಠ ಹಾಗೂ ಶ್ರೀಮಠದಲ್ಲಿ ನಿರ್ಮಿಸಿರುವ ಸಭಾ ಭವನವನ್ನು ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮಾಗಣಗೇರಿಯ ಡಾ.ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.ಚಬನೂರ ಗ್ರಾಮದಲ್ಲಿ ಲೋಕಾರ್ಪಣೆ ನಿಮಿತ್ತ ಸೋಮವಾರ ನಡೆದ ಪೂರ್ವ ಸಿದ್ಧತಾ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರಾಮಲಿಂಗೇಶ್ವರ ಶ್ರೀಗಳು ಸಿದ್ಧಿ ಪುರುಷರಾಗಿದ್ದಾರೆ. ಶ್ರೀಗಳ ನೂತನ ಮಠ ಹಾಗೂ ಸಭಾ ಭವನ ಚಬನೂರಿನಲ್ಲಿ ನಿರ್ಮಿಸಲಾಗಿದ್ದು, ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಭಕ್ತರು ತನು, ಮನ, ಧನದೊಂದಿಗೆ ಸಹಕಾರ ನೀಡಬೇಕೆಂದರು.

ಕೊಡೇಕಲ್ಲ ಶ್ರೀ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮೀಜಿ ಮಾತನಾಡಿ, ಮಠದ ಲೋಕಾರ್ಪಣೆ ಅಂಗವಾಗಿ ಜನವರಿ ೨೮ರಿಂದ ಪ್ರವಚನ, ಫೆ.೩ರಿಂದ ವಿಶೇಷ ಕಾರ್ಯಕ್ರಮ, ರೈತ ಸಮಾವೇಶ, ವಿಶೇಷ ಉಪನ್ಯಾಸಗಳು ನಡೆಯಲಿವೆ. ಫೆ.೪ರಂದು ಯೋಧರಿಗೆ ಮತ್ತು ಚಬನೂರಿನ ೨೦೦ಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಫೆ.೫ರಂದು ಮಾತೃ ನಮನ ಕಾರ್ಯಕ್ರಮದಲ್ಲಿ ಮಾತೆಯರಿಗೆ ಉಡಿ ತುಂಬುವುದು, ೬ರಂದು ಯುವಜನೋತ್ಸವ ನಡೆಯಲಿದೆ ಎಂದರು.

ಕಡಕೋಳದ ಡಾ.ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಫೆ.೭ರಂದು ಬೆಳಗ್ಗೆ ೮ಕ್ಕೆ ಮಹಾದ್ವಾರದ ಪೂಜೆ, ಹೋಮ-ಹವನ ಪೂಜಾ ಕಾರ್ಯಕ್ರಮಗಳೊಂದಿಗೆ ಅಯ್ಯಾಚಾರ, ಲಿಂಗದೀಕ್ಷೆ, ನಡೆಯಲಿದೆ. ಮಧ್ಯಾಹ್ನ ೨ಕ್ಕೆ ಶ್ರೀಮದ್ ಉಜ್ಜಯಿನಿ ಪೀಠದ ಜಗದ್ಗುರುಗಳ ಅಡ್ಡ ಫಲ್ಲಕ್ಕಿ ಮಹೋತ್ಸವ ನಡೆಯಲಿದೆ. ಸಂಜೆ ೫ಕ್ಕೆ ಧರ್ಮಸಭೆ. ೮ರಂದು ಬೆಳಗ್ಗೆ ೯ಕ್ಕೆ ನೂತನ ಶ್ರೀಮಠ ಹಾಗೂ ಸಭಾ ಭವನದ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಲೋಕಾರ್ಪಣೆ ಕಾರ್ಯಕ್ರಮದ ೨ ದಿನದ ಪ್ರಸಾದ ಸೇವೆಯ ಜೊತೆಗೆ ಇನ್ನಿತರವಾದ ಸೇವೆಗಳನ್ನು ನಮ್ಮ ಕುಟುಂಬದ ಪರವಾಗಿ ಸಲ್ಲಿಸುತ್ತೇನೆಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಹಾಗೂ ಬಿಜೆಪಿ ಮುಖಂಡ ಬಸನಗೌಡ ಯಡಿಯಾಪೂರ, ಎಲ್ಲ ರೀತಿಯಿಂದ ಸಹಕಾರ ನೀಡುತ್ತೇವೆ. ಕಾರ್ಯಕ್ರಮಕ್ಕೆ ತಲಾ ೧ ಲಕ್ಷದಾ ೧ ಸಾವಿರ ರು. ನೀಡುತ್ತೇವೆ ಎಂದು ಘೋಷಿಸಿದರು. ಹಿರೂರ ದೇವಿಂದ್ರ ಕೊಪ್ಪದ ೧ ಕೆಜಿ ಬೆಳ್ಳಿ ಜೊತೆಗೆ ದಾಸೋಹ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಶಿವನಗೌಡ ಪಾಟೀಲ, ಬಸನಗೌಡ ಪಾಟೀಲ, ಮುತ್ತು ಜಾಹಗೀರದಾರ, ವಿರೇಶ ಬಾಗೇವಾಡಿ, ಬಸನಗೌಡ ವಣಿಕ್ಯಾಳ, ಸೋಮಶೇಖರ ಸ್ಥಾವರಮಠ, ವಿರೇಶ ಕವಡಿಮಟ್ಟಿ, ಜಿ.ಎಂ.ಪಾಟೀಲ, ಮುತ್ತುಗೌಡ ಚಬನೂರ, ಸಿದ್ದನಗೌಡ ಹಿರೂರ ಸಹಾಯಾರ್ಥ ಘೋಷಿಸಿದರು.

ಅಥಣಿಯ ಗಚ್ಚಿನಮಠದ ಶಿವಬಸವ ಶ್ರೀ, ದೇವರಹಿಪ್ಪರಗಿ ಜಡಿಸಿದ್ದೇಶ್ವರ ಶ್ರೀ, ಮನಗೂಳಿಯ ಸಂಗನಬಸವ ಶ್ರೀ, ಬ.ಬಾಗೇವಾಡಿಯ ಶಿವಪ್ರಕಾಶ ಶ್ರೀ, ಕೋಲಾರ ಪ್ರಭುಕುಮಾರ ಶ್ರೀ ಮಾತನಾಡಿದರು. ಕಲಕೇರಿ ಶ್ರೀ, ಸಾಸನೂರ ಶ್ರೀ, ವಡವಡಗಿ ಶ್ರೀ, ಪಡೇಕನೂರ ಶ್ರೀ, ಕೆರೂಟಗಿ ಶ್ರೀ, ಗುಳಬಾಳ ಶ್ರೀ, ಸೇರಿದಂತೆ ತಾಲೂಕಿನ ಶ್ರೀಮಠದ ಭಕ್ತಾಧಿಗಳು ಭಾಗವಹಿಸಿದ್ದರು. ನಾವದಗಿ ರಾಜೇಂದ್ರ ಒಡೆಯರ ಶಿವಾಚಾರ್ಯರು ಸ್ವಾಗತಿಸಿದರು. ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿಗಳು ವಂದಿಸಿದರು.