ನರೇಗಲ್ಲ: ಗ್ರಾಮೀಣ ಪ್ರದೇಶದಲ್ಲಿ 23 ವರ್ಷಗಳ ಹಿಂದೆ ನಮ್ಮ ಶಾಲೆಯಲ್ಲಿ ಅಧ್ಯಯನ ಮಾಡಿ ದೇಶದ ವಿವಿಧ ಮೂಲೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಕಲಿತ ಶಾಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ವಿದ್ಯಾರ್ಥಿಗಳು ಕೊಂಡೊಯ್ದಿದ್ದಾರೆ ಎಂದು ಬಸವೇಶ್ವರ ಶಾಲೆಯ ಆಡಳಿತ ಮಂಡಳಿ ಚೇರಮನ್ ಡಾ. ಜಿ. ಕಾಳೆ ಶ್ಲಾಘಿಸಿದರು.ಸ್ಥಳೀಯ ಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಗುರುವಿನ ಬಗೆಗಿನ ಕಳಕಳಿ ಕಡಿಮೆಯಾಗುತ್ತಿರುವ ದಿನಮಾನಗಳಲ್ಲಿ ತಾವೆಲ್ಲ ಎರಡು ದಶಕ ಕಳೆದರೂ ಕಲಿತ ಶಿಕ್ಷಣ ಸಂಸ್ಥೆ ಹಾಗೂ ಗುರುವಿನ ಮೇಲಿನ ಗೌರವವನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಈ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಮುಖ್ಯೋಪಾಧ್ಯಾಯರಾದ ಬಿ.ಜಿ. ಶಿರ್ಸಿ, ಡಾ. ಜೀತೇಂದ್ರ ಮುಗಳಿ, ಪೂರ್ಣಿಮಾ ಕುರಿ ಮಾತನಾಡಿದರು. ವಿದ್ಯಾರ್ಥಿ ಬಳಗದಿಂದ ಅಗಲಿದ 5 ಜನ ಸ್ನೇಹಿತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 33 ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.ಸಂಜೀವ ಮೇಟಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಕೊರಧಾನ್ಯಮಠ ಹಾಗೂ ನೌಶಾದ ಬೇಗಂ ನಿರೂಪಿಸಿದರು. ಜ್ಯೋತಿ ಬಸವರಡ್ಡೇರ ವಂದಿಸಿದರು.