ಕನ್ನಡಪ್ರಭ ವಾರ್ತೆ ಶಹಾಪುರ
ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರದ ಹೊರವಲಯದ ವಿದ್ಯಾರಣ್ಯ ಲೇಔಟ್ ಹತ್ತಿರ, ಒಂದು ಎಕರೆ ಭೂಮಿಯಲ್ಲಿ ಕೆಕೆಆರ್ಡಿಬಿ ಯೋಜನೆಯಲ್ಲಿ 3 ಕೋಟಿ ರು.ಗಳ ವೆಚ್ಚದ ಶಾದಿ ಮಹಲ್ ಕಟ್ಟಡ ನಿರ್ಮಾಣ ಶಿಲಾನ್ಯಾಸ ಹಾಗೂ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದ ಮುಸ್ಲಿಂ ಬಾಂಧವರ ಬಹುದಿನಗಳ ಬೇಡಿಕೆ ಈ ಮಹಲ್ಗೆ ಸುಮಾರು ನಾಲ್ಕು ವರ್ಷದ ಹಿಂದೆಯೇ ಎಕರೆ ಭೂಮಿಗೆ 45ಲಕ್ಷ ನೀಡಿ ಖರೀದಿ ಮಾಡಲಾಗಿತ್ತು. ನೂತನ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರು.ಗಳ ಅನುದಾನ ಮಂಜೂರು ಮಾಡಲಾಗಿದೆ. ಸಮುದಾಯದ ಜನರ ಮದುವೆ ಸೇರಿದಂತೆ ಇನ್ನಿತರ ಸಭೆ ಸಮಾರಂಭಗಳ ಖರ್ಚು ಕಡಿಮೆ ಮಾಡಿಕೊಳ್ಳಲು ಇಂತಹ ಮಹಲ್ ಸಹಕಾರಿ ಎಂದರು.ಅಂಬಿಗರ ಚೌಡಯ್ಯ ಭವನಕ್ಕೆ 2.5 ಕೋಟಿ, ಕನಕ ಭವನ 2 ಕೋಟಿ, ವೀರಶೈವ ಭವನಕ್ಕೆ 1 ಕೋಟಿ, ಬಂಜಾರ ಭವನ, ಡಾ. ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನಗಳಿಗೂ ಅವಶ್ಯಕತೆಗನುಗುಣವಾಗಿ ವಿಶೇಷ ಅನುದಾನ ನೀಡಲಾಗಿದೆ ಎಂದರು.
ರಸ್ತೆಗಳು, ಶಾಲಾ ಕಾಲೇಜು, ಆಸ್ಪತ್ರೆ ಮಠ ಮಂದಿರಗಳ ಅಭಿವೃದ್ಧಿಗೂ ಅಧಿಕ ಅನುದಾನ ನೀಡಿದ ಹೆಮ್ಮೆ ಎನಗಿದೆ ಎಂದರು. ನೂರು ಕೋಟಿ ವೆಚ್ಚದ ಕುಡಿವ ನೀರಿನ ಸರಬರಾಜು ಕಾಮಗಾರಿ ಪ್ರಗತಿ ಹಂತದಲ್ಲಿದೆ ಹಾಗೂ ಮಿನಿ ವಿಧಾನ ಸೌದ, ಡಾ. ಅಂಬೇಡ್ಕರ್, ಮೌಲಾನಾ ಆಜಾದ್ ವಸತಿನಿಲಯಗಳಿಗೆ ತಲಾ 20 ರಿಂದ 22 ಕೋಟಿ ಅನುದಾನ ನೀಡಿದ್ದೇವೆ. ತಾಪಂ ಜಾಗದಲ್ಲಿ 40 ರಿಂದ 50 ಕೊಠಡಿಗಳನ್ನೊಳಗೊಂಡ ಎರಡು ಅಂತಸ್ತಿನ ವಿಶೇಷ ಕಟ್ಟಡ ನಿರ್ಮಿಸಿ ನೂತನ ಪ್ರಾಥಮಿಕ, ಪ್ರೌಢ, ಹಾಗೂ ಕಾಲೇಜು ಆರಂಭಿಸಲು ಮಾದರಿ ಕಟ್ಟಡ ನಿರ್ಮಿಸಲು ಮಂಜೂರಾತಿಗೆ ಅರ್ಜಿ ಕಳಿಸಿರುತ್ತೇವೆ ಎಂದರು.ಮುಸ್ಲಿಂ ಸಮುದಾಯದ ಮುಖಂಡ ಸೈಯಿದ್ ಉದ್ದಿನ್ ಖಾದರ್ ಮಾತನಾಡಿ, ಶಾದಿ ಮಹಲ್ ಗೆ ಸ್ವಂತ ಹಣ ನೀಡಿ ಹೆದ್ದಾರಿ ಸಮೀಪ ಜಮೀನು ಖರೀದಿಸಿ ಕಟ್ಟಡ ನಿರ್ಮಿಸಲು ಕೆ ಕೆ ಆರ್ ಡಿ ಬಿ ಯೋಜನೆಯಲ್ಲಿ ಮೂರು ಕೋಟಿ ಅನುದಾನ ಒದಗಿಸಿ ಬಹಳ ದಿನದ ಬೇಡಿಕೆಗೆ ಪೂರ್ಣವಿರಾಮ ನೀಡಿದ ಸಚಿವರಿಗೆ ಸಮುದಾಯದ ಸರ್ವರೂ ಚಿರಋಣಿ ಎಂದರು.
ಮುಸ್ಲಿಂ ಸಮುದಾಯದ ಮುಖಂಡರಾದ ಇಸ್ಮಾಯಿಲ್ ಚಂದ್ ಅಲ್ಲಾ ಪಟೇಲ್ ಮಕ್ತಾಪುರ್, ಪಾಷಾ ಪಟೇಲ್, ಕರ್ನಾಟಕ ಸಾರಾಯಿ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಂತಪ್ಪ ಸಾಹು ಚಂದಾಪುರ, ಸಿದ್ದಣ್ಣ ಆರಬೋಳ, ವಿನೋದ ಪಾಟೀಲ್ ದೋರನಹಳ್ಳಿ, ಮಹಾದೇವಪ್ಪ ಸಾಲಿಮನಿ ಮಲ್ಲಪ್ಪ ಉಳ್ಳಂಡಗೇರಿ ಇದ್ದರು.