ಕನ್ನಡಪ್ರಭ ವಾರ್ತೆ ಬೀದರ್
ಈ ಹಿಂದೆಯೂ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ಪದವೀಧರರ ಪ್ರೀತಿಗೆ ಪಾತ್ರರಾದ ಅಮರನಾಥ ಪಾಟೀಲರು ಸರಳ ಸಜ್ಜನಿಕೆ ಪ್ರತೀಕವಾಗಿದ್ದಾರೆ ಎಂದು ಮಾಜಿ ಕಾನೂನು ಸಚಿವರು ಹಾಗೂ ಹಾಲಿ ಶಾಸಕ ಎಸ್.ಸುರೇಶಕುಮಾರ ತಿಳಿಸಿದರು.ಅವರು ಈಶಾನ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ನಗರದ ನ್ಯಾಯಾಲಯದಲ್ಲಿ ಅಬ್ಬರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮೇಲ್ಮನೆ ಘನತೆ ಗೌರವ ಕಾಪಾಡುವ ಬಹುದೊಡ್ಡ ಜವಾಬ್ದಾರಿ ಮತದಾರರ ಮೇಲಿದೆ. ವಿಧಾನ ಪರಿಷತ್ ಗೌರವ ಕಾಪಾಡಬೇಕಾದರೆ ಉತ್ತಮ ಅಭ್ಯರ್ಥಿ ಅಮರನಾಥ ಪಾಟೀಲಗೆ ನಿಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆರಿಸಿ ತರಬೇಕೆಂದು ಕೋರಿದರು.ಇತ್ತಿಚೆಗೆ ಮೇಲ್ಮನೆ ಎಂಬುದು ಸಿರಿವಂತರ ಮನೆಯಾಗಿ ಮಾರ್ಪಾಡಾಗುತ್ತಿರುವುದು ವಿಷಾದನೀಯ. ಹಣ ಖರ್ಚು ಮಾಡಿ ಮೇಲ್ಮನೆ ಪ್ರವೇಶಿಸಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಆದ್ದರಿಂದ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗೆ ಸ್ಪಂದಿಸುವ ಅಮರನಾಥ ಪಾಟೀಲಗೆ ನಿಮ್ಮ ಬೆಂಬಲವಿರಲಿ ಎಂದು ಎಸ್.ಸುರೇಶಕುಮಾರ ಕೋರಿದರು.
ಮಾಜಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ ಮಾತನಾಡಿ, ಅಮರನಾಥ ಪಾಟೀಲರು 371(ಜೆ) ಸಲುವಾಗಿ ವಿಧಾನ ಪರಿಷತ್ನಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಇಂತಹ ಸಮಸ್ಯೆಗೆ ಸ್ಪಂಧಿಸುವ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಕರೆ ನೀಡಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಪಾಟೀಲರು ಚುನಾವಣೆ ನಂತರವೂ ಕೂಡ ಜನರಿಗೆ ಸುಲಭವಾಗಿ ಲಭ್ಯವಾದಂತಂಹ ಹಾಗೂ ಜನರ ಸಮಸ್ಯೆ ಸ್ಪಂದಿಸುವಂತಹ ಸರಳ ವ್ಯಕ್ತಿ. ಇಂಥಹ ಸರಳ ವ್ಯಕ್ತಿಗೆ ತಮ್ಮ ಅಮೂಲ್ಯ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟು ಪಾಟೀಲ ಮಾತನಾಡಿ, ಪ್ರತೀ ವರ್ಷ ವಕೀಲರ ಸಂಘಕ್ಕೆ ಸಿಗಬೇಕಾದ ಅನುದಾನ ಸರಿಯಾಗಿ ಸಿಗುತ್ತಿಲ್ಲ. ಯುವ ವಕೀಲರಿಗೆ ಸಿಗಬೇಕಾದ ಗೌರವಧನ ಸರ್ಕಾರದಿಂದ ತಡೆಹಿಡಿಯಲಾಗಿದೆ. ಈ ಸೌಲಭ್ಯ ಶೀಘ್ರದಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಬಿಡುಗಡೆ ಮಾಡಿಸಬೇಕೆಂದು ಶಾಸಕ ಎಸ್. ಸುರೇಶಕುಮಾರಗೆ ಮನವಿ ಮಾಡಿದರು.ವಿಧಾನ ಪರಿಷತ್ ಚುನಾವಣೆ ಉಸ್ತುವಾರಿ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ವಿಭಾಗೀಯ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಿರಣ ಪಾಟೀಲ, ಗುರುನಾಥ ಜ್ಯಾಂತಿಕರ್ ಸೇರಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಈಶಾನ್ಯ ಪದವೀಧರರು ಉಪಸ್ಥಿತರಿದ್ದರು.