ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಡಾ.ಅಂಬೇಡ್ಕರ್ ತತ್ವಾದರ್ಶಗಳನ್ನು ಎಲ್ಲರೂ ಪ್ರಾಮಾಣಿಕವಾಗಿ ಅರ್ಥೈಸಿಕೊಳ್ಳುವ ಕೆಲಸವನ್ನು ನಾವೆಲ್ಲರೂ ಮಾಡಿದರೆ ಮಾತ್ರ ಅವರ ಜಯಂತಿಗೆ ನೈಜ ಅರ್ಥ ಬರಲಿದೆ. ಈ ಹಿನ್ನೆಲೆ ಅಂಬೇಡ್ಕರ್ ಅವರ ಅಭಿಮಾನಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಚಾಮರಾಜನಗರ ವಸತಿಯುಕ್ತ ಪ್ರಾಂಶುಪಾಲ ದೇವರಾಜು ಹೇಳಿದರು.ಕರ್ನಾಟಕ ವಿದ್ಯುತ್ ಮಂಡಳಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಕಲ್ಯಾಣ ಸಂಸ್ಥೆಯ ಇತ್ತೀಚೆಗೆ ಆಯೋಜಿಸಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 134 ನೇ ಜಯಂತಿ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಂಬೇಡ್ಕರ್ ಅಭಿಮಾನಿಗಳು, ಅನುಯಾಯಿಗಳು ಅವರ ಸ್ಮರಿಸುವ ಇಂತಹ ಕಾರ್ಯಕ್ರಮಗಳಲ್ಲಿ ಮದ್ಯಪಾನದಂತಹ ದುಶ್ಚಟಗಳನ್ನು ತ್ಯಜಿಸುವ ಪ್ರತಿಜ್ಞೆ ಮಾಡಿ ಎಂದರು.
ಬುದ್ದನ ಕರುಣೆ, ಮೈತ್ರಿ, ವಿಶ್ವಾಸ, ಪ್ರೀತಿಯ ತತ್ವಗಳನ್ನು ನಾವು ಅನುಸರಿಬೇಕು, ಇದನ್ನು ರೂಢಿಸಿಕೊಳ್ಲುವುದನ್ನು ಅಂಬೇಡ್ಕರ್ ಅನುಯಾಯಿಗಳಾದ ನಾವುಗಳು ಪ್ರಮಾಣಿಕವಾಗಿ ಮಾಡದಿದ್ದರೆ ಬಾಬಾ ಸಾಹೇಬರ ಸ್ಮರಣೆಗೆ ಅರ್ಥವಿರದು. ಈನಿಟ್ಟಿನಲ್ಲೂ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು. ಕಾರ್ಯಕ್ರಮದ ಮುನ್ನ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪಟ್ಟಣದ ಹಲವೆಡೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಗಣ್ಯರು ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಉಪವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್, ಚಾ.ನಗರ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಕುಮಾರ್, ಲೆಕ್ಕಾಧಿಕಾರಿ ಭಾಸ್ಕರ್, ಕವಿಪ್ರನಿ ನೌಕರರ ಸಂಘ ಉಪಾಧ್ಯಕ್ಷ ಎನ್.ಮಹೇಶ್, ಉಪವಿಭಾಗ ಪ್ರಭಾರ ಲೆಕ್ಕಾಧಿಕಾರಿಪ್ರಸನ್ನ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು, ಯಳಂದೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು, ವಿಭಾಗ ಕಚೇರಿ ಎಇಇ ಶ್ರೀನಿಧಿ ಇನ್ನಿತರರಿದ್ದರು.