ಅಸ್ಪೃಶ್ಯರಿಗೆ ಹಕ್ಕು ಕೊಡಿಸಿದ ಅಂಬೇಡ್ಕರ: ಶುಭಂ ಶುಕ್ಲಾ

KannadaprabhaNewsNetwork | Published : Apr 16, 2025 12:33 AM

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತಿಯು ಸಮಾನತೆ, ಸೌಹಾರ್ದತೆ ಮತ್ತು ಶಾಂತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ದಿನವಾಗಿ ಪರಿಣಮಿಸಿದೆ.

ಸವಣೂರು: ಡಾ. ಬಿ.ಆರ್. ಅಂಬೇಡ್ಕರ ಅವರು ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು ಎಂದು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ತಿಳಿಸಿದರು.ಸೋಮವಾರ ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಸಭಾ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಒಕ್ಕೂಟಗಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 118ನೇ ಜನ್ಮದಿನಾಚರಣೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಭಾಗ್ಯ ವಿಧಾತ ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತಿಯು ಸಮಾನತೆ, ಸೌಹಾರ್ದತೆ ಮತ್ತು ಶಾಂತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ದಿನವಾಗಿ ಪರಿಣಮಿಸಿದೆ. ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತಿ ನಮ್ಮ ಸಂವಿಧಾನವನ್ನು ನೀಡಿದ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ದಿನವಾಗಿದೆ ಎಂದರು. ಬಿಇಒ ಎಂ.ಎಫ್. ಬಾರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಅಧ್ಯಕ್ಷ ಭರತರಾಜ್ ಕೆ.ಎನ್. ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಘವೇಂದ್ರ ಹುಲ್ಲಮ್ಮನವರ ಹಾಗೂ ಯುವ ವಾಗ್ಮಿ ಕಿರಣಕುಮಾರ ಉಪನ್ಯಾಸ ನೀಡಿದರು.

ಕಾರ್ಯಕ್ರಮದನ್ವಯ 2023- 24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಇಂಚರಾ ಶಿವಪ್ಪ ಸೋಂಗರ ಪ್ರಥಮ ಸ್ಥಾನ, ರಾಜೀವ ಯಲ್ಲಪ್ಪ ಹರಿಜನ ದ್ವಿತೀಯ ಸ್ಥಾನ ಹಾಗೂ ಎಸ್‌ಎಫ್‌ಎಸ್ ಶಾಲೆಯ ಪ್ರೇರಣಾ ಕಾಳೆ ತೃತೀಯ ಸ್ಥಾನ ಪಡೆದರು.ಪಿಯುಸಿಯಲ್ಲಿ ಮೊರಾರ್ಜಿ ಕಾಲೇಜಿನ ವಿದ್ಯಾರ್ಥಿಗಳಾದ ದರ್ಶನ ಲಮಾಣಿ ಹಾಗೂ ಶಶಿಕಲಾ ಹರಿಜನ ಪ್ರಥಮ ಸ್ಥಾನ, ಮಣಿಕಂಠ ದಂಡೇರ ದ್ವೀತಿಯ ಸ್ಥಾನ, ದಿವ್ಯಾ ಲಚ್ಚಪ್ಪ ಕನವಳ್ಳಿ ತೃತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.ಪಂಚ ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಪ್ರಮುಖರಾದ ಲಕ್ಷ್ಮಣ ಕನವಳ್ಳಿ, ಮಲ್ಲೇಶ ಹರಿಜನ, ಶಿವಾನಂದ ಹುಲ್ಲಮ್ಮನವರ, ಪ್ರವೀಣ ಬಾಲೇಹೊಸೂರ, ಶ್ರೀಕಾಂತ ಲಕ್ಷ್ಮೇಶ್ವರ, ಸತೀಶ ಪೂಜಾರ, ಲಕ್ಷ್ಮಣ ಮುಗಳಿ, ರಘು ಬಾಲೇಹೊಸೂರ, ಉಮೇಶ ಮೈಲಮ್ಮನವರ, ಅಜಯ ಪೂಜಾರ, ನಾಗರಾಜ ಹರಿಜನ, ಪರಮೇಶ ಮಲ್ಲಮ್ಮನವರ, ಮನೋಜ ದೊಡ್ಡಮನಿ, ಆನಂದ ವಡಕಮ್ಮನವರ, ಹರಿಶ ಪೂಜಾರ, ಪ್ರಶಾಂತ ಮುಗಳಿ, ಜಗದೀಶ ಪೂಜಾರ, ಎಸ್.ಬಿ. ದೊಡ್ಡಮನಿ, ವಿ.ಡಿ. ಸಂಗಣ್ಣವರ, ಸಮಾಜ ಕಲ್ಯಾಣ ಇಲಾಖೆ ಎಡಿ ಜೀವನ ಪಮ್ಮಾರ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಸಿಡಿಪಿಒ ಉಮಾ ಕೆ.ಎಸ್., ಹಿಂದುಳಿದ ವರ್ಗಗಳ ಇಲಾಖೆ ಎಡಿ ಸುಲೋಚನ ಕಟ್ನೂರ ಇತರರು ಪಾಲ್ಗೊಂಡಿದ್ದರು. ಗಜಾನನ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

ರಟ್ಟೀಹಳ್ಳಿ: ತಾಲೂಕಿನ ಮೇದೂರ ಗ್ರಾಮದ ಶ್ರೀ ಗಜಾನನ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ 2024- 25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಕಲಾ ವಿಭಾಗದ ನಂದಿನಿ ಖಂಡೇಬಾಗೂರ 600ಕ್ಕೆ 562(ಶೇ.93.66) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಅನೀತಾ ಕೊಟಿಹಾಳ್ 600ಕ್ಕೆ 498(ಶೇ. 83) ದ್ವಿತೀಯ ಸ್ಥಾನ, ವೈಷ್ಣವಿ ಜಾಲಮ್ಮನವರ 600ಕ್ಕೆ 454(ಶೇ.75.66) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಸೌಜನ್ಯ ಗೌಡರ 600ಕ್ಕೆ 483(ಶೇ. 80.5) ಅಂಕ ಪಡೆದು ಕಾಲೇಜಿಗೆ ಪ್ರಥಮ, ಮೇಘನಾ ಪತ್ತಾರ600ಕ್ಕೆ 470(ಶೇ. 78.33) ಅಂಕ ಪಡೆದು ದ್ವಿತೀಯ, ಸುನೀಲ್ ಕೊಟಿಹಾಳ್ 600ಕ್ಕೆ 424(ಶೇ. 70.66) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಸ್. ಶಿರಗಂಬಿ, ಕಾರ್ಯದರ್ಶಿ ಎಸ್.ಎಂ. ಸುತ್ತಕೊಟಿ, ಸದಸ್ಯರು ಹಾಗೂ ಪ್ರಾಂಶುಪಾಲ ಸಿ.ಎಚ್. ಪೂಜಾರ, ಸಿಬ್ಬಂದಿ ಅಭಿನಂದಿಸಿದ್ದಾರೆ.

Share this article