ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇರುವ ಫ್ಲೆಕ್ಸ್ ಹಾಗೂ ಬೋರ್ಡ್ನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದು, ಬುದ್ದ ವಿಹಾರದಲ್ಲಿರುವ ಬುದ್ದ ವಿಗ್ರಹಕ್ಕೆ ಹಾನಿ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.ಗ್ರಾಮದ ಪರಿಶಿಷ್ಟ ಜನಾಂಗದ ಹಳೆ ಬಡಾವಣೆಯಲ್ಲಿ ಅಂಬೇಡ್ಕರ್ ಬೋರ್ಡ್ ಹಾಗೂ ಹೊಸ ಬಡಾವಣೆ ಬಳಿ ಅಂಬೇಡ್ಕರ್ ಭಾವಚಿತ್ರ ಇರುವ ಫ್ಲೆಕ್ಸ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಅಲ್ಲದೇ ಹೊಸ ಬಡಾವಣೆಯಲ್ಲಿರುವ ಬುದ್ಧನ ಗುಡಿಯೊಳಗಿದ್ದ ಬುದ್ಧನ ವಿಗ್ರಹವನ್ನು ಹೊರ ತಂದು ಒಡೆದು ಹಾಕಿ ಬಿಸಾಕಿ ಹೋಗಿದ್ದಾರೆ.
ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದ್ದು, ಬೈಕ್ನಲ್ಲಿ ಇಬ್ಬರು ಮುಸುಕುಧಾರಿಗಳ ಚಲನವಲಗಳು ಪತ್ತೆಯಾಗಿದೆ. ಅಲ್ಲದೇ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಇತ್ತು. ಗ್ರಾಪಂನಲ್ಲಿ ಅಳವಡಿಸಿರುವ ಸಿಸಿ ಟಿವಿ ಪುಟೇಜ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದನ್ನು ಪರಿಶೀಲಿಸಿದಾಗ ಇಬ್ಬರು ಮುಸುಕುಧಾರಿಗಳು ಗ್ರಾಮದಲ್ಲಿ ಸುತ್ತಾಡಿದ್ದು, ಈ ಕೃತ್ಯದಲ್ಲಿ ತೊಡಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಎಸ್ಪಿ ಭೇಟಿ ಪರಿಶೀಲನೆ:ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ.ಕವಿತಾ, ಪೂರ್ವ ಠಾಣೆಯ ಪೊಲೀಸರು ಜ್ಯೋತಿಗೌಡನಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಶ್ವಾನದಳ, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವು ಬುದ್ಧನ ಗುಡಿಯಿಂದ ನೇರವಾಗಿ ಹಳೆ ಬಡಾವಣೆಯಲ್ಲಿರುವ ಚಾವಡಿ ಬಳಿ ತೆರಳಿ ನಿಂತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚಾವಡಿಗೆ ಬೆರಳಚ್ಚು ತಜ್ಞರು ತೆರಳಿ ಸ್ಯಾಂಪಲ್ಗಳನ್ನು ಸಂಗ್ರಹಿಸಿದರು. ಅಲ್ಲದೇ ಎಸ್ಪಿ ಡಾ.ಬಿ.ಟಿ.ಕವಿತಾ ಚಾವಡಿ ಬಳಿ ತೆರಳಿ ಪರಿಶೀಲಿಸಿದ್ದು. ಈಗಾಗಲೇ ಗ್ರಾಮಸ್ಥರಿಂದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಲಾಗಿದೆ. ಕಿಡಿಗೇಡಿಗಳ ಬಂಧನಕ್ಕೆ ಕ್ರಮ ವಹಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ:ಅಂಬೇಡ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಅನ್ನು ವಿರೂಪಗೊಳಿಸಿರುವ ವಿಷಯ ತಿಳಿದು ಬಡಾವಣೆಯ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಜಮಾಯಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದ ಎರಡು ಕಡೆಗಳಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು.
ಘಟನೆ ಮಧ್ಯರಾತ್ರಿ ನಡೆದಿದೆ ಎನ್ನಲಾಗಿದ್ದು ಈಗಾಗಲೇ ಪೊಲೀಸರು ಅಕ್ಕಪಕ್ಕದಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಸಿಡಿಆರ್ ಹಾಗೂ ಟವರ್ ಡಂಪ್ ತೆಗೆದು ಕಿಡಿಗೇಡಿಗಳ ಬಂಧನ ಮಾಡಲು ತೀವ್ರವಾಗಿ ತನಿಖೆ ಮುಂದುವರಿಸಿದ್ದಾರೆ.