ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ಜ.23ರಂದು ಕೋಟನೂರು ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣದ ಆರೋಪಿ ಸಂಗಮೇಶ ಅವರಿಗೆ ಮಂಗಳವಾರ ನ್ಯಾಯಾಲಯ ಜಾಮೀನು ನೀಡಿತ್ತು. ಇದರಿಂದಾಗಿ ಸಂಗಮೇಶ ಜಾಮೀನು ಮೇಲೆ ಬಿಡುಗಡೆ ಕೂಡಾ ಆಗಿದ್ದರು.
ಇದನ್ನು ತಿಳಿದ ಕೋಟನೂರ್ (ಡಿ) ಊರಿನ ಮತ್ತೊಂದು ಗುಂಪು ಮಂಗಳವಾರ ರಾತ್ರಿ ಸಂಗಮೇಶ ಅವರ ಮನೆಗೆ ನುಗ್ಗಿ, ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂಗಮೇಶನ ಸಹೋದರ ಶಿವಕುಮಾರ್ ಹೇಳಿದ್ದಾರೆ.ಸಂಗಮೇಶನ ಅಣ್ಣನ ಪತ್ನಿ ರಾಜೇಶ್ವರಿ, ತಮ್ಮ ಅನೀಲ್ ಕುಮಾರ್, ಚಿಕ್ಕಪ್ಪ ಮಹಾದೇವಪ್ಪ, ತಾಯಿಯಾದ ತಂಗೆಮ್ಮ ಇರೆಲ್ಲರೂ ಹಲ್ಲೆ ಘಟನೆಯಲ್ಲಿ ತೀವ್ರ ಗಾಯಗಳನ್ನು ಅನುಭವಿಸಿದ್ದಾರೆ. ಇವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲೇ ಚಿಕಿತ್ಸೆ ಮುಂದುವರಿದಿದೆ. ಮನೆಯ ಸಮೀಪ ನಿಲ್ಲಿಸಿದ್ದ 1 ಕಾರು, ನಾಲ್ಕಾರು ಬೈಕ್ಗಳನ್ನು ಹಲ್ಲೆಕೋರರು ಜಖಂ ಮಾಡಿದ್ದಾರೆ, ಇಷ್ಟೆಲ್ಲ ಆದರೂ ಕೂಡಾ ಪೊಲೀಸರು ಈವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ನಗರ ಪೊಲೀಸ್ ಕಮೀಶ್ನರ್ ಆರ್. ಚೇತನ್ ಸ್ಥಳಕ್ಕಾಗಮಿಸಿ ಹೊರಾಟಗಾರರ ಮನ ಒಲಿಕೆಗೆ ಮುಂದಾದರೂ ಕೂಡಾ ಯಾರೂ ಅವರ ಮಾತಿಗೆ ಸೊಪ್ಪು ಹಾಕದೆ ಧರಣಿ ಮುಂದುವರಿಸಿದಾಗ ಹೆಚ್ಚಿನ ಪೊಲೀಸ್ ಬಲ ಅಲ್ಲಿಗೆ ತರಿಸಲಾಗಿತ್ತು. ರಾಮ ಮಂದಿರದಿಂದ ಕೋಟನೂರ್ ಮಠದಾಚೆಯವರೆಗೂ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿ ಬಸ್ಗಳು, ಸರಕು ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿತ್ತು.
ಸದರಿ ಘಟನೆಯನ್ನು ಉಗ್ರವಾಗಿ ಖಂಡಿಸಿರುವ ಬಿಜೆಪಿ ಸಂಸತ್ ಚುನಾವಣೆ ಅಭ್ಯರ್ಥಿ ಡಾ. ಉಮೇಶ ಜಾಧವ್, ಕಲಬರಗಿಯಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನಲು ಇದೇ ಘಟನೆ ಸಾಕ್ಷಿ ಎಂದಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಕೋಟನೂರ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ನಡೆದಿತ್ತು, ಈ ಘಟನೆಯನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ಆದರೆ ನಿನ್ನೆ ಬೇಲ್ ಮೇಲೆ ಬಿಡುಗಡೆಯಾದ ಆರೋಪಿ ಮನೆಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಬೇಲ್ ಮೇಲೆ ಬಿಡುಗಡೆಯಾದ ಯುವಕನ ಮನೆ ಮೇಲೆ 40-50 ಜನರು ನಿನ್ನೆ ರಾತ್ರಿ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ್ದಾರೆ. ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ ಎಂದಿದ್ದಾರೆ. ಕಳೆದ ಜ.23 ರಂದೂ ಸಹ ಕಲಬುರಗಿಯಲ್ಲಿ ವ್ಯಾಪಕ ದಾಂದಲೆ ನಡೆಸಿದ್ದರು. ಆಗಲೇ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ಇಂತಹ ಘಟನೆ ಮತ್ತೆ ಸಂಭವಿಸುತ್ತಿರಲಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ . 10-12 ದಿನಗಳಿಂದ ಜನ ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ ಎಂದಿದ್ದಾರೆ.