ಹರಪನಹಳ್ಳಿ: ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು ಎಂದು ಸ್ಥಳೀಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ತಮ್ಮ ಬೇಡಿಕೆಗಳ ಈಡೇರಿಕೆಗೆ ನನ್ನ ಅವಧಿ ಮುಗಿಯುವುದರೊಳಗೆ ಸರ್ವ ಪ್ರಯತ್ನ ಮಾಡುವುದಾಗಿ ಅವರು ಗಂಗಾಮತ ಸಮಾಜ ಬಾಂಧವರಿಗೆ ಭರವಸೆ ನೀಡಿದರು.
ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ ಮಾತನಾಡಿ, ಅಂಬಿಗರ ಚೌಡಯ್ಯನವರ ಜತೆಗೆ ಮಹಾ ದಾರ್ಶನಿಕ ವೇದವ್ಯಾಸ ಮಹರ್ಷಿಗೂ ಅಷ್ಟೆ ಮಹತ್ವ ಕೊಡಬೇಕು. ಅಂಬಿಗರ ಚೌಡಯ್ಯನವರ ಜಯಂತಿ ದಿನವೇ ವೇದವ್ಯಾಸ ಮಹರ್ಷಿ ಜಯಂತಿ ಸಹ ಆಚರಿಸಬೇಕು ಎಂದು ಸಲಹೆ ನೀಡಿದರು.ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ಮಹಾಭಾರತವನ್ನು ಪ್ರಪಂಚಕ್ಕೆ ನೀಡಿದ ವೇದವ್ಯಾಸ ಮಹರ್ಷಿ ವಂಶಸ್ಥರು ಅಂಬಿಗರು. ಇಂತಹ ಕಾರ್ಯಕ್ರಮ ಮಾಡುವುದರಿಂದ ಸಂಘಟಿತರಾಗಲು ಸಹಕಾರಿ ಎಂದು ಹೇಳಿದರು.
ವಕೀಲ ಕಣವಿಹಳ್ಳಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಗಂಗಾಮತ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಮುಖಂಡ ವಿನಯಕುಮಾರ ಕಕ್ಕರಗೋಳ, ಸರ್ದಾರ ಯಮುನೂರಪ್ಪ, ಪುಟುಗಾನಹಳ್ಳಿ ಟಿ. ಮಂಜುನಾಥ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ರಾಮಪ್ಪ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ. ರಾಜಶೇಖರ, ಶಿಕ್ಷಕರ ಪತ್ತಿನ ಬ್ಯಾಂಕ ಅದ್ಯಕ್ಷ ಬಿ. ಚಂದ್ರಮೌಳಿ, ಗಂಗಾಮತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರಿಯಮ್ಮನಹಳ್ಳಿ ಅಂಜಿನಪ್ಪ, ನಿವೃತ್ತ ಎಂಜಿನಿಯರ್ ಗಂಗಾಧರ, ಬಿ. ಶಿವಾನಂದಪ್ಪ ಇತರರು ಇದ್ದರು.