ರಾಮನಗರ: ನನ್ನ ಮನವಿಗೆ ಸಚಿವರು ಸ್ಪಂದಿಸಿ ರಾಮನಗರಕ್ಕೆ ವಸತಿ ಹಾಗೂ ವಕ್ಫ್ ನಿಂದ, ಅಲ್ಪಸಂಖ್ಯಾತರು ಹೆಚ್ಚು ವಾಸಿಸುತ್ತಿರುವ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ಅಹಮದ್ ಅವರು ಸುಸಜ್ಜಿತ ಆ್ಯಂಬುಲೆನ್ಸ್ ನೀಡಿದ್ದಾರೆ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ದಿಗೆ ನೀಡಿದ್ದ 20 ಕೋಟಿ ವಿಶೇಷ ಅನುದಾನ ಪ್ರತಿ ಗ್ರಾಮ ಪಂಚಾಯಿತಿಗೆ 1 ಕೋಟಿಯಂತೆ 20 ಗ್ರಾಪಂಗಳಿಗೆ ಹಂಚಲಾಗಿದೆ. 162 ಕೋಟಿ ರು. ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಎಡ ಮತ್ತು ಬಲಭಾಗದ ಜಮೀನು ಭೂ ಸ್ವಾಧೀನಕ್ಕೆ ಚಾಲನೆ ನೀಡಲಾಗಿದೆ. ಪಟ್ಟಣದ ಜನರಿಗೆ ದಿನದ 24 ಗಂಟೆಗಳ ಕುಡಿಯುವ ನೀರು ಸರಬರಾಜು ಯೋಜನೆ ಕಾರ್ಯಗತ ವಾಗುತ್ತಿದ್ದು, ಒಟ್ಟಾರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಕಾರ ನೀಡಿ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.
200 ಕೋಟಿ ಅನುದಾನಕ್ಕೆ ಮನವಿ :ರಾಮನಗರ ಕ್ಷೇತ್ರದ ಮತ್ತಷ್ಟು ಅಭಿವೃದ್ದಿ ಕೆಲಸ ಮಾಡಲು ಗ್ರಾಮಾಂತರ ಪ್ರದೇಶಕ್ಕೆ 100 ಕೋಟಿ ಮತ್ತು ಪಟ್ಟಣ ಅಭಿವೃದ್ಧಿಗೆ 100 ಕೋಟಿ ಅನುದಾನದ ಅಗತ್ಯವಿದೆ. 200 ಕೋಟಿ ರು. ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇನೆ. ಅಧಿವೇಶನ ಮುಗಿದ ನಂತರ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ರಾಮನಗರ ಕ್ಷೇತ್ರದ ಕಸಬಾ ಮತ್ತು ಕೈಲಂಚಾ ಹೋಬಳಿಗಳಿಗೆ 40 ಕೋಟಿ ರು. ಹಾಗೂ ಹಾರೋಹಳ್ಳಿ-ಮರಳವಾಡಿ ಹೋಬಳಿಗಳಿಗೆ 40 ಕೋಟಿ ಒಟ್ಟು 80 ಕೋಟಿ ವಿಶೇಷ ಅನುದಾನ ನೀಡಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ ಎಂದರು.
ಕಳೆದ ಮೂವತ್ತು ವರ್ಷಗಳಿಂದ ಮಂಚನಬೆಲೆ ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಬಿಡಲು ಇಲ್ಲಿ ಆಯ್ಕೆಯಾದವರಿಗೆ ಇಚ್ಚಾಶಕ್ತಿ ಇರಲಿಲ್ಲ. ನಾನು ಶಾಸಕನಾದ ತಕ್ಷಣ ರೈತರ ಕೃಷಿಗೆ ನೆರವಾಗಲು ಎರಡು ಕಡೆ ನಾಲೆಗಳಿಗೆ ನೀರು ಹಾಯಿಸಲು ಖುದ್ದಾಗಿ ನಾಲೆಗಳ ಪರಿಸ್ಥಿತಿ ಅವಲೋಕನ ಮಾಡಿ ಮೊದಲ ಹಂತದಲ್ಲಿ 20 ಕಿ.ಮೀ ದೂರ ಎಡ ಮತ್ತು ಬಲದಂಡೆ ನಾಲೆಗಳನ್ನು ಸುಚಿಗೊಳಿಸಲಾಗುತ್ತಿದೆ. ಆ ಕಾರ್ಯ ಡಿಸೆಂಬರ್ ಅಂತ್ಯಕ್ಕೆ ಮುಗಿದು ಜನವರಿ ಹೊಸ ವರ್ಷಾರಂಭಕ್ಕೆ ನಾಲೆಗಳಿಗೆ ನೀರು ಹಾಯಿಸಲಾಗುವುದು ಎಂದು ರೈತರಿಗೆ ಸಿಹಿ ಸುದ್ದಿ ನೀಡಿದರು.
30ಕೆಆರ್ ಎಂಎನ್ 4.ಜೆಪಿಜಿ