ಬಸವನಬಾಗೇವಾಡಿ: ಪಟ್ಟಣದ ಇಕ್ಬಾಲ್ ನಗರದಲ್ಲಿರುವ ಅಮೋಘಸಿದ್ದೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಶನಿವಾರ ಸಂಭ್ರಮ, ಸಡಗರದಿಂದ ಜರುಗಿತು. ಬೆಳಗ್ಗೆ ಡೊಳ್ಳಿನ ವಾದ್ಯಮೇಳದೊಂದಿಗೆ ರಾಮನಹಟ್ಟಿಯ ಬನ್ನಿಗೊಂಡೇಶ್ವರ, ಲಕ್ಕಮ್ಮದೇವಿ ಪಲ್ಲಕ್ಕಿ ಉತ್ಸವ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ಗಂಗಾ ಸ್ಥಳಕ್ಕೆ ತೆರಳಿತು. ಗಂಗಾಸ್ಥಳ ಪೂಜೆ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಮೇಳ, ಸುಮಂಗಲೆಯರ ಆರತಿಯೊಂದಿಗೆ ಪಲ್ಲಕ್ಕಿ ಉತ್ಸವ ಅಮೋಘಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಬಳಿಕ ಅಮೋಘಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಜಾತ್ರಾ ಮಹೋತ್ಸವ ಅಂಗವಾಗಿ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನರಸಲಗಿಯ ಗೌರಿಶಂಕರ ಕಲಾತಂಡದಿಂದ ಮೋಡಿಗಾರ ಆಟ ಜನತೆಯನ್ನು ರಂಜಿಸಿತು. ಮೋಡಿಗಾರ ಆಟಕ್ಕೆ ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ ಚಾಲನೆ ನೀಡಿದರು. ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಚನ್ನಬಸವ ಶ್ರೀಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ, ಎಂ.ಬಿ. ವಗ್ಗರ, ಎಸ್.ಜೆ. ಹೆಗಡ್ಯಾಳ, ಬಸವರಾಜ ಹೆಗಡ್ಯಾಳ, ಅಶೋಕ ಚಲವಾದಿ ಇತರರು ಇದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.