ಬದುಕೋದಕ್ಕೆ ನೂರಾರು ದಾರಿಗಳು ಇರುವಂತೆ, ಕಳ್ಳತನಕ್ಕೂ ನೂರಾರು ದಾರಿ ಇದ್ದೇ ಇರುತ್ತವೆ ಎಂದು ಸಾಗರದಲ್ಲಿ ವಿದ್ಯಾವಂತ ಮೂವರು ಕಾಳುಮೆಣಸು ವ್ಯವಹಾರದಲ್ಲಿ ನಕಲಿ ಚೆಕ್, ನಕಲಿ ಸಿಮ್ ಕಾರ್ಡ್ ಬಳಸಿ ವಂಚಿಸಿ, ಈಗ ಸಾಗರ ಪೇಟೆ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ಸಾಗರ
ಪಟ್ಟಣದ ಶಿವಪ್ಪನಾಯಕ ನಗರ ಹೊಸ ಬಡಾವಣೆಯ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದಿಂದ ನಕಲಿ ಚೆಕ್ ಮೂಲಕ 4.25 ಕ್ವಿಂಟಲ್ ಕಾಳುಮೆಣಸು ಖರೀದಿಸಿ, ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದ ವಿದ್ಯಾವಂತ ಕಳ್ಳರನ್ನು ಪೇಟೆ ಠಾಣೆ ಪೊಲೀಸರು ಮಾಲುಸಹಿತ ಬಲೆಗೆ ಕೆಡವಿದ್ದಾರೆ.
ಸಾಗರದ ವಿನೋಬನಗರದ ಅಕ್ಷಯ, ಸೆಟ್ಟಿಸರದ ಎಸ್.ಕೆ.ಹರ್ಷಿತ್, ರಾಮನಗದ್ದೆಯ ಆರ್.ಎ. ಕುಮಾರ ಅಭಿನಂದನ ಆರೋಪಿಗಳು. ಈ ಮೂವರನ್ನು ಸೆರೆಹಿಡಿದು 2.76 ಲಕ್ಷ ಮೌಲ್ಯದ 4.25 ಕ್ವಿಂಟಲ್ ಕಾಳುಮೆಣಸು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ಗಾಂಧಿನಗರದ ವಿಕ್ಕಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಪೇಟೆ ಠಾಣೆಯ ವೃತ್ತನಿರೀಕ್ಷಕ ಸೀತಾರಾಮ ಹಾಗೂ ಪಿಎಸ್ಐ ಟಿ.ಎಂ. ನಾಗರಾಜ ನೇತೃತ್ವದಲ್ಲಿ ಸಿಬ್ಬಂದಿ ರತ್ನಾಕರ, ಶ್ರೀನಿವಾಸ, ಮೆಹಬೂಬ್, ವಿಕಾಸ್, ಕೃಷ್ಣಮೂರ್ತಿ, ವಿಶ್ವನಾಥ ಹಾಗೂ ತಾಂತ್ರಿಕ ಸಿಬ್ಬಂದಿ ಇಂದ್ರೇಶ ಮತ್ತು ವಿಜಯಕುಮಾರ್ ಅವರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಘಟನೆ ಹಿನ್ನೆಲೆ:
ಈ ಆರೋಪಿಗಳಲ್ಲಿ ಹರ್ಷಿತ್ (ಬಿಇ- ಕಂಪ್ಯೂಟರ್ ಸೈನ್ಸ್), ಅಭಿನಂದನ್ (ಎಂ.ಕಾಂ) ಹಾಗೂ ಅಕ್ಷಯ (ಬಿ.ಕಾಂ.) ಪದವಿಧರರಾಗಿದ್ದಾರೆ. ಕೇವಲ ಹಣ ಮಾಡುವ ಉದ್ದೇಶದಿಂದ ನಕಲಿ ಸಿಮ್, ನಕಲಿ ಚೆಕ್ ಬಳಸಿ, ಕಾಳುಮೆಣಸು ಕಳವು ಮಾಡಿದ್ದರು. ನಕಲಿ ಸಿಮ್ ಬಳಸಿ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದವರನ್ನು ಸಂಪರ್ಕಿಸಿ ಕಾಳುಮೆಣಸು ಖರೀದಿಸಿದ್ದಾರೆ. ಆ ಸಮಯದಲ್ಲಿ ನಕಲಿ ಚೆಕ್ ನೀಡಿ, ಮಾಲು ಸಾಗಿಸಿದ್ದಾರೆ. ವಂಚನೆ ಪ್ರಕರಣದ ತನಿಖೆ ಪ್ರಾರಂಭಿಸಿದ ಪೊಲೀಸರು ಸುಧಾರಿತ ತಂತ್ರಜ್ಞಾನ ಬಳಸಿ, ಆರೋಪಿಗಳ ಮೊಬೈಲ್ ಹ್ಯಾಂಡ್ಸೆಟ್ ಜಾಡು ಹಿಡಿದು 4 ತಿಂಗಳ ಬಳಿಕ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
- - - -6ಕೆಎಸ್.ಎಜಿ4:
ಕಾಳುಮೆಣಸು ಕಳವು ಪ್ರಕರಣ ಭೇದಿಸಿ ಮಾಲು ವಶಪಡಿಸಿಕೊಂಡಿರುವ ಸಾಗರ ಪೇಟೆ ಠಾಣೆ ಪೊಲೀಸರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.