ಗ್ರಾಮಸ್ಥರು, ಅಗ್ನಿಶಾಮಕ ದಳದಿಂದ ಬೆಂಕಿ ನಿಯಂತ್ರಣ । ಅಡಕೆ,ತೆಂಗು, ಸಾಗುವಾನಿ, ಬಾಳೆ, ಹೊಂಗೆ, ಗಂಧದ ಮರಗಳು ಭಸ್ಮ
ಬೇಸಿಗೆ ಸಮೀಪಿಸುತ್ತಿದ್ದಂತೆ ತರೀಕೆರೆ ಸಮೀಪ ಕೆ.ಚಟ್ಟನಹಳ್ಳಿ ಗ್ರಾಮದ ಬಳಿ ವಿಕಸನ ಸಂಸ್ಥೆಯ ಪುನರ್ವಸತಿ ಕೇಂದ್ರದ ತೋಟದಲ್ಲಿ ಶುಕ್ರವಾರ ಆಕಸ್ಮಿಕ ಆಗ್ನಿ ಅನಾಹುತ ಸಂಭವಿಸಿ ಅಡಕೆ,ತೆಂಗು, ಸಾಗುವಾನಿ, ಬಾಳೆ , ಹೊಂಗೆ ಮರಗಳು ಸುಟ್ಟು ಅಪಾರ ನಷ್ಟ ಸಂಭವಿಸಿದೆ.
ತರೀಕೆರೆ ತಾಲೂಕಿನ ಕೆ. ಚಟ್ಟನಹಳ್ಳಿ ಗ್ರಾಮದ ವಿಕಸನ ಬಡ ಮಕ್ಕಳ ಪುನರ್ವಸತಿ ಕೇಂದ್ರ ಮತ್ತು ಸಂಸ್ಥೆ ಅಧ್ಯಕ್ಷ ವರ್ಗಿಸ್ ಕ್ಲೀಟಸ್ ಅವರಿಗೆ ಸೇರಿದ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ತೋಟದ ಕೆಲವು ಭಾಗ ಸುಟ್ಟು ಭಸ್ಮವಾಗಿದೆ ಎಂದು ವಿಕಸನ ಸಂಸ್ಥೆ ಅಧ್ಯಕ್ಷ ವರ್ಗೀಸ್ ಕ್ಲೀಟಸ್ ಮಾಹಿತಿ ನೀಡಿದ್ದಾರೆ.ಅಕಸ್ಮಿಕ ಬೆಂಕಿ ಮತ್ತು ಬಲವಾಗಿ ಬೀಸಿದ ಗಾಳಿಯಿಂದಾಗಿ ಎಲ್ಲ ಕಡೆ ವ್ಯಾಪಿಸಿದ ಬೆಂಕಿಗೆ 150 ಅಡಕೆ ಗಿಡ, 50 ತೆಂಗಿನ ಮರ, 100 ಸಾಗುವಾನಿ ಮರ, 100 ಬಾಳೆ ಗಿಡ 50 ಹೊಂಗೆ ಗಿಡ,10 ಗಂಧದ ಮರಗಳು 10 ಸಪೋಟ ಮರಗಳು, 5 ಹಲಸಿನ ಮರಗಳು ಉಪಯೋಗಕ್ಕೆ ಬಾರದ ರೀತಿ ಸುಟ್ಟು ಕರಕಲಾಗಿದೆ.ಕೇಂದ್ರದ ತೋಟಕ್ಕೆ ಬೆಂಕಿ ಬಿದ್ದಾಗ ಕೆ.ಚಟ್ಟನಹಳ್ಲಿ ಗ್ರಾಮಸ್ತರು ಸಂಸ್ಥೆಯ ಸಿಬ್ಬಂದಿ ಶ್ರೀನಿವಾಸ್ ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ತಕ್ಷಣ ಶ್ರೀನಿವಾಸ್ ರವರು ಸಂಸ್ಥೆಯ ಅಧ್ಯಕ್ಷ ವರ್ಗೀಸ್, ಕೇಂದ್ರದ ಶಿಕ್ಷಕಿ,ಮಕ್ಕಳು ಮತ್ತು ಕೆಲಸಗಾರರಿಗೆ ವಿಚಾರ ತಿಳಿಸಿ ಕೂಡಲೆ ಅಗ್ನಿಶಾಮಕ ದಳ ಕಚೇರಿಯಲ್ಲು ದೂರು ದಾಖಲಿಸಿದ್ದರು. ಸುದ್ದಿ ತಿಳಿದ ತರೀಕೆರೆ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಬೆಂಕಿಯನ್ನು ನಂದಿಸುವಲ್ಲಿ ಫೈರ್ ಇಂಜಿನ್ ಸಿಬ್ಬಂದಿ, ಪುನರ್ವಸತಿ ಕೇಂದ್ರದ ಮಕ್ಕಳು ಮತ್ತು ಸಿಬ್ಬಂದಿ , ಅಕ್ಕಪಕ್ಕದ ಹೊಲದವರು ಹಾಗೂ ಕೆ ಚಟ್ಟನಹಳ್ಳಿಯ ಗ್ರಾಮಸ್ಥರು ಸಹಕರಿಸಿದ್ದರಿಂದ ಬೆಂಕಿ ಕೆನ್ನಾಲಿಗೆ ವ್ಯಾಪಿಸುವುದು ತಪ್ಪಿ, ತಹಬದಿಗೆ ಬಂದಿದೆ.ಆಕಸ್ಮಿಕ ಬೆಂಕಿಯಿಂದಾಗಿ ಬಹಳ ಅಪರೂಪದ ಹಣ್ಣು ಹಂಪಲು ಮರಗಳು ಗಿಡ,ಬಳ್ಳಿಗಳು ಸಂಪೂರ್ಣ ನಾಶವಾಗಿದೆ. ಸುದೈವದಿಂದ ಮಕ್ಕಳ ಮತ್ತು ಪುನರ್ವಸತಿ ಕೇಂದ್ರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ.ಸಂಸ್ಥೆ ಅಧ್ಯಕ್ಷ ವರ್ಗೀಸ್ ಕ್ಲೀಟಸ್ ಬೇಸರಃ
ಪುನರ್ವಸತಿ ಕೇಂದ್ರದ ಈ ಆಸ್ತಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬಡ ಮಕ್ಕಳನ್ನು ಸಾಕುತ್ತಿದ್ದು, ನೂರಾರು ಮಕ್ಕಳು ಇಲ್ಲಿಂದ ಕಲಿತು ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿದ್ದಾರೆ. ಈ ತೋಟದಿಂದ ಬರುತ್ತಿದ್ದ ಆದಾಯದಲ್ಲಿ ಮಕ್ಕಳ ಶಿಕ್ಷಣ ಮತ್ತು ಅವರಿಗೆ ಆಹಾರಒದಗಿಸುವ ವ್ಯವಸ್ಥೆಯಾಗುತ್ತಿತ್ತು. ಇದೀಗ ಆಕಸ್ಮಿಕ ಬೆಂಕಿ ಅನಾಹುತದಿಂದ ಫಸಲಿಗೆ ಬಂದ ಗಿಡ ಮರಗಳು ನಾಶವಾಗಿ ಅಪಾರ ನಷ್ಟವಾಗಿರುವುದು ದುಃಖಕರ ಎಂದು ಹೇಳಿದ್ದಾರೆ.7ಕೆಟಿಆರ್.ಕೆ.10ಃ
7ಕೆಟಿಆರ್.ಕೆ.11