ನಿನಾದ ಸಂಸ್ಥೆಯಿಂದ ಯುಗಾದಿ ಪ್ರಯುಕ್ತ ಯುಗಾದಿ ಸಾಹಿತ್ಯ ಸಂಭ್ರಮ
ಇಲ್ಲಿಯ ಮುಂಡಳ್ಳಿಯಲ್ಲಿ ಸಾಹಿತ್ಯ ಕಲಾತ್ಮಕ ಸಂಘಟನೆ ನಿನಾದ ಕಲ್ಚರಲ್ ಅಕಾಡೆಮಿಯ ಹತ್ತನೇ ವರ್ಷದ ವರ್ಷಾಚರಣೆ ಹಾಗೂ ಯುಗಾದಿ ನಿಮಿತ್ತ ನಿನಾದ ಯುಗಾದಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಿನಾದ ಎಲ್ಲ ಸಂಘಟನೆಯಂತಲ್ಲ, ಇದು ಎಲ್ಲರ ನಿನಾದ. ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ವಿಶೇಷ ಪ್ರಾಮುಖ್ಯತೆ ಇದೆ. ಯುಗಾದಿ ನೆಪದಲ್ಲಿ ಎಲ್ಲ ಅಪ್ತ ವಲಯಗಳು ಸೇರಿ ಈ ರೀತಿಯಾಗಿಯೂ ಹಬ್ಬವನ್ನು ಆಚರಿಸಬಹುದು ಎನ್ನುವುದನ್ನು ನಿನಾದದಿಂದ ಕಲಿಯಬಹುದಾಗಿದೆ. ನಿನಾದ ಕೇವಲ ಸಾಹಿತ್ಯಕಷ್ಟೇ ಸೀಮಿತವಾಗಿರದೆ ಸಂಗೀತ, ನೃತ್ಯ ಜನಪದ ಹೀಗೆ ಕಲೆಯ ಎಲ್ಲಾ ಪ್ರಾಕಾರಗಳಿಗೆ ಪ್ರಾಮುಖ್ಯತೆ ನೀಡುವ ಸಂಘಟನೆಯಾಗಿದೆ ಎಂದರು.ಕವಿ-ಕಾವ್ಯ- ಸಿಂಚನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಂಭು ಹೆಗಡೆ ಮಾನಸುತ ಮಾತನಾಡಿ, ನಿನಾದ ಯುಗಾದಿ ಸಂಭ್ರಮ ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ, ಇಲ್ಲಿ ಸಾಹಿತ್ಯ ಸಂಗೀತ ನೃತ್ಯ ಚಿತ್ರಕಲೆ ಎಲ್ಲವೂ ಮೇಳೈಸಿದೆ. ಎಲ್ಲರನ್ನೂ ಗೌರವಿಸಿದಂತ ಆಪ್ತ ವೇದಿಕೆ ಎಂದರು.
ಅರವಿಂದ ಕರ್ಕಿಕೋಡಿ, ಸಾಹಿತಿ ಮಾನಾಸುತ ಶಂಭು ಹೆಗಡೆ ಹಾಗೂ ಚಿತ್ರಕಲಾವಿದ ಶಿಕ್ಷಕ ಸಂಜಯ ಗುಡಿಗಾರ ಅವರನ್ನು ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ನಿನಾದದ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಅಧ್ಯಕ್ಷತೆ ವಹಿಸಿದ್ದರು. ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉತ್ಥಾನ ಉಮೇಶ ಪ್ರಾರ್ಥಿಸಿದರು, ಹರ್ಷಿತಾ ಪಡಿಯಾರ ಭರತನಾಟ್ಯ ಕಾರ್ಯಕ್ರಮಕ್ಕೆ ಮೆರಗು ನೀಡಿತು. ನಿನಾದ ಉಮೇಶ ನಿರ್ವಹಿಸಿದರು. ಮುಂಡಳ್ಳಿ ಗ್ರಂಥಪಾಲಕ ಸುರೇಶ ನಾಯ್ಕ, ತಾಪಂ ಭಟ್ಕಳದ ಸಿಬ್ಬಂದಿಗಳಾದ ಗೋಪಾಲ ನಾಯ್ಕ, ದಿನೇಶ್ ನಾಯ್ಕ ಮುಂತಾದವರಿದ್ದರು.