ಶರಣು ಸೊಲಗಿಮುಂಡರಗಿ: ತಮ್ಮ ಬದುಕು ಹಸನಾಗಿದ್ದರೆ ಸಾಕು ಎನ್ನುವವರ ಮಧ್ಯೆ ಸ್ವಾರ್ಥರಹಿತ ಸಮಾಜ ಸೇವೆಗೆ ಬದುಕನ್ನು ಮುಡಿಪಾಗಿ ಇಟ್ಟಿರುವ ಇಲ್ಲಿನ ಆನಂದಗೌಡ ಪಾಟೀಲರು, ಸದಾ ಬಡವರು, ನೊಂದವರು ಮತ್ತು ಕೂಲಿ ಕಾರ್ಮಿಕರಿಗೆ ನೆರವಾಗುತ್ತ ಬಂದಿದ್ದು, ಅವರ ಜನ್ಮದಿನ ನಿಮಿತ್ತ ಸ್ನೇಹಿತರ ಬಳಗ ಶನಿವಾರ (ಆ.2) ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ.ಆನಂದಗೌಡ ಪಾಟೀಲರ ಜೀವನವೇ ಒಂದು ಕಥೆ. ಹಸು ಕಟ್ಟಿ, ಹಾಲು ಹಿಂಡಿ, ಹಾಲು ಮಾರಿ ಜೀವನ ನಡೆಸುತ್ತಾ ಬೆಳೆದು ಬಡತನದ ನೋವನ್ನು ಹತ್ತಿರದಿಂದ ಕಂಡಿದ್ದಾರೆ. ಈ ಅನುಭವವೇ ಅವರನ್ನು ಜನಾನುರಾಗಿಯಾಗಿಸಿದೆ. ಸಿರಿವಂತಿಕೆ ಬಂದರೂ, ಅದನ್ನು ತಮ್ಮ ಏಳಿಗೆಗೆ ಮಾತ್ರ ಬಳಸದೆ, ಸಮಾಜದ ದುರ್ಬಲ ವರ್ಗದವರಿಗೆ ನೆರವಾಗುತ್ತಾ ಬಂದಿದ್ದಾರೆ.ಶಾಲೆಗಳ ಅಭಿವೃದ್ಧಿ: ಆನಂದಗೌಡ ಪಾಟೀಲರು ದೇವಸ್ಥಾನಗಳ ಜೀರ್ಣೋದ್ಧಾರದಿಂದ ಹಿಡಿದು ಸರ್ಕಾರಿ ಶಾಲೆಗಳ ಅಭಿವೃದ್ಧಿವರೆಗೆ ಅನೇಕ ಕ್ಷೇತ್ರಗಳಲ್ಲಿ ದಾನ ಮಾಡಿದ್ದಾರೆ.
ಆನಂದಗೌಡ ಪಾಟೀಲರು ತಮ್ಮ ತಂದೆಯ ಹೆಸರಿನಲ್ಲಿ ''''''''ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನ'''''''' ಸ್ಥಾಪಿಸಿ, ಅದರ ಮೂಲಕ ಅನೇಕ ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರುಪಾಯಿ ದೇಣಿಗೆ ನೀಡಿದ್ದಾರೆ. ಏಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ದುರಸ್ತಿ ಮತ್ತು ಅಭಿವೃದ್ಧಿಗೆ ನೆರವಾಗುವ ಮೂಲಕ ಬಡ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದ್ದಾರೆ.ಇಲ್ಲಿನ ಅನ್ನದಾನೀಶ್ವರ ಸಾರ್ವಜನಿಕ ರುದ್ರಭೂಮಿಯನ್ನು ಪ್ರತಿ ವರ್ಷ ಸ್ವಂತ ಖರ್ಚಿನಲ್ಲಿ ಸ್ವಚ್ಛಗೊಳಿಸುವುದು, ಬಡವರ ಮಕ್ಕಳ ಮದುವೆಗೆ ಹಣ, ಬಟ್ಟೆ, ಚಿನ್ನ-ಬೆಳ್ಳಿ ನೀಡಿ ಸಹಾಯ ಮಾಡುತ್ತ ಬಂದಿದ್ದಾರೆ.ಕರೊನಾ ಸಂದರ್ಭದಲ್ಲಿ ಹತ್ತಾರು ಜೀವಗಳನ್ನು ರಕ್ಷಿಸುವಲ್ಲಿ ಅವರ ಪರೋಪಕಾರ ಸೇವೆ ಅನನ್ಯ. ಅನೇಕರಿಗೆ ದಿನಸಿ ಕಿಟ್ಗಳು, ಹಣ್ಣು, ತರಕಾರಿಗಳು ಮತ್ತು ಬಟ್ಟೆಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಕೃಷಿ, ಉದ್ಯಮ, ಕಲೆಗೆ ಆಸರೆ:ಕೃಷಿ ಕುಟುಂಬದಿಂದ ಬಂದ ಆನಂದಗೌಡರು, ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡವರು. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಅಪಾರ ಅನುಭವ ಹೊಂದಿರುವ ಇವರು, ''''''''ವಿಲ್ಯಾಂಪ್ಸ್'''''''' ಎಂಬ ಹನಿ ನೀರಾವರಿ ಉದ್ಯಮ ಆರಂಭಿಸಿ, ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ.
ಕೇವಲ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಷ್ಟೇ ಅಲ್ಲದೆ, ರಂಗಭೂಮಿಗೂ ಅವರು ಭಾರಿ ಕೊಡುಗೆ ನೀಡಿದ್ದಾರೆ. ಬಸವ ಸಾಂಸ್ಕೃತಿಕ ವೇದಿಕೆಯ ಮೂಲಕ ನಾಟಕಗಳನ್ನು ಆಯೋಜಿಸಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ.ಸಮಾಜ ಸೇವೆಗಾಗಿ ವಿವಿಧ ಗೌರವಕ್ಕೆ ಪಾತ್ರರಾಗಿರುವ ಆನಂದಗೌಡ ಪಾಟೀಲ ಅವರಿಗೆ ಆಗಸ್ಟ್ 2ರಂದು ಸಂಜೆ ಮುಂಡರಗಿಯಲ್ಲಿ ಎಚ್.ಎಸ್. ಪಾಟೀಲ ಪ್ರತಿಷ್ಠಾನ ಹಾಗೂ ಗೆಳೆಯರ ಬಳಗದ ವತಿಯಿಂದ ಸನ್ಮಾನ ನಡೆಯಲಿದೆ. ಜತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನೂ ಸನ್ಮಾನಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಮುಂಡರಗಿಯ ಮಹೇಶ ಅರಳಿ ಹೇಳಿದರು.