ಅಂಡರ್ 18 ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟು
ದೇಶದ ಹೆಮ್ಮೆಯ ಕ್ರೀಡೆಯಾದ ಕಬಡ್ಡಿಯಲ್ಲಿ ಗ್ರಾಮೀಣ ಪ್ರತಿಭೆ ಅನನ್ಯಾ ಸಾಧನೆ ಶ್ಲಾಘನೀಯ ಎಂದು ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಹೇಳಿದರು.
ಅಂಡರ್ 18 ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಾಟುಕೊಡಿಗೆಯ ಅನನ್ಯಾ ಎಂ.ಆಚಾರ್ಯ ರನ್ನು ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಸನ್ಮಾನಿಸಿ ಮಾತನಾಡಿದರು. ಕಬಡ್ಡಿ ಗ್ರಾಮೀಣ ಕ್ರೀಡೆಯಾಗಿದ್ದು, ಈ ಪಂದ್ಯಾವಳಿಯಲ್ಲಿ ಆಡಲು ದೃಢ ಮನಸ್ಸು, ಸದೃಢ ದೇಹ ಅಗತ್ಯವಾಗಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವುದು ಸಹ ಹೆಮ್ಮೆಯ ವಿಚಾರ ಎಂದರು.ಅನನ್ಯಾ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡು ಪ್ರಸ್ತುತ 18ರ ವಯೋಮಿತಿಯ ಪಂದ್ಯದಲ್ಲಿ ಕರ್ನಾಟಕ ತಂಡ ಉಪ ನಾಯಕಿಯಾಗಿ ಆಡಿರುವುದು ನಮಗೆಲ್ಲ ಸಂತಸ ತಂದಿದೆ. ಬಾಳೆಹೊನ್ನೂರಿನಿಂದ ಈ ಹಿಂದೆ ರೋಸ್ ಮೇರಿ ಅಂತಾರಾಷ್ಟ್ರೀಯ ಕಬಡ್ಡಿ ಯಲ್ಲಿ ಭಾಗವಹಿಸಿದ ಮೊದಲ ಯುವತಿ. ಮುಂದಿನ ದಿನಗಳಲ್ಲಿ ಅನನ್ಯಾ ಭಾರತ ತಂಡವನ್ನು ಪ್ರತಿನಿಧಿಸುವಂತಾಗಬೇಕು ಎಂಬುದು ನಮ್ಮ ಹಾರೈಕೆ.
ಸನ್ಮಾನ ಸ್ವೀಕರಿಸಿದ ಅನನ್ಯಾ ಮಾತನಾಡಿ, ಎಲ್ಲರ ಪ್ರೋತ್ಸಾಹದಿಂದ ಕರ್ನಾಟಕ ತಂಡವನ್ನು ಜಿಲ್ಲೆಯಿಂದ ಪ್ರತಿ ನಿಧಿಸಲು ಸಾಧ್ಯವಾಯಿತು. ಕಬಡ್ಡಿ ತಂಡ ಸೇರ್ಪಡೆಗೊಳ್ಳಲು ಹಣ ಬಲ, ಶಿಫಾರಸ್ಸು ಬೇಕು ಎನ್ನುತ್ತಾರೆ. ಆದರೆ ನನ್ನ ಸತತ ಪರಿಶ್ರಮದಿಂದ ಕರ್ನಾಟಕ ತಂಡದಲ್ಲಿ ಭಾಗವಹಿಸಿದೆ. ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬ ಆಸೆಯಿದೆ ಎಂದರು.ಅನನ್ಯಾ ಪೋಷಕರಾದ ಎಂ.ಜೆ.ಮಹೇಶ್ ಆಚಾರ್ಯ, ಅನ್ನಪೂರ್ಣ, ಜೇಸಿಐ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ಚೈತನ್ಯ ವೆಂಕಿ, ಎಸ್.ಎಲ್.ಚೇತನ್, ಸನತ್ ಶೆಟ್ಟಿ, ಅಮೋಘ್ ಮತ್ತಿತರರು ಹಾಜರಿದ್ದರು.
೦೮ಬಿಹೆಚ್ಆರ್ ೧:ಅಂಡರ್ 18 ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಬಾಳೆಹೊನ್ನೂರಿನ ಅನನ್ಯಾ ಎಂ.ಆಚಾರ್ಯ ಅವರನ್ನು ಬಾಳೆಹೊನ್ನೂರು ಜೇಸಿಐ ಕ್ಲಾಸಿಕ್ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಇಬ್ರಾಹಿಂ ಶಾಫಿ, ಓ.ಡಿ.ಸ್ಟೀಫನ್, ಮಹೇಶ್ ಆಚಾರ್ಯ, ಶಶಿಧರ್, ಸೈಯ್ಯದ್ ಫಾಜಿಲ್, ಚೈತನ್ಯ ವೆಂಕಿ ಇದ್ದರು.