ಹಂಪಿಯಲ್ಲಿ ಉತ್ಖನನದಲ್ಲಿ ಪುರಾತನ ದೇಗುಲ, ಆನೆ ಕಲಾಕೃತಿ ಪತ್ತೆ

KannadaprabhaNewsNetwork |  
Published : May 17, 2026, 02:30 AM IST
ಫೋಟೋವಿವರ- (16ಎಚ್‌ಪಿಟಿ1,2,3) ಹಂಪಿಯ ಹಜಾರರಾಮ ದೇವಸ್ಥಾನ ಸಮೀಪ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್ ಐ) ನಡೆಸುತ್ತಿರುವ ಉತ್ಖನನದ ಸಂದರ್ಭದಲ್ಲಿ ವಿಜಯನಗರ ಕಾಲದ ಪುರಾತನ ದೇವಲಾಯದ ಚಾವಣಿ ಮತ್ತು ಅಪರೂಪದ ಆನೆಯ ಕಲಾಕೃತಿಗಳು ಪತ್ತೆಯಾಗಿರುವುದು | Kannada Prabha

ಸಾರಾಂಶ

ಉತ್ಖನನದಲ್ಲಿ ಪುರಾತನ ದೇವಾಲಯದ ಚಾವಣಿ, ಸುಂದರವಾದ ಆನೆಯ ಕಲಾಕೃತಿ ಬೆಳಕಿಗೆ ಬಂದಿದೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಹಜಾರ ರಾಮ ದೇವಸ್ಥಾನ ಸಮೀಪ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸುತ್ತಿರುವ ಉತ್ಖನನದ ಸಂದರ್ಭದಲ್ಲಿ ವಿಜಯನಗರ ಕಾಲದ ಪುರಾತನ ದೇವಾಲಯದ ಕಲ್ಲಿನ ಚಾವಣಿ, ಅಪರೂಪದ ಆನೆಯ ಕಲಾಕೃತಿಗಳು ಪತ್ತೆಯಾಗಿವೆ. ಹಜಾರರಾಮ ​ದೇವಸ್ಥಾನದ ದಕ್ಷಿಣ ದ್ವಾರದ ಗೋಡೆಯ ಭಾಗದಲ್ಲಿ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಉತ್ಖನನದಲ್ಲಿ ಪುರಾತನ ದೇವಾಲಯದ ಚಾವಣಿ, ಸುಂದರವಾದ ಆನೆಯ ಕಲಾಕೃತಿ ಬೆಳಕಿಗೆ ಬಂದಿದೆ.

1565ರ ಯುದ್ಧದ ಸಮಯದಲ್ಲಿ ಹಾನಿಗೊಳಗಾಗಿದ್ದ ಅನೇಕ ಸ್ಮಾರಕಗಳ ಅವಶೇಷಗಳು ಈಗ ಒಂದೊಂದಾಗಿ ಹಂಪಿಯಲ್ಲಿ ಪತ್ತೆಯಾಗುತ್ತಿದ್ದು, ಅಂದಿನ ಕಾಲದ ಶ್ರೀಮಂತ ಕಲೆಗೆ ಇವು ಜೀವಂತ ಸಾಕ್ಷಿಯಾಗಿವೆ. ಪುರಾತನ ದೇವಾಲಯದ ಕಲ್ಲಿನ ಚಾವಣಿ ಮತ್ತು ಆನೆಯ ಕಲಾಕೃತಿ ಪತ್ತೆಯಾಗುತ್ತಿದ್ದಂತೆ ಎಎಸ್ಐ ಹಂಪಿ ವೃತ್ತದ ಪುರಾತತ್ವ ಅಧೀಕ್ಷಕ ಕೆ. ರಾಮಕೃಷ್ಣ ರೆಡ್ಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಡೀ ದೇವಾಲಯವೇ ಮಣ್ಣಿನೊಳಗೆ ಸುಸ್ಥಿತಿಯಲ್ಲಿರುವ ಸಾಧ್ಯತೆಯಿದೆ. ಅನೇಕ ಶತಮಾನಗಳ ಹಿಂದಿನ ದೇವಾಲಯವಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ದೇವಾಲಯವು ಅಂದಾಜು 4.30 ಮೀಟರ್‌ ಉದ್ದ ಮತ್ತು 4.25 ಮೀಟರ್‌ ಅಗಲವಿದ್ದು, ಈ ದೇವಾಲಯವು ಇಟ್ಟಿಗೆಯಿಂದ ನಿರ್ಮಿಸಿದ ಶಿಖರ ಮತ್ತು ಗರ್ಭಗೃಹದ ಮೇಲ್ಭಾಗ ಗೋಚರಿಸುತ್ತಿದೆ. ಸುಮಾರು 10 ಅಡಿಗೂ ಹೆಚ್ಚು ಎತ್ತರದ ಗೋಡೆಗಳು ಮಣ್ಣಿನೊಳಗೆ ಸುರಕ್ಷಿತವಾಗಿರಬಹುದು. ಈ ದೇವಾಲಯವು ಜೈನ ಧರ್ಮಕ್ಕೆ ಸಂಬಂಧಿಸಿದ್ದಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ. ಹಂಪಿ‌ ಇತಿಹಾಸ‌ ಅಧ್ಯಯನಕ್ಕೆ ಇದು ಹೆಚ್ಚಿನ‌‌ ಮಹತ್ವ‌ ಪಡೆದಿದೆ. ಈ ಶಿಲ್ಪಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರ ಮಾಡಲಾಗುವುದು ಎಂದು ಅವರು ತಿಳಿಸಿದರು.

ಹಂಪಿಯಲ್ಲಿ ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಕೈಗೊಂಡಿರುವ ಉತ್ಖನನ ಮತ್ತು ಜೀರ್ಣೋದ್ಧಾರ ಕಾರ್ಯವು ವೈಜ್ಞಾನಿಕ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ. ಮಣ್ಣಿನಲ್ಲಿ ಅಡಗಿರುವ ಐತಿಹಾಸಿಕ ಸ್ಮಾರಕಗಳು ಬೆಳಕಿಗೆ ಬರುತ್ತಿವೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಗತ ವೈಭವದ ಪುಟಗಳು ಮತ್ತೆ ತೆರೆದುಕೊಳ್ಳಲಿವೆ ಎಂದು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ವಿರುಪಾಕ್ಷಿ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಿರಿಜನ ಹಾಡಿಯಲ್ಲಿ ಅನಧಿಕೃತ ಚರ್ಚ್: ತಮಿಳುನಾಡು ಮೂಲದ ಮಂದಿ ವಶಕ್ಕೆ
ಕಾರಿಂಜ ಸಹಿತ ಎರಡು ದೇವಸ್ಥಾನಕ್ಕೆ ಸಿಡಿಲಾಘಾತ