ಅಂಗಡಿ ಮಲ್ಲೇಶಪ್ಪ ಬದುಕು ಯುವ ಪೀಳಿಗೆಗೆ ಮಾದರಿ: ಸದಾಶಿವ ಸ್ವಾಮೀಜಿ

KannadaprabhaNewsNetwork | Published : Jun 16, 2025 11:48 PM

ಸಾಹಿತಿ ಸಿ.ಎಸ್. ಮರಳಿಹಳ್ಳಿ ಅವರು ಅಂಗಡಿ ಮಲ್ಲೇಶಪ್ಪನವರ ಬದುಕಿನ ಎಲ್ಲ ಮಜಲುಗಳನ್ನು ಅಕ್ಷರರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ.

ಹಾವೇರಿ: ಪ್ರಗತಿಪರ ರೈತರು, ಸಾಮಾಜಿಕ ಕಳಕಳಿ ಹೊಂದಿರುವ ಅಂಗಡಿ ಮಲ್ಲೇಶಪ್ಪನವರ ಆದರ್ಶಗಳು ಕೇವಲ ತಮ್ಮ ಮನೆತನಕ್ಕೆ ಸೀಮಿತಗೊಳ್ಳದೇ, ಪುಸ್ತಕ ರೂಪದಲ್ಲಿ ಅವರ ವ್ಯಕ್ತಿತ್ವ ಅನಾವರಣಗೊಂಡಿರುವುದು ಭವಿಷ್ಯದ ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ತಿಳಿಸಿದರು.ತಾಲೂಕಿನ ಹೊಸರಿತ್ತಿ ಗ್ರಾಮದ ಜಿ.ವಿ. ಹಳ್ಳಿಕೇರಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪರೋಪಕಾರಿ ಅಂಗಡಿ ಮಲ್ಲೇಶಪ್ಪನವರ ವ್ಯಕ್ತಿತ್ವ ದರ್ಶನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಸಾಹಿತಿ ಸಿ.ಎಸ್. ಮರಳಿಹಳ್ಳಿ ಅವರು ಅಂಗಡಿ ಮಲ್ಲೇಶಪ್ಪನವರ ಬದುಕಿನ ಎಲ್ಲ ಮಜಲುಗಳನ್ನು ಅಕ್ಷರರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀವನ ನಡೆಸುತ್ತಿರುವ ಮಲ್ಲೇಶಪ್ಪನವರ ವ್ಯಕ್ತಿತ್ವ ಪುಸ್ತಕ ರೂಪದಲ್ಲಿ ಅನಾವರಣಗೊಂಡಿದ್ದು ಅವರು ಹುಟ್ಟಿದ್ದು ಸಾರ್ಥಕವಾಗಿದೆ ಎಂದರು. ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಮಲ್ಲೇಶಪ್ಪನವರು ಜೀವನ ಸಾಗಿಸುವ ಬದಲು ಜೀವನದಲ್ಲಿ ಸಾಧಿಸಿದ್ದಾರೆ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ನಿಜವಾದ ಜೀವನ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ಯಾರನ್ನು ತುಳಿಯದೇ ತಿಳಿದು ಬದುಕಿದ್ದು ಮಲ್ಲೇಶಪ್ಪನವರ ಆದರ್ಶ ಬದುಕೇ ಸಾಕ್ಷಿಯಾಗಿದೆ ಎಂದರು. ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಧರ್ಮದರ್ಶಿ ವೀರಣ್ಣ ಚಕ್ಕಿ ಮಾತನಾಡಿ, ಮಲ್ಲೇಶಪ್ಪ ಅಂಗಡಿ ಅವರು ಹಾವೇರಿ ಎಪಿಎಂಸಿ ಅಧ್ಯಕ್ಷರಾಗಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿ ಅನೇಕ ಕೊಡುಗೆ ನೀಡಿದ್ದಾರೆ. ತಾಲೂಕಿನ ಪೂರ್ವಭಾಗದಲ್ಲಿ ಅಭಿವೃದ್ಧಿ ಪರ ಕಾರ್ಯಗಳಿಂದ ಹೆಸರುವಾಗಿಯಾಗಿದ್ದು, ಇಂತಹ ಹಿರಿಯ ವ್ಯಕ್ತಿಗಳ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಗಾಂಧಿ ಗ್ರಾಮೀಣ ಗುರುಕುಲ ಇಂತಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಮಲ್ಲೇಶಪ್ಪ ಅಂಗಡಿಯವರು ಶ್ರಮಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಪರೋಪಕಾರಿ ಅಂಗಡಿ ಮಲ್ಲೇಶಪ್ಪನವರ ವ್ಯಕ್ತಿತ್ವ ದರ್ಶನ ಪುಸ್ತಕವನ್ನು ರಚಿಸಿದ ಸಾಹಿತಿ ಸಿ.ಎಸ್. ಮರಳಿಹಳ್ಳಿ ಹಾಗೂ ಪುಸ್ತಕ ಪ್ರಕಟಿಸಲು ಸಹಕರಿಸಿದ ನಿವೃತ್ತ ಉಪತಹಸೀಲ್ದಾರ್ ವೀರಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ವರ್ತಕರಾದ ನಿರಂಜನಪ್ಪ ಪಾವಲಿ, ವಿಶ್ರಾಂತ ಜಿಲ್ಲಾ ಮುಖ್ಯ ನ್ಯಾಯಾಧೀಶ ಸಿ.ವಿ. ಮರಗೂರ, ಕಸಾಪ ಪ್ರಥಮ ಜಿಲ್ಲಾಧ್ಯಕ್ಷ ಡಾ. ಕೆ.ಎಚ್. ಮುಕ್ಕಣ್ಣನವರ, ಹಾವೇರಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ರುದ್ರಪ್ಪ ಹಳ್ಳಿಕೇರಿ, ರಮೇಶ ಏಕಬೋಟೆ, ಸಿದ್ದರಾಜ ಕಲಕೋಟಿ, ಶ್ರೀನಿವಾಸ ಏಕಬೋಟೆ, ಗಿರೀಶ ಅಂಕಲಕೋಟಿ, ಮುರಿಗೆಪ್ಪ ಅಂಗಡಿ, ದಾನಪ್ಪ ಅಂಗಡಿ, ಬಸವರಾಜ ಅಂಗಡಿ, ಶಿದ್ರಾಮಪ್ಪ ಅಂಗಡಿ ಸೇರಿದಂತೆ ಇತರರು ಇದ್ದರು. ಶರಣಪ್ಪ ಹತ್ತಿಕೋಟಿ ಸ್ವಾಗತಿಸಿದರು. ವೀರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಆರ್. ಯಡಳ್ಳಿ ನಿರೂಪಿಸಿದರು.