ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕೃಷಿ ಮಹಾವಿದ್ಯಾಲಯ ವಿ.ಸಿ.ಫಾರ್ಮ್, ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೆಂಗಳೂರಿನ ಹಳೆ ವಿದ್ಯಾರ್ಥಿ ಸಂಘದ ಧನ ಸಹಾಯ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಪಶು ವೈದ್ಯರಾದ ಡಾ.ಶಿವಯ್ಯ, ಡಾ.ತಿಮ್ಮಚಾರಿ ಮತ್ತು ಡಾ.ಪ್ರಭುಸ್ವಾಮಿ ಅವರು ಕನಗೊನಹಳ್ಳಿ ಹಾಗೂ ನೆರೆಹೊರೆಯ ಇತರೆ ಗ್ರಾಮಗಳಿಂದ ಬಂದಿದ್ದ ರೈತರ ಸಾಕು ಪ್ರಾಣಿಗಳ ತಪಾಸಣೆ ನಡೆಸಿದರು.
ಸುಮಾರು 130 ಹಸುಗಳು, 60 ಕುರಿಗಳು ಮತ್ತು 90 ಮೇಕೆಗಳು, 30 ಕೋಳಿಗಳು ಹಾಗೂ ನಾಯಿಗಳಿಗೂ ಉಚಿತವಾಗಿ ತಪಾಸಣೆಯನ್ನು ಮಾಡಿ ಔಷಧಿ, ಲಸಿಕೆ ಉಣ್ಣೆ ನಿವಾರಣೆಗೆ ಸಲಹೆ ಮತ್ತು ಜಂತುಹುಳು ನಿವಾರಕವನ್ನು ನೀಡಿದರು.ಡಾ.ಶಿವಯ್ಯ ಅವರು ಪಶುಗಳಿಗೆ ಸಮತೋಲಿತ ಆಹಾರ ನೀಡಿ ಪ್ರಾಮುಖ್ಯತೆ ತಿಳಿಸಿದರು. ಸಮತೋಲಿತ ಆಹಾರ ನೀಡುವುದರಿಂದ ಪಶುಗಳಿಗೆ ಬರುವಂತಹ ಹಲವು ಸಮಸ್ಯೆಗಳನ್ನು ತಡೆಗಟ್ಟಬಹುದು. ಅಷ್ಟೆ ಅಲ್ಲದೇ, ಹಸುವಿನ ಹಾಲಿನ ಗುಣಮಟ್ಟ ಹಾಗೂ ಜಿಡ್ಡಿನ ಅಂಶವನ್ನು ಹೆಚ್ಚಿಸಬಹುದು ಎಂದರು.
ನೆಪಿಯರ್ ಹುಲ್ಲು, ರೌಡೆಸ್ ಹುಲ್ಲು, ಮೆಕ್ಕೆಜೋಳ , ಲೂಸರ್ನ ಮುಂತಾದ ಮೇವು ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಸಂಜೆ ಆಹಾರ ಬೆಳೆಗಳಲ್ಲಿ ಹೆಚ್ಚು ಇಳುವರಿ ನೀಡುವ ಹಾಗೂ ಸಂಕರ ತಳಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಂಡ್ಯದ ಕೃಷಿ ಕಾಲೇಜು ಉಪನ್ಯಾಸಕರಾದ ಡಾ.ಚಂದನ ಡಾ.ಸಂಕೇತ್ ಮತ್ತು ಡಾ.ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಾದ ಶೋಭಾ, ಕೃಷ್ಣ ಇಕೋನಿ, ಅನನ್ಯ, ಗ್ಲಾನಿಯಾ ಭಾಗವಹಿಸಿದ್ದರು.
ಮಂಡ್ಯ:ತಾಲೂಕಿನ ಉತ್ತರ ವಲಯ ವ್ಯಾಪ್ತಿಯ ಶಿಕ್ಷಣ ಇಲಾಖೆ ಅನುಮತಿ ಹಾಗೂ ಮಾನ್ಯತೆ ಪಡೆಯದೆ ಶಾಲೆಗಳನ್ನು ನಡೆಸುತ್ತಿರುವ ಮೂರು ಅನಧಿಕೃತ ಶಿಕ್ಷಣ ಸಂಸ್ಥೆಗಳ ವಿರುದ್ಧ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಅನಧಿಕೃತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ ಶಿಕ್ಷಣ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಕೂಡಲೇ ಸಮೀಪದ ಅಧಿಕೃತ ಹಾಗೂ ಮಾನ್ಯತೆ ಪಡೆದ ಶಾಲೆಗಳಿಗೆ ದಾಖಲಿಸುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ. ತಪ್ಪಿದಲ್ಲಿ ಮುಂದಾಗುವ ಸಮಸ್ಯೆಗಳಿಗೆ ಪೋಷಕರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಮಂಡ್ಯ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ನಾಗಮಂಗಲ: ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ತಾಲೂಕು ಪಂಚಾಯಿತಿಯಲ್ಲಿ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆ ಮತ್ತು ಪಾಲಗ್ರ್ರಹಾರ ಗ್ರಾಪಂನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ ಇದ್ದು, ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಪದವಿ ಹೊಂದಿದ 18 ರಿಂದ 45 ವರ್ಷದೊಳಗಿನ ತಾಲೂಕು ವ್ಯಾಪ್ತಿಯ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ/ ಅನುತ್ತೀರ್ಣರಾದ ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿಕಲಚೇತನರು ಅರ್ಜಿ ಸಲ್ಲಿಸಬಹುದು. ಆಸಕ್ತರು ನಾಗಮಂಗಲ ತಾಲೂಕು ಪಂಚಾಯಿತಿಯಿಂದ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 16 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ- 7411254522, 08232-239234 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.