ಪಶು ಸಂಗೋಪನೆ ರೈತರ ಬೆನ್ನೆಲುಬು: ವೀರೇಶ ಮತ್ತಿಹಳ್ಳಿ

KannadaprabhaNewsNetwork | Published : Oct 17, 2024 12:03 AM

ಸಾರಾಂಶ

ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಪಶು ಇಲಾಖೆ ವತಿಯಿಂದ ಕರುಗಳ ಪ್ರದರ್ಶನ, ಜಾನುವಾರು ಚಿಕಿತ್ಸೆ ಶಿಬಿರ ಹಾಗೂ ಪ್ರಾಣಿಜನ್ಯ ರೋಗಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹಾವೇರಿ: ತಾಲೂಕಿನ ಕುಳೇನೂರು ಗ್ರಾಮದಲ್ಲಿ ಪಶು ಇಲಾಖೆ ವತಿಯಿಂದ ಕರುಗಳ ಪ್ರದರ್ಶನ, ಜಾನುವಾರು ಚಿಕಿತ್ಸೆ ಶಿಬಿರ ಹಾಗೂ ಪ್ರಾಣಿಜನ್ಯ ರೋಗಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಪಶು ಇಲಾಖೆ ಆಡಳಿತ ಉಪನಿರ್ದೇಶಕ ಡಾ.ಎಸ್.ವಿ. ಸಂತಿ ಮಾತನಾಡಿ, ಇಂದಿನ ಕರುಗಳು ಮುಂದಿನ ಉತ್ತಮ ತಳಿಯ ಹಸುಗಳ ಉತ್ಪಾದನೆಗೆ ಸಹಕಾರಿಯಾಗುತ್ತದೆ ಎಂದು ಹೇಳುವ ಮೂಲಕ ಕರುಗಳ ಪಾಲನೆ ಮತ್ತು ಲಸಿಕೆ ಮಹತ್ವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ವೀರೇಶ ಮತ್ತಿಹಳ್ಳಿ ಮಾತನಾಡಿ, ಪಶು ಸಂಗೋಪನೆ ರೈತರ ಬೆನ್ನೆಲುಬು. ಹಾಗಾಗಿ ಕುಳೇನೂರು ಗ್ರಾಮಕ್ಕೆ ಹೊಸ ಪಶುಆಸ್ಪತ್ರೆ ಮತ್ತು ಹಾಲು ಪರೀಕ್ಷೆ ಮಾಡುವ ಯಂತ್ರವನ್ನು ಮಂಜೂರು ಮಾಡಬೇಕೆಂದು ಕೋರಿದರು.

ಹಾವೇರಿಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಜಯಕುಮಾರ್ ಕಂಕನವಾಡಿ ೫೦ಕ್ಕೂ ಹೆಚ್ಚು ಹಸುಗಳನ್ನು ಪರೀಕ್ಷಿಸಿದರು ಹಾಗೂ ಪ್ರಾಣಿಜನ್ಯ ಮತ್ತು ಜಾನುವಾರು ಪೌಷ್ಟಿಕಾಂಶ ಆಹಾರದ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಹಾವೇರಿ ಕೆಎಂಎಫ್ ಅಧಿಕಾರಿ ನಿಂಗಪ್ಪ ತಳವಾರ, ಡಾ. ಬಸವರಾಜ್, ಗ್ರಾಪಂ ಮತ್ತು ಹಾಲು ಉತ್ಪಾದಕ ಸಂಘದ ಅಧ್ಯಕ್ಷರ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಸಹಾಯಕ ನಿರ್ದೇಶಕ ಡಾ. ಪರಮೇಶ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಂ.ಎ. ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಮುನ್ನಂಗಿ ಸ್ವಾಗತಿಸಿದರು.

ಉತ್ತಮ ತಳಿಯ ೯ ಕರುಗಳ ಆಯ್ಕೆ: ಡಾ. ಎಂ.ಎ. ಬೂದಿಹಾಳ, ಡಾ. ಕಾರ್ತಿಕ್, ಡಾ. ಹರ್ಷ ಹಾಗೂ ಜಾನುವಾರು ಅಭಿವೃದ್ಧಿ ಅಧಿಕಾರಿ ಕರಿಯಪ್ಪನವರ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕುನ್ನೂರ ಇವರು ಶಿಬಿರದಲ್ಲಿ ಭಾಗವಹಿಸಿದ ೬೫ ಕರುಗಳಲ್ಲಿ ಉತ್ತಮ ತಳಿಯ ೯ ಕರುಗಳನ್ನು ಆಯ್ಕೆ ಮಾಡಿದರು. ಭಾಗವಹಿಸಿದ ಎಲ್ಲ ಕರುಗಳಿಗೆ ಬಹುಮಾನ ಹಾಗೂ ಐರನ್ ಟಾನಿಕ್ ಮತ್ತು ಸಾಲ್ಟ್ ಲಿಕ್ ಬಿಲ್ಲೆಗಳನ್ನು ವಿತರಿಸಲಾಯಿತು. ಈ ವೇಳೆ ಮಲ್ಲಿಕಾರ್ಜುನ್ ಮಾಗಿ, ವೀರೇಶ, ಮಹಾಂತೇಶ ಬಸವಪ್ಪ, ಗ್ರಾಪಂ ಸಿಬ್ಬಂದಿ ಹಾಗೂ ಪಶು ಸಖಿಯರು ಪಾಲ್ಗೊಂಡಿದ್ದರು.

Share this article