ಯಗಚಿ ಜಲಾಶಯಕ್ಕೆ ಸತ್ತ ಪ್ರಾಣಿಗಳ ತ್ಯಾಜ್ಯ । ವಿಷಯ ತಿಳಿಸಿದರೂ ಕ್ರಮ ಕೈಗೊಳ್ಳದ ಇಂಜಿನಿಯರ್ ರಾಮಕೃಷ್ಣ
ಪಟ್ಟಣದ ಹೊಸನಗರ ಬಡಾವಣೆಯ ಮುಂಭಾಗದ ಯಗಚಿ ನಾಲೆಗೆ ಕಿಡಿಗೇಡಿಗಳು ಸತ್ತ ಜಾನುವಾರು, ಕೋಳಿ ಮತ್ತು ಹಂದಿ ತ್ಯಾಜ್ಯ ಗಳನ್ನು ಎಗ್ಗಿಲ್ಲದೆ ಬಿಸಾಕುತ್ತಿದ್ದು ಇದರಿಂದ ಕೆಟ್ಟವಾಸನೆ ಬೀರುತ್ತಿರುವುದರಿಂದ ಸ್ಥಳಿಯರು ಈ ಭಾಗದಲ್ಲಿ ಸಂಚಾರ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ಯಗಚಿ ಇಂಜಿನಿಯರ್ ರಾಮಕೃಷ್ಣ ಅವರಿಗೆ ತಿಳಿಸಿದ್ದರೂ ಯಾವುದೆ ಕ್ರಮಕೈಗೊಳ್ಳದೆ ಬರಿ ಸಬೂಬು ಹೇಳಿಕೊಂಡು ನುಗುಚಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಯಗಚಿ ಜಲಾಶಯ ತಾಲೂಕಿಗೆ ಜೀವನದಿಯಾಗಿದೆ. ನಾಲೆಯಿಂದ ಹರಿಯುವ ನೀರು ಹಳೇಬೀಡು ಮಾದಿಹಳ್ಳಿ ಭಾಗಕ್ಕೆ ನೀರು ಒದಗಿಸುವ ಯೋಜನೆ ಇದಾಗಿದ್ದು, ಈ ನಾಲೆಯಿಂದ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಬಳಕೆಯಾಗುತ್ತಿದೆ. ರೈತರು ತಮ್ಮ ಜಮೀನುಗಳಿಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇಂತಹ ಜೀವಸಲೆಯನ್ನು ಉಳಿಸುವುದು ಅಧಿಕಾರಿಗಳ ಜವಾಬ್ದಾರಿ. ಅದರೆ ನಾಲೆಗೆ ಅಕ್ರಮವಾಗಿ ಕತ್ತರಿಸಿದ ಜಾನುವಾರುಗಳ ತ್ಯಾಜ್ಯವನ್ನು ಎಸೆಯುತ್ತಿದ್ದರೂ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಪ್ರಸ್ತುತ ನೀರು ಅಮೂಲ್ಯ ಜೀವಜಲವನ್ನು ಆಶ್ರಯಿಸಿ ಸಾವಿರಾರು ಕುಟುಂಬಗಳು ಕುಡಿಯುವ ನೀರಿಗೆ ಅವಲಂಬನೆಯಾಗಿದ್ದಾರೆ. ಇಂತಹ ಪರಿಸ್ಥಿತಿ ಇದ್ದರು ಯಗಚಿ ಜಲಾಶಯದ ಇಂಜಿನಿಯರ್ ರಾಮಕೃಷ್ಣ ಇದು ನನಗೆ ಸಂಬಂಧಿಸಿದ್ದಲ್ಲ ಎಂಬ ಭಾವನೆ ತೋರಿದ್ದಾರೆ.ಸರ್ಕಾರಿ ಅಧಿಕಾರಿಗಳು ನೀರಿನ ಸಂರಕ್ಷಣೆ ಮಾಡದೆ ಬೇಜಾವಾಬ್ದಾರಿಂದ ವರ್ತಿಸಿದ್ದಾರೆ. ನಾಲೆಯ ದಂಡೆ ಮೇಲೆ ಹಳೆ ಮನೆಗಳ ಕಟ್ಟಡದ ಅವಶೇಷಗಳು ನಾಲೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಪದಾರ್ಥಗಳನ್ನು ಬೇಕಾಬಿಟ್ಟಿ ಎಸೆದು ರಾಶಿ ರಾಶಿ ಹಾಕಿದ್ದಾರೆ. ನಾಲೆಯ ಬದಿಯಲ್ಲಿ ಗಿಡಗಂಟೆಗಳು ಬೆಳದು ಪರಿಸರವನ್ನೇ ಹಾಳು ಮಾಡಿವೆ. ಪಟ್ಟಣದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕತ್ತರಿಸಿ ತ್ಯಾಜ್ಯಗಳನ್ನು ಕಾಲುವೆಯಲ್ಲಿ ಬೀಸಾಕುತ್ತಿದ್ದಾರೆ. ಅಕ್ರಮ ಜಾನುವಾರು ಮಾಂಸದ ಅಂಗಡಿಗಳು ತಲೆಎತ್ತಿದ್ದು ಪುರಸಭೆ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸುವುದು ಸೂಕ್ತ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಹೊಸಸನಗರ ಬಡಾವಣೆ ಕಾಂಗ್ರೆಸ್ ಮುಖಂಡ ವೆಂಕಟೇಶ್ ಮಾತನಾಡಿ, ಕಳೆದ 6 ತಿಂಗಳುಗಳಿಂದ ಜಾನುವಾರುಗಳನ್ನು ಅಕ್ರಮವಾಗಿ ಕತ್ತರಿಸಿ ತ್ಯಾಜ್ಯಗಳನ್ನು ನಾಲೆಗೆ ಬಿಸಾಕುತ್ತಿದ್ದಾರೆ. ದನ, ಕೋಳಿ, ಹಂದಿ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಇಂಜಿನಿಯರ್ ಅವರಿಗೆ ತಿಳಿಸಿದರೂ ಸ್ಥಳಕ್ಕೆ ಬಂದು ನೋಡಿ ಹೋಗುತ್ತಿದ್ದಾರೆ ವಿನಾ ಸಮಸ್ಯೆಗೆ ಪರಿಹಾರ ನೀಡಿಲ್ಲ. ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕ ಎಚ್.ಕೆ.ಸುರೇಶ್ ಅವರ ಹತ್ತಿರ ಮಾತನಾಡಿದ್ದು ಬಗೆಹರಿಸುತ್ತೆವೆ ಎಂದು ತಿಳಿಸಿದ್ದಾರೆ. ಅಲ್ಲದೆ ನನ್ನ ಪತ್ನಿ ಪುರಸಭೆ ಸದಸ್ಯೆಯಾಗಿದ್ದು ಅವರು ಸಹ ಪುರಸಭೆ ಸಾಮನ್ಯ ಸಭೆಯಲ್ಲಿ ಮಾತನಾಡಲಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಉಗ್ರ ಪತ್ರಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಸಂಧರ್ಭದಲ್ಲಿ ಹೊಸನಗರ ಬಡಾವಣೆ ನಿವಾಸಿಗಳಾದ ನಟರಾಜ್, ಮಂಜು. ಬಾಬು, ಜಯರಾಮ್ ಇದ್ದರು.