ಹರುಷದಿಂದ ಹಿಂಗಾರು ಬಿತ್ತನೆ ಶುರು ಮಾಡಿದ ಅನ್ನದಾತರು

KannadaprabhaNewsNetwork |  
Published : Oct 16, 2025, 02:01 AM IST
ಪೋಟೋ ಇದೆ. | Kannada Prabha

ಸಾರಾಂಶ

ಉಳಿದಂತೆ ಕೇಂದ್ರ ಸರ್ಕಾರ ಕುಸುಬೆಗೆ ಅತಿ ಹೆಚ್ಚು ಅಂದರೆ ಈ ಬಾರಿ ಕ್ವಿಂಟಲ್‌ಗೆ 6540 ರು. ವರೆಗೂ ಬೆಂಬಲ ಬೆಲೆ ಘೋಷಿಸಿದ್ದರೂ ರೈತರು ಕುಸುಬೆ ಬೇಸಾಯಕ್ಕೆ ಆದ್ಯತೆ ನೀಡಲು ಮುಂದೆ ಬರುತ್ತಿಲ್ಲ ಎಂಬುದು ಅಂಕಿಸಂಖ್ಯೆಗಳಿಂದ ಗೋಚರವಾಗುತ್ತಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಕೃಷಿ ಕುಟುಂಬಗಳ ಮಹತ್ವಾಕಾಂಕ್ಷೆಯ ಹಿಂಗಾರು ಬಿತ್ತನೆಗೆ ಧಾರವಾಡ ಜಿಲ್ಲೆಯಲ್ಲಿ ಅತೀ ಉತ್ಸಾಹ, ಹರ್ಷದಿಂದ ಚಾಲನೆ ದೊರೆತಿದ್ದು, ಜಿಲ್ಲೆಯಲ್ಲಿ ನೀರಾವರಿ, ಒಣಬೇಸಾಯ ಸೇರಿ ಈ ಬಾರಿ ಒಟ್ಟು 2,15,725 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ.

ಒಣಬೇಸಾಯದ ಪ್ರದೇಶವೇ ಹೆಚ್ಚಿನ ಪ್ರಮಾಣದಲ್ಲಿದ್ದರೂ ನೀರಾವರಿ ಸಹಾಯದಿಂದ ಕೃಷಿಕರು ಬದುಕು ಕಟ್ಟಿಕೊಂಡಿದ್ದು, 25,935 ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 2500 ಹೆ. ಜೋಳ, 8225 ಹೆ. ಮುಸುಕಿನಜೋಳ, 2535 ಹೆ. ಗೋದಿ, 650 ಹೆ. ಸಾವೆ, 6770 ಹೆ. ಕಡಲೆ, 150 ಹೆ. ಹುರುಳಿ, 5 ಹೆ. ಉದ್ದು, 495 ಹೆ. ಹೆಸರು, 70 ಹೆ. ಅಲಸಂದಿ, 50 ಹೆ. ಅವರೆ, 35 ಹೆ. ಮಡಿಕೆ, 650 ಹೆ. ಶೇಂಗಾ, 700 ಹೆ. ಸೂರ್ಯಕಾಂತಿ, 3000 ಹೆ. ಸೋಯಾಆವರೆ, 100 ಹೆ. ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ. 13910 ಹೆ. ಸಿರಿಧಾನ್ಯ,7575 ಹೆ. ಕಾಳುಗಳು, 21,485 ಹೆ. ಆಹಾರಧಾನ್ಯ, 100 ಹೆ. ವಾಣಿಜ್ಯ ಬೆಳೆಗಳು ಇದರಲ್ಲಿ ಸೇರಿವೆ.

ಒಣಬೇಸಾಯ

ಜಿಲ್ಲೆಯಲ್ಲಿ ಒಣಬೇಸಾಯದಲ್ಲಿ ಈ ಬಾರಿ ಹಿಂಗಾರಿ ಹಂಗಾಮಿಗೆ 1,89,7790 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 53315 ಹೆ. ಸಿರಿಧಾನ್ಯ, 126,775 ಹೆ. ಕಾಳುಗಳು, 180,090 ಹೆ. ಆಹಾರಧಾನ್ಯ, ಎಣ್ಣೆಬೀಜ-8800, 900 ಹೆ. ವಾಣಿಜ್ಯ ಬೆಳೆಗಳು ಸೇರಿವೆ. ಜೋಳ-37,500 ಹೆ., ಗೋಧಿ-15465 ಹೆ., ಸಾವೆ-350 ಹೆ., ದ್ವಿದಳ ಧಾನ್ಯ ಕಡಲೆ-115,230 ಹೆ., ಹುರುಳಿ-4234, ಉದ್ದು-55, ಹೆಸರು-6185, ಅಲಸಂದಿ-80, ಅವರೆ-20, ಮಡಿಕೆ-970, ಸೂರ್ಯಕಾಂತಿ-2800, ಸೋಯಾಅವರೆ-1000, ಕುಸುಬೆ-5000, ಹತ್ತಿ-900 ಹೆಕ್ಟೇರ್‌ ಇದರಲ್ಲಿ ಸೇರಿದೆ.

ಮುಂಗಾರಿ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಲಕ್ಷೋಪಲಕ್ಷ ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿತ್ತು. ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಆಗಸ್ಟ್‌ನಲ್ಲಿ ಹಂಗಾಮಿನ ಆರಂಭದ ದಿನಗಳಲ್ಲೇ ಸುರಿದ ಮಳೆ ಇಡೀ ಹೆಸರು ಬೆಳೆಯನ್ನು ಹಾಳು ಮಾಡಿದ್ದು, ಸಹಸ್ರಾರು ರೈತರು ತಲಾವಾರು ಲಕ್ಷೋಪಲಕ್ಷ ಬೆಳೆಹಾನಿ ಅನುಭವಿಸಿದ್ದಾರೆ. ಸಾಲದ್ದಕ್ಕೆ ಕೀಟಬಾಧೆ, ರೋಗ, ಕೀಡೆ ಹೀಗೆ ಈ ಬಾರಿ ಹೆಸರು ಬಿತ್ತಿದವರು ಭಾರೀ ಪ್ರಮಾಣದಲ್ಲಿ ಕೈಸುಟ್ಟುಕೊಂಡಿದ್ದು, ಈಗ ಅದೇ ಹೊಲಗಳಲ್ಲಿ ಕಡಲೆ ಬಿತ್ತನೆಗೆ ಮುಂದಾಗಿದ್ದಾರೆ.

ಕಡಲೆ ಉತ್ತರ ಕರ್ನಾಟಕದ ಬಹುಮುಖ್ಯವಾದ ದ್ವಿದಳ ಧಾನ್ಯ ಬೆಳೆಯಾಗಿದ್ದು, ಹೆಚ್ಚಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 95ರಿಂದ 105 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕ್ವಿಂಟಲ್‌ 6ರಿಂದ 6500 ರು. ಬೆಲೆ ಸಿಗುತ್ತಿರುವುದರಿಂದ ಇಳುವರಿಯೂ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಸಹಜವಾಗಿಯೇ ರೈತರು ಆಕರ್ಷಿತರಾಗಿದ್ದಾರೆ. ನೀರಾವರಿ ಕ್ಷೇತ್ರದಲ್ಲಿ 6770 ಹೆ., ಒಣಬೇಸಾಯದಲ್ಲಿ 115,230 ಹೆಕ್ಟೇರ್‌ ಸೇರಿ ಒಟ್ಟು 122,000 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, ಒಟ್ಟು ಬಿತ್ತನೆ 2,15,725 ಹೆಕ್ಟೇರ್‌ ಪೈಕಿ ಅರ್ಧಕ್ಕೂ ಹೆಚ್ಚಿನ ಕ್ಷೇತ್ರದಲ್ಲಿ ಕಡಲೆ ಬಿತ್ತನೆ ಗುರಿ ಹೊಂದಿರುವುದು ವಿಶೇಷ.

ಉತ್ತರ ಕರ್ನಾಟಕ ಪ್ರಮುಖ ಆಹಾರದ ಬೆಳೆಯಾದ ಜೋಳ 37,000 ಹೆಕ್ಟೇರ್‌ ಗುರಿ ಇದ್ದು, ಬಹುತೇಕ ರೈತರು ತಮ್ಮ ಒಟ್ಟು ಜಮೀನಿನ ಪೈಕಿ ಎರಡ್ಮೂರು ಎಕರೆ ಪ್ರದೇಶದಲ್ಲಿ ಇಲ್ಲವೇ ತಮ್ಮ ಮನೆಗೆ ವರ್ಷಕ್ಕೆ ಆಗುವಷ್ಟು ಮಾತ್ರ ಜೋಳ ಬಿತ್ತನೆ ಮಾಡುತ್ತಾ ಬಂದಿದ್ದಾರೆ.

ಉಳಿದಂತೆ ಕೇಂದ್ರ ಸರ್ಕಾರ ಕುಸುಬೆಗೆ ಅತಿ ಹೆಚ್ಚು ಅಂದರೆ ಈ ಬಾರಿ ಕ್ವಿಂಟಲ್‌ಗೆ 6540 ರು. ವರೆಗೂ ಬೆಂಬಲ ಬೆಲೆ ಘೋಷಿಸಿದ್ದರೂ ರೈತರು ಕುಸುಬೆ ಬೇಸಾಯಕ್ಕೆ ಆದ್ಯತೆ ನೀಡಲು ಮುಂದೆ ಬರುತ್ತಿಲ್ಲ ಎಂಬುದು ಅಂಕಿಸಂಖ್ಯೆಗಳಿಂದ ಗೋಚರವಾಗುತ್ತಿದೆ. ಗೋದಿಯನ್ನು ಕಡಲೆ ಹಾಗೂ ಕುಸುಬೆ ಜತೆಗೆ ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ.ಎರಡ್ಮೂರು ದಿನಗಳಿಂದ ಒಣಹವೆ ಹಿನ್ನೆಲೆಯಲ್ಲಿ ಧಾರವಾಡ ತಾಲೂಕು ಸೇರಿದಂತೆ ಅಲ್ಲಲ್ಲಿ ಹೊಲ ಸಿದ್ಧ ಮಾಡಿಕೊಂಡಿರುವ ರೈತರು ಕಡಲೆ ಬಿತ್ತನೆ ಆರಂಭಿಸಿದ್ದಾರೆ. ಮಳೆ ಸಂಪೂರ್ಣ ನಿಂತು ಹೀಗೆ ಒಣಹವೆ ಇದ್ದಲ್ಲಿ ದೀಪಾವಳಿ ಬಳಿಕ ಭರ್ಜರಿ ಹಿಂಗಾರಿ ಬಿತ್ತನೆಯಾಗಲಿದೆ. ಮಾಸಾಂತ್ಯಕ್ಕೆ ಕಡಲೆ ಬಿತ್ತನೆ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ, ಧಾರವಾಡಎರಡು ದಿನಗಳಿಂದ ಕಡಲೆ ಬೀಜಗಳ ಬಿತ್ತನೆ ಕಾರ್ಯ ಆರಂಭಿಸಿದ್ದೇವೆ. ಬಿತ್ತನೆಗೆ ಹದ ಬರುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈತರು ನಮ್ಮಲ್ಲಿ ಇನ್ನು ಬಿತ್ತನೆ ಕಾರ್ಯವನ್ನು ಆರಂಭಿಸಬೇಕಾಗಿದೆ. ನಂಬಿಕೆಟ್ಟವರಿಲ್ಲವೋ ಮಣ್ಣನ್ನು ಎಂಬಂತೆ ಈ ಬಾರಿಯಾದರೂ ಉತ್ತಮ ಬೆಳೆ ಬಂದು ಭೂಮಿತಾಯಿ ಕೈಹಿಡಿಯಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ.

ಗೋವಿಂದರಡ್ಡಿ ಎಚ್‌. ನೇಗಲಿ, ತುಪ್ಪದಕುರಹಟ್ಟಿ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌