ಅಣ್ಣಾಸಾಹೇಬ ಜೊಲ್ಲೆ ಸಹಕಾರ ಕ್ಷೇತ್ರದ ಆದರ್ಶ

KannadaprabhaNewsNetwork | Published : Apr 5, 2025 12:47 AM

ಸಾರಾಂಶ

ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 5 ದಿನಗಳವರೆಗೆ ನಡೆಯಲಿರುವ ಕೃಷಿ ಉತ್ಸವವನ್ನು ಅದೃಶ್ಯ ಕಾಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಮುರಿದು ಬಿದ್ದ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸಹಕಾರ ಕ್ಷೇತ್ರದಲ್ಲಿ ಒಂದು ಆದರ್ಶ ಸ್ಥಾಪಿಸುತ್ತಿದ್ದಾರೆ. ಸಂಕೇಶ್ವರದ ಸಕ್ಕರೆ ಕಾರ್ಖಾನೆಯ ವೈಭವವನ್ನು ಅವರು ಮರಳಿ ತರಲಿದ್ದಾರೆ ಎಂದು ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕನೇರಿಯ ಸಿದ್ಧಗಿರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನುಡಿದರು.

ಜೊಲ್ಲೆ ಗ್ರುಪ್‌ದಿಂದ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ, ಬೀರೇಶ್ವರ ಸಹಕಾರ ಸಂಘ ಹಾಗೂ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಐದು ದಿನಗಳವರೆಗೆ ನಡೆಯುತ್ತಿರುವ ಕೃಷಿ ಉತ್ಸವ -2025ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಜೊಲ್ಲೆ ದಂಪತಿ ನೇತೃತ್ವದಲ್ಲಿ ನಡೆಯುತ್ತಿರುವ ನಿಪ್ಪಾಣಿ ಕೃಷಿ ಉತ್ಸವವು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಲಿದೆ. ಈ ಕೃಷಿ ಉತ್ಸವ ರೈತರಿಗೆ ಮಾರ್ಗದರ್ಶಿಯಾಗಲಿದೆ. ಈ ಉತ್ಸವದ ಮೂಲಕ ಅವರು ನೂತನ ತಂತ್ರಜ್ಞಾನದೊಂದಿಗೆ ರೈತರಿಗೆ ಉತ್ತೇಜನ ನೀಡಲು ಹಾಗೂ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ರಾಜಕಾರಣಕ್ಕಿಂತಲೂ ಉದ್ಯೋಗ, ಬೇಸಾಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವುದು ಅಣ್ಣಾಸಾಹೇಬ ಜೊಲ್ಲೆಯವರು ಮೈಗೂಡಿಸಿಕೊಂಡಿದ್ದಾರೆ. ಜೊಲ್ಲೆ ದಂಪತಿ ಜನಸೇವೆಗಾಗಿ ಜನಿಸಿರುವುದು ಅವರ ಕಾರ್ಯದಿಂದ ತಿಳಿಯುತ್ತದೆ. ಇಲ್ಲಿ ಕೃಷಿ ವಸ್ತುಪ್ರದರ್ಶನ ವಿಶಿಷ್ಟವಾಗಿದ್ದು, ನಗರದ ರೈತರು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ರೈತರು, ಮಹಿಳೆಯರು, ವೃದ್ಧರು ನೋಡಬೇಕಾದ ವಸ್ತು ಪ್ರದರ್ಶನ ಇದಾಗಿದೆ. ಉತ್ಸವದಲ್ಲಿ ಮನೋರಂಜನಾ ಕಾರ್ಯಕ್ರಮಗಳಿವೆ. ಮಕ್ಕಳಿಗಾಗಿ ಅಮ್ಯೂಜ್‌ಮೆಂಟ್ ಪಾರ್ಕ್ ಇದೆ. ಪ್ರತಿಯೊಬ್ಬರೂ ಒಮ್ಮೆಯಾದರೂ ಪ್ರದರ್ಶನಕ್ಕೆ ಭೇಟಿ ನೀಡಬೇಕು ಎಂದರು. ನಿಡಸೋಸಿಯ ಸಿದ್ಧಸಂಸ್ಥಾನಮಠದ ನಿಜಲಿಂಗೇಶ್ವರ ಸ್ವಾಮೀಜಿ, ಮಾಜಿ ಶಾಸಕ ಸುರೇಶ ಹಳವಣಕರ, ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ವಿರುಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಆರಂಭದಲ್ಲಿ ಸ್ವಾಮೀಜಿ ಹಾಗೂ ಜೊಲ್ಲೆ ದಂಪತಿ ಎತ್ತಿನಗಾಡಿಯಲ್ಲಿ ಬಂದು ಕೃಷಿ ಉತ್ಸವದ ಕಮಾನಿನ ಉದ್ಘಾಟನೆ ನೆರವೇರಿಸಿದರು. ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಡಾ.ನಾರಾಯಣ ಸ್ವಾಮಿ ಅವರು ಸಕ್ಕರೆಯಲ್ಲಿನ ಪೌಷ್ಟಿಕಾಂಶದ ಅಂಶಗಳ ಕುರಿತು ಉಪನ್ಯಾಸ ನೀಡಿದರು. ಸಂಜೆ ಸಂತರ ಅಭಂಗ ಆಧಾರಿತ ಆಧುನಿಕ ಸಂಗೀತ ಕಾರ್ಯಕ್ರಮ ಅಭಂಗ ರೀಪೋಸ್ಟ್ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಜೊಲ್ಲೆ ಗ್ರುಪ್ ಸಂಸ್ಥಾಪಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಅಧ್ಯಕ್ಷೆ ಸೋನಲ್ ಕೋಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಜ್ಯೋತಿಪ್ರಸಾದ ಜೊಲ್ಲೆ, ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ಮಾಜಿ ಸಂಸದ ಅಮರಸಿಂಹ ಪಾಟೀಲ, ಕ್ಯಾನರಾ ಬ್ಯಾಂಕ್ ಎಜಿಎಂ ಕಾರ್ತಿಕ, ಬೀರೇಶ್ವರ ಸಹಕಾರಿಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ಕೃಷಿ ವಿಭಾಗದ ವಿವಿಧೆಡೆಯ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. ಜೊಲ್ಲೆ ಗ್ರುಪ್‌ನ ವೈಸ್-ಚೇರಮನ್ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ರಮೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share this article